National Green Tribunal and Maharashtra
National Green Tribunal and Maharashtra 
ಸುದ್ದಿಗಳು

ಅಸಮರ್ಪಕ ತ್ಯಾಜ್ಯ ನಿರ್ವಹಣೆ: ₹ 12,000 ಕೋಟಿ ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಎನ್‌ಜಿಟಿ ಆದೇಶ

Bar & Bench

ಘನ ಮತ್ತು ದ್ರವ ತ್ಯಾಜ್ಯದ ಅಸಮರ್ಪಕ ನಿರ್ವಹಣೆ ಮಾಡಿದ ಮಹಾರಾಷ್ಟ್ರ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಗುರುವಾರ ಪರಿಸರ ಪರಿಹಾರವಾಗಿ ₹ 12,000 ಕೋಟಿ ಪಾವತಿಸಲು ನಿರ್ದೇಶಿಸಿದೆ.

ಎನ್‌ಜಿಟಿ ಕಾಯಿದೆಯ ಸೆಕ್ಷನ್ 15ರ ಅಡಿಯಲ್ಲಿ ಪರಿಸರಕ್ಕೆ ನಿರಂತರ ಹಾನಿ ತಪ್ಪಿಸಲು ಪರಿಹಾರ ಒದಗಿಸುವುದು ಅಗತ್ಯ ಎಂದು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾ. ಆದರ್ಶ್ ಕುಮಾರ್ ಗೋಯೆಲ್, ನ್ಯಾ. ಸುಧೀರ್ ಅಗರ್ವಾಲ್ ತಜ್ಞ ಸದಸ್ಯ ಪ್ರೊ. ಸೆಂಥಿಲ್‌ ವೇಲ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ನಿಯಮಗಳ ಜಾರಿಯನ್ನು ನ್ಯಾಯಮಂಡಳಿಯು ಮೇಲ್ವಿಚಾರಣೆ ಮಾಡುವ ಅಗತ್ಯವಿರುವ ಕುರಿತಂತೆ ಅಲ್ಮಿತ್ರ ಹೆಚ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ಮತ್ತು ಪರ್ಯಾವರಣ್‌ ಸುರಕ್ಷಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನಗಳ ಅನುಸಾರವಾಗಿ ಈ ಆದೇಶ ಜಾರಿಗೊಳಿಸಲಾಗಿದೆ.

ದ್ರವ ತ್ಯಾಜ್ಯದ ಸಂಸ್ಕರಣೆಯಲ್ಲಿನ ಲೋಪಕ್ಕೆ ಸಂಬಂಧಿಸಿದಂತೆ ಸುಮಾರು ₹ 10,840 ಕೋಟಿ ಮತ್ತು ಸಂಸ್ಕರಿಸದೆ ಉಳಿದ ಹಳೆಯ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ₹ 1,200 ಕೋಟಿ ಪರಿಹಾರ ಪಾವತಿಸಬೇಕೆಂದು ಎನ್‌ಜಿಟಿ ತೀರ್ಪು ನೀಡಿದೆ. ಎರಡೂ ಪರಿಹಾರದ ಒಟ್ಟು ಮೊತ್ತ ₹12,000 ಕೋಟಿಯಷ್ಟಾಗಲಿದೆ. ಈ ಪರಿಹಾರದ ಮೊತವನ್ನು ತ್ಯಾಜ್ಯ ಸಂಸ್ಕಾರ ಕಾರ್ಯಗಳಿಗೆ ಬಳಸಲು ಮುಖ್ಯ ಕಾರ್ಯದರ್ಶಿಯವರ ನಿರ್ದೇಶನದಂತೆ ಕಾರ್ಯ ನಿರ್ವಹಿಸುವ ಪ್ರತ್ಯೇಕ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಇಡುವಂತೆ ಅದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.