Supreme Court of India
Supreme Court of India  
ಸುದ್ದಿಗಳು

ಅಂತಾರಾಷ್ಟ್ರೀಯ ಮಾದಕವಸ್ತು ಜಾಲ ಭೇದಿಸಿ, ಸಣ್ಣಪುಟ್ಟ ದಂಧೆಕೋರರನ್ನಲ್ಲ: ತನಿಖಾ ಸಂಸ್ಥೆಗೆ ಸುಪ್ರೀಂ ಕಿವಿಮಾತು

Bar & Bench

ಸಣ್ಣಪ್ರಮಾಣದ ಮಾದಕವಸ್ತು ದಂಧೆಕೋರರನ್ನು ಹಿಡಿಯವ ಬದಲು ಅಂತಾರಾಷ್ಟ್ರೀಯ ಮಾದಕದ್ರವ್ಯ ಜಾಲಗಳ ಬೆನ್ನತ್ತಲು ಕಾನೂನು ಜಾರಿ ಸಂಸ್ಥೆಗಳು ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕು ಎಂದು ತನಿಖಾ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಕಿವಿಮಾತು ಹೇಳಿದೆ [ಸಬೀರ್‌ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಅಂತಾರಾಷ್ಟ್ರೀಯ ಜಾಲಗಳನ್ನು ನಡೆಸುತ್ತಿರುವ ನಿಜವಾದ ಅಪರಾಧಿಗಳ ಬಗ್ಗೆ ಸರ್ಕಾರ ಏನು ಮಾಡುತ್ತಿದೆ? ಅದು ಸಣ್ಣ ವ್ಯಾಪಾರಿಗಳು (ಅಮಲು ಪದಾರ್ಥಗಳನ್ನು ಬೆಳೆಯುವ) ರೈತರನ್ನು ಹಿಡಿಯುತ್ತಿದೆಯೇ ವಿನಾ ನಿಜವಾದ ಅಪರಾಧಿಗಳನ್ನಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಅಸಮಾಧಾನ ಹೊರಹಾಕಿತು.

ಅಫೀಮು ದೊರೆತ ಹಿನ್ನೆಲೆಯಲ್ಲಿ ಮಾದಕವಸ್ತು ಮತ್ತು ಅಮಲು ಪದಾರ್ಥ ಕಾಯಿದೆಯಡಿ ಆರೋಪ ಎದುರಿಸುತ್ತಿದ್ದ ದಂಧೆಕೋರನೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅಫೀಮು ಕಾರು ಅಥವಾ ಟ್ರಕ್‌ನಲ್ಲಿ ಕಂಡುಬಂದಿಲ್ಲ. ಬದಲಿಗೆ ಆತನ ಕೃಷಿಭೂಮಿಯಲ್ಲಿ ಕಂಡುಬಂದಿದೆ. ಈಗಾಗಲೇ ಆತನಿಗೆ ಎರಡು ಬಾರಿ ಶಿಕ್ಷೆಯಾಗಿದೆ. ಹೀಗಾಗಿ ಜಾಮೀನು ಮನವಿ ತಿರಸ್ಕರಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ವಿಕ್ರಮಜಿತ್ ಬ್ಯಾನರ್ಜಿ ಅವರು ಕೋರಿದರು.

ಆದರೆ ಇದನ್ನು ಒಪ್ಪದ ನ್ಯಾಯಾಲಯ ಗರಿಷ್ಠ ಹತ್ತು ವರ್ಷ ಶಿಕ್ಷೆ ವಿಧಿಸಬಹುದಾದ ಪ್ರಕರಣದಲ್ಲಿ ಈಗಾಗಲೇ ಆರೋಪಿ ಐದು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾನೆ. ಹೀಗಾಗಿ ಆತ ಜಾಮೀನು ಪಡೆಯಲು ಅರ್ಹ ಎಂದಿತು.