ಕೊಲ್ಲೂರು ಮೂಕಾಂಬಿಕೆ ದೇವಾಲಯದ ಆವರಣದಲ್ಲಿ ವಂಶಪಾರಂಪರ್ಯ ಅರ್ಚಕರನ್ನು ಹೊರತುಪಡಿಸಿ ಅನ್ಯ ಅರ್ಚಕರಿಗೂ ಹೋಮ-ಹವನ ನಡೆಸಲು ಅವಕಾಶ ಮಾಡಿಕೊಟ್ಟಿರುವ ದೇಗುಲದ ಆಡಳಿತ ಮಂಡಳಿಯ ಕ್ರಮ ಪ್ರಶ್ನಿಸಿರುವ ಅರ್ಜಿ ಸಂಬಂಧ ಬುಧವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಳೆದ ಸೆಪ್ಟೆಂಬರ್ನಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿಯು ನಿರ್ಣಯ ತೆಗೆದುಕೊಂಡು ಕಾರ್ಯನಿರ್ವಾಹಕ ಅಧಿಕಾರಿ ಅವರ ವಿವೇಚನೆಯಂತೆ ಕ್ಷೇತ್ರದಲ್ಲಿ ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರಿಗೆ ಚಂಡಿಕಾ ಹೋಮ ನಡೆಸಲು ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿ ಅನುವಂಶಿಕ ಅರ್ಚಕರಾದ ಕೆ ವಿಘ್ನೇಶ್ವರ ಅಡಿಗ, ಕೆ ಎನ್ ಸುಬ್ರಹ್ಮಣ್ಯ ಅಡಿಗ, ಕೆ ನಿತ್ಯಾನಂದ ಅಡಿಗ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ವಾದ ಆಲಿಸಿದ ಪೀಠವು ವ್ಯವಸ್ಥಾಪನಾ ಮಂಡಳಿ, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಜರಾಯಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿತು. ಹಾಗೆಯೇ ದೇಗುಲದಲ್ಲಿ ಹೋಮ-ಹವನ ಮಾಡಿದ ಅರ್ಚಕರನ್ನು ಪ್ರತಿವಾದಿಗಳನ್ನಾಗಿಸುವಂತೆ ಅರ್ಜಿದಾರರಿಗೆ ಸೂಚಿಸಿತು.
ನ್ಯಾಯಾಲಯ ಒಂದು ಹಂತದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರ ಆದೇಶಕ್ಕೆ ತಡೆ ನೀಡಲು ಮುಂದಾಗಿತ್ತು. ಆದರೆ, ಇತರೆ ಅರ್ಚಕರನ್ನು ಅರ್ಜಿದಾರರು ಪ್ರತಿವಾದಿಗಳನ್ನಾಗಿ ಮಾಡದಿರುವುದನ್ನು ಗಮನಿಸಿ, ತಡೆ ನೀಡಲು ನಿರಾಕರಿಸಿ ವಿಚಾರಣೆ ಮುಂದೂಡಿತು.
2001ರ ಫೆಬ್ರವರಿಯಲ್ಲಿ ವ್ಯವಸ್ಥಾಪನಾ ಸಮಿತಿಯು ಆನುವಂಶಿಕ ಅರ್ಚಕರ ಅಹವಾಲು ಕೇಳದೆಯೇ ಹೋಮಗಳನ್ನು ನಡೆಸುವ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿತು. ಆದರೆ, ಇದನ್ನು ಪ್ರಶ್ನಿಸಿ ಅರ್ಚಕರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದಾಗ 2001ರ ಡಿಸೆಂಬರ್ ನಲ್ಲಿ ಅರ್ಚಕರ ವಾದ ಆಲಿಸಿ ಹೊಸ ಆದೇಶ ಹೊರಡಿಸುವಂತೆ ಸಮಿತಿಗೆ ಸೂಚಿಸಿತು. 2002ರ ಸೆಪ್ಟೆಂಬರ್ನಲ್ಲಿ ಚಂಡಿಕಾ ಹೋಮದಂತಹ ಪ್ರಮುಖ ಹೋಮಗಳನ್ನು ದೇವಸ್ಥಾನದ ತಂತ್ರಿಗಳು ಮತ್ತು ಇತರ ಅರ್ಚಕರು ಮಾತ್ರ ನೆರವೇರಿಸಬೇಕು ಎಂದು ಸಮಿತಿ ನಿರ್ಣಯಿಸಿತು.
ಅಲ್ಲದೇ, ದೇವಸ್ಥಾನದ ಆವರಣದಲ್ಲಿ ಹೋಮ ನಡೆಸಲು ಮೂರನೇ ವ್ಯಕ್ತಿಗಳು ಭಕ್ತರನ್ನು ಸಂಪರ್ಕಿಸಬಾರದು ಎಂದು ತೀರ್ಮಾನಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅನಧಿಕೃತ ವ್ಯಕ್ತಿಗಳು ಅರ್ಚಕರನ್ನು ಸಂಪರ್ಕಿಸದೆಯೇ ಹೋಮ ಮತ್ತು ಇತರ ಆಚರಣೆಗಳನ್ನು ನಡೆಸಲು ಭಕ್ತರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಅನುವಂಶಿಕ ಅರ್ಚಕರು 2023ರಲ್ಲಿ ಎರಡು ಬಾರಿ ಜಿಲ್ಲಾಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ.
ಕಳೆದ ಸೆಪ್ಟೆಂಬರ್ನಲ್ಲಿ ವ್ಯವಸ್ಥಾಪನಾ ಸಮಿತಿಯು ಕಾರ್ಯನಿರ್ವಾಹಕ ಅಧಿಕಾರಿಗೆ ತಮ್ಮ ಇಚ್ಛೆಯಂತೆ ಇತರ ವ್ಯಕ್ತಿಗಳಿಗೆ ಹೋಮ ನಡೆಸಲು ಅನುಮತಿ ನೀಡುವ ಅಧಿಕಾರವನ್ನು ನೀಡಿದೆ. ಅದರಂತೆ ನವೆಂಬರ್ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಚಂಡಿಕಾ ಹೋಮವನ್ನು ಅರ್ಜಿದಾರರೊಂದಿಗೆ ಇತರ ವ್ಯಕ್ತಿಗಳೂ (ಆನುವಂಶಿಕರಲ್ಲದವರು) ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಈ ಆದೇಶ 'ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯಿದೆಯ ಉಲ್ಲಂಘನೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಮುಂದುವರೆದು, ಕಾಯಿದೆಯ ಪ್ರಕಾರ ಅಧಿಕಾರಿಗಳು ದೇವಸ್ಥಾನದ ಒಪ್ಪಿತ ಸಂಪ್ರದಾಯಗಳು ಮತ್ತು ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ವ್ಯವಸ್ಥಾಪನಾ ಸಮಿತಿಯು ಕಾನೂನಿನ ಮಾನ್ಯತೆಯಿಲ್ಲದೆ ಕಾರ್ಯನಿರ್ವಾಹಕ ಅಧಿಕಾರಿಗೆ ಅಧಿಕಾರ ಹಸ್ತಾಂತರಿಸಿದೆ. "ಕ್ಷೇತ್ರ ಪುರೋಹಿತರು" ಸೇವಾ ನೋಂದಣಿಯಲ್ಲಿ ಅರ್ಚಕರು ಎಂದು ಗುರುತಿಸಲ್ಪಟ್ಟಿಲ್ಲ, ಆದರೂ ಅವರಿಗೆ ಪೂಜೆ ಮಾಡಲು ಅವಕಾಶ ನೀಡಲಾಗುತ್ತಿದೆ. ಆದ್ದರಿಂದ, ವ್ಯವಸ್ಥಾಪನಾ ಸಮಿತಿಯ ಸೆಪ್ಟೆಂಬರ್ ನಿರ್ಣಯ ಮತ್ತು ನವೆಂಬರ್ ನಲ್ಲಿ ಕಾರ್ಯನಿರ್ವಾಹ ಅಧಿಕಾರಿಗಳು ಹೊರಡಿಸಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.