Journalists
Journalists 
ಸುದ್ದಿಗಳು

ತನಿಖಾ ಸಂಸ್ಥೆ ಎದುರು ಸುದ್ದಿಮೂಲ ಬಹಿರಂಗಪಡಿಸದಿರಲು ಪತ್ರಕರ್ತರಿಗೆ ಕಾನೂನು ವಿನಾಯ್ತಿ ಇಲ್ಲ: ದೆಹಲಿ ಕೋರ್ಟ್‌

Bar & Bench

ದೇಶದಲ್ಲಿ ತನಿಖಾ ಸಂಸ್ಥೆಗಳ ಎದುರು ಸುದ್ದಿಮೂಲ ಬಹಿರಂಗಪಡಿಸದೇ ಇರುವುದಕ್ಕೆ ಪತ್ರಕರ್ತರಿಗೆ ಯಾವುದೇ ಶಾಸನಾತ್ಮಕ ವಿನಾಯಿತಿ ಇಲ್ಲ ಎಂದು ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯ ಸುಳ್ಳು ಸುದ್ದಿ ಎನ್ನಲಾದ ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ ತಿಳಿಸಿದೆ [ಸಿಬಿಐ ಮತ್ತು ಕ್ಲೋಶರ್‌ ರಿಪೋರ್ಟ್‌ ನಡುವಣ ಪ್ರಕರಣ].

ಕ್ರಿಮಿನಲ್ ಪ್ರಕರಣದ ತನಿಖೆಯಲ್ಲಿ ನೆರವು ನೀಡುವ ಸ್ಥಿತಿ ಎದುರಾದರೆ ಆಗ ದೇಶದ ಪತ್ರಕರ್ತರು ತಮ್ಮ ಸುದ್ದಿಮೂಲವನ್ನು ತನಿಖಾ ಸಂಸ್ಥೆಗಳಿಗೆ ವಿವರಿಸುವುದೇ ಇರುವುದರಿಂದ ಯಾವುದೇ ಶಾಸನಬದ್ಧ ವಿನಾಯಿತಿ ಇರದು” ಎಂದು ನ್ಯಾಯಾಲಯ ಮಂಗಳವಾರ ತನ್ನ ಆದೇಶದಲ್ಲಿ ವಿವರಿಸಿದೆ.

ಪತ್ರಕರ್ತರು ತಮ್ಮ ಸುದ್ದಿಮೂಲಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಕಾರಣ ತನಿಖೆ ಸ್ಥಗಿತಗೊಳಿಸುತ್ತಿರುವುದಾಗಿ ಸಿಬಿಐ ತನ್ನ ಅಂತಿಮ ವರದಿಯಲ್ಲಿ ಹೇಳಿದ್ದನ್ನು ಪ್ರಸ್ತಾಪಿಸಿದ ನ್ಯಾ. ಅಂಜನಿ ಮಹಾಜನ್‌ ಅವರು ಹಾಗೆ ತಮ್ಮ ಸುದ್ದಿಮೂಲಗಳನ್ನು ಬಹಿರಂಗಪಡಿಸದೇ ಇದ್ದ ಮಾತ್ರಕ್ಕೆ ಸಿಬಿಐ ಇಡೀ ತನಿಖೆಯನ್ನೇ ಸ್ಥಗಿತಗೊಳಿಸಬಾರದು” ಎಂದು ಹೇಳಿದರು.

ಸುದ್ದಿಮೂಲ ಬಹಿರಂಗಪಡಿಸುವುದು ತನಿಖೆಗೆ ಅತ್ಯಗತ್ಯ ಮತ್ತು ಮುಖ್ಯ ಎಂಬುದನ್ನು ತನಿಖಾ ಸಂಸ್ಥೆ ಸದಾ ಪತ್ರಕರ್ತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

"ತನಿಖಾ ಸಂಸ್ಥೆಯು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆ ಅಡಿ ಸರ್ವ ಸನ್ನದ್ದಗೊಂಡಿರುತ್ತದೆ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ವಾಸ್ತವಾಂಶಗಳು, ಸಂದರ್ಭಗಳ ಬಗ್ಗೆ ಸಾರ್ವಜನಿಕ ವ್ಯಕ್ತಿಗಳಿಗೆ ಮಾಹಿತಿ ಇದೆ ಎಂದು ತನಿಖಾ ಸಂಸ್ಥೆಯು ಭಾವಿಸಿದರೆ ಅವರು ಕಡ್ಡಾಯವಾಗಿ ತನಿಖೆಗೆ ಸಹಕರಿಸುವುದು ಆ ಸಾರ್ವಜನಿಕ ವ್ಯಕ್ತಿಗಳ ಕಾನೂನಾತ್ಮಕ ಕರ್ತವ್ಯವಾಗಿದೆ,"ಎಂದು ಆದೇಶದಲ್ಲಿ ತಿಳಿಸಿದೆ. ಆಂತರಿಕ ತನಿಖಾ ವರದಿಯೊಂದನ್ನು ತಿರುಚಿ ಅದನ್ನು ಸಿಬಿಐ ನೀಡಿದೆ ಎಂದು ಹೇಳಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸುಪ್ರಿಂ ಕೋರ್ಟ್‌ ನಿರ್ದೇಶನದಂತೆ ಸಮಾಜವಾದಿ ಪಕ್ಷದ ನೇತಾರ ದಿವಂಗತ ಮುಲಾಯಂ ಸಿಂಗ್‌ ಯಾದವ್‌ ಮತ್ತು ಅವರ ಕುಟುಂಬ ಸದಸ್ಯರು ಗಳಿಸಿದ ಸಂಪತ್ತಿನ ಕುರಿತು ತನಿಖೆ ನಡೆಸಿದ್ದ ಸಿಬಿಐ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಆದರೆ ಟೈಮ್ಸ್‌ ಆಫ್‌ ಇಂಡಿಯಾ ಇಂಗ್ಲಿಷ್‌ ದೈನಿಕವು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಗಳನ್ನು ಆಧರಿಸಿರುವುದಾಗಿ ಹೇಳಿ ಸುದ್ದಿಯೊಂದನ್ನು ಪ್ರಕಟಿಸಿತು. ಆದರೆ ಇದು ಸುಳ್ಳು ಸುದ್ದಿ. ಇದಕ್ಕೆ ಆಧಾರಗಳಿಲ್ಲ ಎಂದು ಸಿಬಿಐ ದೆಹಲಿ ನ್ಯಾಯಾಲಯದ ಮೊರೆ ಹೋಗಿತ್ತು.