Mohammed Zubair and Allahabad High Court, Lucknow Bench
Mohammed Zubair and Allahabad High Court, Lucknow Bench  
ಸುದ್ದಿಗಳು

ಉತ್ತರಪ್ರದೇಶ ಪೊಲೀಸರ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಪತ್ರಕರ್ತ ಜುಬೈರ್

Bar & Bench

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಉತ್ತರ ಪ್ರದೇಶದ ಸೀತಾಪುರ ಠಾಣೆ ಪೊಲೀಸರು ತಮ್ಮ ವಿರುದ್ಧ ಹೂಡಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಪತ್ರಕರ್ತ, ಆಲ್ಟ್‌ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠದೆದುರು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೇಸ್‌ ಪ್ರಕರಣ ಪ್ರಸ್ತಾಪಿಸಿದರು.

“ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದು ಜುಬೈರ್‌ ಕೆಲಸ. ಅವರಿಗೆ ಕೊಲೆ ಬೆದರಿಕೆ ಇದೆ. ದ್ವೇಷ ಭಾಷಣ ಮಾಡುವ ಮಂದಿ ಅವರನ್ನು ಕೊಲ್ಲಬಹುದು” ಎಂದು ಗೊನ್ಸಾಲ್ವೇಸ್‌ ಪೀಠಕ್ಕೆ ವಿವರಿಸಿದರು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಸಮ್ಮತಿಗೊಳಪಟ್ಟು ಪ್ರಕರಣದ ವಿಚಾರಣೆಯನ್ನು ನಾಳೆಗೆ ಪಟ್ಟಿ ಮಾಡುವಂತೆ ನ್ಯಾಯಾಲಯ ತಿಳಿಸಿತು.

ಮಹಂತ್ ಬಜರಂಗ ಮುನಿ, ಯತಿ ನರಸಿಂಗಾನಂದ್ ಮತ್ತು ಸ್ವಾಮಿ ಆನಂದ್ ಸ್ವರೂಪ್ ಅವರನ್ನು 'ದ್ವೇಷಪಸರಿಸುವವರು' ಎಂದು ಉಲ್ಲೇಖಿಸಿ ಟ್ವೀಟ್ ಮಾಡಿದ್ದನ್ನು ಆಧರಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಡಿ ಉತ್ತರ ಪ್ರದೇಶ ಪೊಲೀಸರು ಜುಬೈರ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ರದ್ದುಗೊಳಿಸುವಂತೆ ಕೋರಿ ಜುಬೈರ್‌, ಅಲಾಹಾಬಾದ್‌ ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿ ತಿರಸ್ಕೃತವಾಗಿತ್ತು. ಈ ಪ್ರಕರಣದಲ್ಲಿ ಅವರು ಜಾಮೀನು ಕೋರಿದ್ದಾರೆ.

ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತಿದ ಆರೋಪದಡಿ ದೆಹಲಿ ಪೊಲೀಸರು ಹೂಡಿರುವ ಪ್ರಕರಣದಲ್ಲಿ ಜುಬೈರ್‌ ಈಗಾಗಲೇ ಸೆರೆವಾಸ ಅನುಭವಿಸುತ್ತಿದ್ದಾರೆ. ಇದು 2018ರಲ್ಲಿ ಅವರು ಮಾಡಿದ್ದ ಟ್ವೀಟ್‌ ಒಂದನ್ನು ಆಧರಿಸಿದೆ.