Rahul Gandhi, Sonia Gandhi and National Herald facebook
ಸುದ್ದಿಗಳು

[ಎಜೆಎಲ್‌ ಪ್ರಕರಣ] ₹2,000 ಕೋಟಿ ಮೌಲ್ಯದ ಆಸ್ತಿ ಮಾಲೀಕತ್ವವನ್ನು ₹50 ಲಕ್ಷಕ್ಕೆ ಪಡೆದ ರಾಹುಲ್‌, ಸೋನಿಯಾ: ಇ ಡಿ ಆರೋಪ

ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಪಿಸಿ ಕಾಯ್ದೆ) ವಿಶಾಲ್ ಗೋಗ್ನೆ ಅವರೆದುರು ಇ ಡಿ ವಾದ ಮಂಡಿಸಿತು.

Bar & Bench

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ, ₹2,000 ಕೋಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ (ಎಜೆಎಲ್) ಕಂಪೆನಿಯ ಸಂಪೂರ್ಣ ಮಾಲೀಕತ್ವವನ್ನು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೇವಲ ₹50 ಲಕ್ಷ ಪಾವತಿಸಿ ಪಡೆದುಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ದೆಹಲಿಯ ವಿಶೇಷ ನ್ಯಾಯಾಲಯದಲ್ಲಿ ಗಂಭೀರ ಆರೋಪ ಮಾಡಿದೆ.   

ದೆಹಲಿ, ಲಖನೌ, ಭೋಪಾಲ್, ಇಂದೋರ್, ಪಂಚಕುಲ, ಪಾಟ್ನಾ ಮತ್ತಿತರ ಸ್ಥಳಗಳಲ್ಲಿ ಎಜೆಎಲ್ ಆಸ್ತಿ ಹೊಂದಿದ್ದು, ಈ ಎಲ್ಲಾ ಆಸ್ತಿಗಳನ್ನು 1947ರ ನಂತರ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಪತ್ರಿಕೆ ಮುದ್ರಣ ಮತ್ತು ಪ್ರಕಟಣೆಗಾಗಿ ಒದಗಿಸಿದ್ದವು. ಆದರೆ ಎಜೆಎಲ್‌ ಸಂಸ್ಥೆಯ ಮಾಲೀಕತ್ವವನ್ನು ವಹಿಸಿಕೊಂಡ ಕೂಡಲೇ ಗಾಂಧಿ ಕುಟುಂಬವು ನಿರ್ವಹಣೆ ಮಾಡುವ ನಿರ್ವಹಿಸುವ ಘಟಕವಾದ ಯಂಗ್‌ ಇಂಡಿಯನ್‌ ಸೇರಿದಂತೆ ಪತ್ರಿಕಾ ಪ್ರಕಟಣೆಯಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಘೋಷಿಸಿತು. ₹2000 ಕೋಟಿ ಮೌಲ್ಯದ ಸಂಪೂರ್ಣ ಕಂಪನಿಯನ್ನು ಖರೀದಿಸಲು ಗಾಂಧಿ ಕುಟುಂಬ ₹50 ಲಕ್ಷ ಪಾವತಿಸಿದೆ ಎಂದು ಇ ಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ ವಿ ರಾಜು ವಾದ ಮಂಡಿಸಿದರು.

ದೆಹಲಿಯ ರೌಸ್ ಅವೆನ್ಯೂ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರೆದುರು ಇ ಡಿ ವಾದ ಮಂಡನೆ ಮಾಡಿತು.  

ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಪ್ರಾಸಿಕ್ಯೂಷನ್ ದೂರನ್ನು ತಾನು ವಿಚಾರಣೆಗೆ ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ಕುರಿತಾದ ವಾದಗಳನ್ನು ನ್ಯಾಯಾಲಯ ಆಲಿಸುತ್ತಿದೆ.

ವಿಚಾರಣೆಯ ವೇಳೆ, ಗಾಂಧಿಯವರ ಆಪ್ತರನ್ನು ಎಜೆಎಲ್‌ನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಮತ್ತು ಹಣ ವಿನಿಮಯಕ್ಕಾಗಿ ವಂಚನೆಯ ವಹಿವಾಟು ಮಾಡಲಾಗಿದೆ ಎಂದು ಎಎಸ್‌ಜಿ ಹೇಳಿದರು.  ಇಂದು ಕೂಡ (ಗುರುವಾರ) ಪ್ರಕರಣದ ವಿಚಾರಣೆ ಮುಂದುವರೆಯಲಿದೆ.  

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ (ಎಜೆಎಲ್‌) ಕಾಂಗ್ರೆಸ್‌ ಪಕ್ಷ ₹ 90 ಕೋಟಿಯಷ್ಟು ಸಾಲ ನೀಡಿತ್ತು. ಯಂಗ್‌ ಇಂಡಿಯಾ ಸಂಸ್ಥೆ ಕಾಂಗ್ರೆಸ್‌ಗೆ ಕೇವಲ ₹50 ಲಕ್ಷ ಹಣ ನೀಡಿ ಎಜೆಎಲ್‌ ಕಾಂಗ್ರೆಸ್‌ಗೆ ನೀಡಬೇಕಿದ್ದ ₹ 90 ಕೋಟಿಯಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು ಎಂಬುದು ಹಗರಣದ ಸಾರ. ಈಕ್ವಿಟಿ ವಹಿವಾಟಿನಲ್ಲಿ ₹2,000 ಕೋಟಿಗೂ ಅಧಿಕ ಆಸ್ತಿ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು. 

ಸೋನಿಯಾ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ - ಯಂಗ್ ಇಂಡಿಯನ್ ಲಿಮಿಟೆಡ್‌ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡಿದ್ದರು.