CJI DY Chandrachud
CJI DY Chandrachud 
ಸುದ್ದಿಗಳು

ಎನ್ಎಲ್‌ಯು ವಿದ್ಯಾರ್ಥಿಗಳು ಬೇರೆ ಕಾನೂನು ಶಾಲೆಗಳ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣಬಾರದು: ಸಿಜೆಐ ಚಂದ್ರಚೂಡ್

Bar & Bench

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ (ಎನ್‌ಎಲ್‌ಯು) ವಿದ್ಯಾರ್ಥಿಗಳಲ್ಲಿ ತಮ್ಮ ಅರ್ಹತೆ ಬಗ್ಗೆ ತಪ್ಪು ಪರಿಕಲ್ಪನೆ ಇದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಬೇಸರ ವ್ಯಕ್ತಪಡಿಸಿದರು.

ಎನ್‌ಎಲ್‌ಯು ವಿದ್ಯಾರ್ಥಿಗಳು ಇತರ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳನ್ನು ಕೀಳಾಗಿ ನೋಡಬಾರದು ಅಂತಹ ವಿವಿಗಳು ದ್ವೀಪಗಳಂತೆ ಕೆಲಸ ಮಾಡಬಾರದು ಎಂದು ಸಿಜೆಐ ಹೇಳಿದರು.

“ಕೆಲವನ್ನಷ್ಟೇ ಅಲ್ಲದೆ ದೇಶದಲ್ಲಿರುವ ಎಲ್ಲಾ ಕಾನೂನು ಕಾಲೇಜುಗಳಲ್ಲಿ ಸುಧಾರಣೆ ತರಬೇಕು  ಸುಧಾರಿಸಬೇಕು ಎಂಬುದು ಕಾನೂನು ಶಿಕ್ಷಣದ ದೃಷ್ಟಿಕೋನವಾಗಿದೆ. ಉಳಿದ ಸಂಸ್ಥೆಗಳಿಗಿಂತ ಎನ್‌ಎಲ್‌ಯುಗಳು ಉತ್ತಮ ಎಂಬ ನಂಬಿಕೆ ಶಕ್ತಿಯ ಅನಗತ್ಯ ವ್ಯಯಕ್ಕೆ ಕಾರಣವಾಗುತ್ತದೆ. ಎನ್‌ಎಲ್‌ಯುಗಳು ದ್ವೀಪಗಳಂತೆ ಕೆಲಸ ಮಾಡಬಾರು ಮತ್ತು (ಎನ್‌ಎಲ್‌ಯು) ವಿದ್ಯಾರ್ಥಿಗಳು ಬೇರೆ ಕಾನೂನು ಶಾಲೆಗಳ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣಬಾರದು” ಎಂದು ಸಿಜೆಐ ಹೇಳಿದರು.  

ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯ (ಎನ್‌ಎಎಲ್‌ಎಸ್‌ಎಆರ್‌- ನಾಲ್ಸಾರ್‌) ಶನಿವಾರ ಏರ್ಪಡಿಸಿದ್ದ 19ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಿಜೆಐ ಮಾತನಾಡಿದರು.

ದಮನಿತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅದರಲ್ಲಿಯೂ ವಿಶೇಷವಾಗಿ ದಲಿತರು ಮತ್ತು ಆದಿವಾಸಿಗಳ ಬಗೆಗಿನ ತಾರತಮ್ಯವನ್ನು ಸಹಾನುಭೂತಿ ಮೂಡಿಸುವ ಮೂಲಕ ತೊಡೆದುಹಾಕಬಹುದು ಎಂದ ಅವರು “…ಸಹಾನುಭೂತಿ ಎಂಬುದು ವ್ಯಕ್ತಿಗತ ಬದಲಾವಣೆಯಾಗದೆ ಸಾಂಸ್ಥಿಕ ಬದಲಾಾವಣೆಯಾಗಬೇಕಿದೆ. ಕಾನೂನು ಅರಸಿ ನ್ಯಾಯಾಲಯಕ್ಕೆ ಬರುವ ಜನರು ಕೇಸ್‌ ಡಾಕೆಟ್‌ ಮೇಲಿರುವ ಹೆಸರುಗಳು ಮಾತ್ರವೇ ಆಗಿರದೆ ನಾವು ನೋಡಲು ಬಯಸುವ ವೈಯಕ್ತಿಕ ಹೋರಾಟಗಳಿಂದಲೂ ಕೂಡಿರುತ್ತಾರೆ” ಎಂದು ತಿಳಿಸಿದರು.  

ಕಾನೂನು ಸಂವಾದದ ವಾತಾವರಣ ರೂಪಿಸುವಲ್ಲಿ ಮತ್ತು ಕಾನೂನಿನ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವಲ್ಲಿ ಯೂಟ್ಯೂಬ್‌ ರೀತಿಯ ವೇದಿಕೆಗಳ ಮಹತ್ವದ ಪಾತ್ರ ವಹಿಸುತ್ತಿದ್ದು ತಂತ್ರಜ್ಞಾನ ಎಂಬುದು ಇನ್ನು ಮುಂದೆ ಗಣ್ಯ (ಎಲೈಟ್‌) ಪರಿಕಲ್ಪನೆಯಾಗಿ ಉಳಿಯುವುದಿಲ್ಲ. ಒಂದು ವೇಳೆ ವಿದ್ಯಾರ್ಥಿಗಳು ಕಾನೂನು ಶಾಲೆಗೆ ದಾಖಲಾತಿ ಪಡೆಯದಿದ್ದರೂ ಬೋಧನೆಯನ್ನು ಆನ್‌ಲೈನ್‌ ಮೂಲಕ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ನಾಲ್ಸಾರ್‌ ಶೈಕ್ಷಣಿಕ ವೀಡಿಯೊಗಳನ್ನು ತನ್ನ ವಿದ್ಯಾರ್ಥಿಗಳಿಗಷ್ಟೇ ಸೀಮಿತಗೊಳಿಸಬಾರದು ಎಂದು ಅವರು ಸಲಹೆ ನೀಡಿದರು.