<div class="paragraphs"><p>Justice L Nageswara Rao</p></div>

Justice L Nageswara Rao

 
ಸುದ್ದಿಗಳು

ಮಧ್ಯಸ್ಥಿಕೆ ವ್ಯಾಜ್ಯ ತ್ವರಿತ ಪರಿಹಾರ: ವಿಶೇಷ ನ್ಯಾಯಾಲಯಗಳು ಅಗತ್ಯ: ನ್ಯಾ. ಎಲ್ ನಾಗೇಶ್ವರ ರಾವ್

Bar & Bench

ದುಬೈನಲ್ಲಿ ಶನಿವಾರ ನಡೆದ ʼಜಾಗತೀಕರಣದ ಯುಗದಲ್ಲಿ ಮಧ್ಯಸ್ಥಿಕೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದ ನಾಲ್ಕನೇ ಆವೃತ್ತಿʼಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್, ಮಧ್ಯಸ್ಥಿಕೆ ವ್ಯಾಜ್ಯಗಳನ್ನು ತ್ವರಿತವಾಗಿ ನಿಭಾಯಿಸುವುದಕ್ಕೆಂದು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ʼಗಡಿಯಾಚೆಗಿನ ವ್ಯಾಜ್ಯಗಳಲ್ಲಿನ ಸವಾಲುಗಳು: ಮುಂದಿನ ದಾರಿʼ ಎಂಬ ವಿಚಾರವಾಗಿ ಮಾತನಾಡಿದ ನ್ಯಾ. ರಾವ್, ಕೆಳ ಹಂತ ಮತ್ತು ಹೈಕೋರ್ಟ್‌ ಮಟ್ಟದಲ್ಲಿ ಕೂಡ ತರಬೇತಿ ಪಡೆದ ನ್ಯಾಯಾಧೀಶರಿರುವ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದರಿಂದ ಮಧ್ಯಸ್ಥಿಕೆ ವ್ಯಾಜ್ಯಗಳ ತ್ವರಿತ ಮತ್ತು ಪರಿಣಾಮಕಾರಿ ಪರಿಹಾರವ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಧ್ಯಸ್ಥಗಾರರ ನೇಮಕಕ್ಕೆ ಸಂಬಂಧಿಸಿದ ಅರ್ಜಿಗಳು ಕೂಡ ಹೈಕೋರ್ಟ್‌ಗಳಲ್ಲಿ ದೀರ್ಘಕಾಲದಿಂದ ಇತ್ಯರ್ಥವಾಗದೇ ಇರುವುದನ್ನು ನಾನು ನೋಡಿದ್ದೇನೆ ಎಂದು ನ್ಯಾ. ರಾವ್ ಈ ಸಂದರ್ಭದಲ್ಲಿ ತಿಳಿಸಿದರು. ವ್ಯಾಪಾರದ ಬೆಳವಣಿಗೆ ಮತ್ತು ಆರ್ಥಿಕತೆಯ ಜಾಗತೀಕರಣದಿಂದಾಗಿ, ವಿಶೇಷವಾಗಿ ಭಾರತದಲ್ಲಿ, ವಾಣಿಜ್ಯ ಕ್ಷೇತ್ರ ಹಲವು ಪಟ್ಟು ವೃದ್ಧಿಸಿದೆ ಎಂದು ಅವರು ಗಮನ ಸೆಳೆದರು.

“ವ್ಯಾಜ್ಯ ಪರಿಹಾರ ಕೂಡ ದಾವೆಯನ್ನು ಅವಲಂಬಿಸಿದ್ದು ಗಡಿಯಾಚೆಗಿನ ವಿವಾದಗಳನ್ನು ಪರಿಹರಿಸಲು ಇದು ಉತ್ತಮ ಮಾರ್ಗವಾಗಿದೆ. 2021ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಶೇ 90 ಕ್ಕಿಂತ ಹೆಚ್ಚು ಮಂದಿ ಅಂತರರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆಗೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.

ಭಾರತ ದೀರ್ಘಕಾಲ ಮಧ್ಯಸ್ಥಿಕೆ ಪರ ದೇಶವಾಗಿ ಇರಲಿಲ್ಲ ಎಂದು ಅವರು ಆದರೂ, ಇತ್ತೀಚಿನ ದಿನಗಳಲ್ಲಿ, ಮಧ್ಯಸ್ಥಿಕೆ ಕ್ಷೇತ್ರಕ್ಕೆ ಎಲ್ಲಾ ಕಡೆಗಳಿಂದಲೂ ಪ್ರೋತ್ಸಾಹ ದೊರೆಯುತ್ತಿದೆ ಎಂದು ವಿವರಿಸಿದರು. ಬದಲಾದ ಕಾಲ ಘಟ್ಟದಲ್ಲಿ ಮಧ್ಯಸ್ಥಿಕೆ ಕ್ಷೇತ್ರ ಬಲಪಡಿಸಬೇಕಾದ ಅಗತ್ಯವನ್ನು ಕಾರ್ಯಾಂಗ ಮತ್ತು ಸಂಸದೀಯ ಆಡಳಿತ ಕೂಡ ಗಮನಿಸಿವೆ ಎಂದು ತಿಳಿಸಿದರು.

ಮಧ್ಯಸ್ಥಿಕೆ ವಿಷಯಗಳ ಮೇಲೆ ನ್ಯಾಯಾಲಯಗಳ ಮೇಲ್ವಿಚಾರಣೆ ಮತ್ತು ಭಾರತದಲ್ಲಿ ಅಂತರಾಷ್ಟ್ರೀಯ ತೀರ್ಪುಗಳನ್ನು ಜಾರಿಗೊಳಿಸುವ ಬಗ್ಗೆ ಮಾತನಾಡಿದ ನ್ಯಾ. ರಾವ್, ಹಿಂದೆ, ನ್ಯಾಯಾಲಯಗಳಿಂದ ಅನಗತ್ಯ ಹಸ್ತಕ್ಷೇಪವಿತ್ತು. ಇದು ಅನಗತ್ಯ ವಿಳಂಬಕ್ಕೆ ಕಾರಣವಾಯಿತು ಎಂದು ವಿವರಿಸಿದರು.

ಮಧ್ಯಸ್ಥಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಸವಾಲುಗಳಿವೆ ಎಂದು ಒಪ್ಪಿಕೊಂಡ ನ್ಯಾ. ರಾವ್ ದೇಶದಾದ್ಯಂತ ನ್ಯಾಯಾಲಯಗಳು ಅಳವಡಿಸಿಕೊಂಡಿರುವ ಮಧ್ಯಸ್ಥಿಕೆ ಪರ ಧೋರಣೆ ನ್ಯಾಯಾಂಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ಭಾರತವನ್ನು ಹೆಚ್ಚು ಹೂಡಿಕೆದಾರ ಸ್ನೇಹಿಯನ್ನಾಗಿ ಮಾಡುತ್ತದೆ ಎಂದರು.