ನವಜೋತ್ ಸಿಂಗ್ ಸಿಧು, ಪಾಟ್ನಾ ಹೈಕೋರ್ಟ್
ನವಜೋತ್ ಸಿಂಗ್ ಸಿಧು, ಪಾಟ್ನಾ ಹೈಕೋರ್ಟ್ ನವಜೋತ್ ಸಿಂಗ್ ಸಿಧು (ಫೇಸ್ಬುಕ್)
ಸುದ್ದಿಗಳು

ಕಾಂಗ್ರೆಸ್‌ಗೆ ಸಾಮೂಹಿಕವಾಗಿ ಮತ ಹಾಕಲು ಮುಸ್ಲಿಮರಿಗೆ ಮನವಿ: ಸಿಧು ವಿರುದ್ಧ ಪ್ರಕರಣ ರದ್ದುಪಡಿಸಿದ ಪಾಟ್ನಾ ಹೈಕೋರ್ಟ್

Bar & Bench

ಲೋಕಸಭಾ ಚುನಾವಣೆ ವೇಳೆ ಧರ್ಮದ ಆಧಾರದ ಮೇಲೆ ಮತಯಾಚಿಸಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಮತ್ತು ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ವಿರುದ್ಧ ಪ್ರಾರಂಭಿಸಲಾದ ಕ್ರಿಮಿನಲ್ ವಿಚಾರಣೆಯನ್ನು ಪಾಟ್ನಾ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ.

ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮುಸ್ಲಿಂ ಮತಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾತ್ರ ಸಿಧು ಹೇಳಿದ್ದಾರೆ ಎಂದು ನ್ಯಾಯಮೂರ್ತಿ ಸಂದೀಪ್ ಕುಮಾರ್ ಅಂತಿಮವಾಗಿ ತೀರ್ಮಾನಿಸಿದರು.

ಸಿಧು ಅವರು ಸಾಮರಸ್ಯವನ್ನು ಕದಡುವಂತಹ ಹೇಳಿಕೆಯನ್ನಾಗಲಿ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಹೇಳಿಕೆಯನ್ನಾಗಲಿ ನೀಡಿಲ್ಲ ಎನ್ನುವುದನ್ನು ನ್ಯಾಯಾಲಯ ಕಂಡುಕೊಂಡಿತು. 

"ಭಾಷಣದ ವಿಷಯದಿಂದ, ಅರ್ಜಿದಾರರು ಎರಡು ವರ್ಗಗಳ ಜನರು ಅಥವಾ ಎರಡು ಧರ್ಮಗಳ ನಡುವೆ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದ್ದಾರೆ ಎಂದು ತೋರುವುದಿಲ್ಲ, ಆದರೆ ವಾಸ್ತವವಾಗಿ ಅವರು ಓವೈಸಿ ಮುಸ್ಲಿಮರ ಮತಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾತ್ರ ಹೇಳಿದ್ದಾರೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಿಧು ಅವರ ಹೇಳಿಕೆಯು ಯಾವುದೇ ಕೋಮು ಉದ್ವಿಗ್ನತೆ ಅಥವಾ ಹಿಂಸಾಚಾರವನ್ನು ಚಿತ್ರಿಸುವುದಿಲ್ಲ ಆದರೆ ಓವೈಸಿಯ ಕೋರಿಕೆಯ ಮೇರೆಗೆ ತಮ್ಮ ಮತಗಳು ವಿಭಜನೆಗೊಳ್ಳುವ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ನೀಡಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ, ಸಿಧು ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳಿದ್ದಾರೆ ಎಂಬ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿತು. 

ಹಿನ್ನೆಲೆ: ಪ್ರಕರಣವು 2019ರ ಏಪ್ರಿಲ್‌ ವೇಳೆ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಸಿಧು ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದ್ದಾಗಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಲು ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಮತ್ತು ಓವೈಸಿಗೆ ಮತ ಹಾಕುವ ಮೂಲಕ ತಮ್ಮ ಮತಗಳನ್ನು ವಿಭಜನೆಗೊಳ್ಳದಂತೆ ಸಿಧು ಮುಸ್ಲಿಂ ಮತದಾರರಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿತ್ತು.

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಜನ ಪ್ರಾತಿನಿಧ್ಯ ಕಾಯ್ದೆ (ಆರ್‌ಪಿ ಕಾಯ್ದೆ) ನಿಬಂಧನೆಗಳ ಅಡಿಯಲ್ಲಿ ಬಿಹಾರ ಪೊಲೀಸರು 2019 ರ ಏಪ್ರಿಲ್ 16 ರಂದು ಸಿಧು ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಧರ್ಮದ ಆಧಾರದಲ್ಲಿ ಸಿಧು ಯಾವುದೇ ಹೇಳಿಕೆ ನೀಡಿಲ್ಲ ಎಂದು ತೀರ್ಮಾನಿಸಿದ ಹೈಕೋರ್ಟ್, ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (3) ರ ಅಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.