Orissa High Court & Rath Yatra
Orissa High Court & Rath Yatra 
ಸುದ್ದಿಗಳು

ಪುರಿ ಹೊರತುಪಡಿಸಿ ಬೇರೆಡೆಯೂ ರಥಯಾತ್ರೆ ನಡೆಸಲು ಅನುಮತಿ ಕೋರಿದ್ದ ಮನವಿ ವಜಾ ಮಾಡಿದ ಒಡಿಶಾ ಹೈಕೋರ್ಟ್‌

Bar & Bench

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪುರಿಯ ಜಗನ್ನಾಥ ದೇವಾಲಯದಲ್ಲಿ ಮಾತ್ರ ರಥಯಾತ್ರೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಒಡಿಶಾ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ (ಭಾಟ್ಲಿ ರಥಯಾತ್ರಾ ಸಮಿತಿ ವರ್ಸಸ್‌ ಒಡಿಶಾ ಸರ್ಕಾರ).

ಪುರಿ ಮಾತ್ರವಲ್ಲದೇ ರಾಜ್ಯದ ವಿವಿಧ ದೇವಾಲಯಗಳಲ್ಲಿ ಕೂಡ ರಥಯಾತ್ರೆ ನಡೆಸಲು ಅನುಮತಿಸುವಂತೆ ಅರ್ಜಿದಾರರು ಕೋರಿದ್ದರು. ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಾ. ಎಸ್‌ ಮುರಳೀಧರ್‌ ಮತ್ತು ನ್ಯಾಯಮೂರ್ತಿ ಎಸ್‌ ಕೆ ಪಾಣಿಗ್ರಾಹಿ ನೇತೃತ್ವದ ಪೀಠವು ಅರ್ಜಿದಾರರ ಕೋರಿಕೆಗೆ ಅನುಮತಿಸಲು ಒಲವು ತೋರಲಿಲ್ಲ.

“ಇದು ಅತ್ಯಂತ ಕಷ್ಟಕರ ಸಂದರ್ಭವಾಗಿದ್ದು, ಮಾರಣಾಂತಿಕವಾದ ಕೋವಿಡ್‌ ಎರಡನೇ ಅಲೆಯಿಂದ ಒಡಿಶಾ ಮಾತ್ರವಲ್ಲ ಇಡೀ ದೇಶವೇ ಇನ್ನೂ ಸುಧಾರಿಸಿಕೊಂಡಿಲ್ಲ. ಈ ಸನ್ನಿವೇಶದೊಂದಿಗೆ ಒಡಿಶಾ ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಬೇಕಿದೆ. ಹೀಗಾಗಿ, ಪುರಿಯ ಜಗನ್ನಾಥ ದೇವಾಲಯದ ರೀತಿಯಲ್ಲಿ ರಾಜ್ಯದ ಬೇರೆ ದೇವಾಲಯಗಳಲ್ಲಿ ರಥಯಾತ್ರೆ/ ಉತ್ಸವ ನಡೆಸಲು ಕೋರಿರುವ ಮನವಿ ಪುರಸ್ಕರಿಸುವ ಒಲವು ಈ ನ್ಯಾಯಾಲಯಕ್ಕಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.

ಕಳೆದ ವರ್ಷದಂತೆ ಪ್ರಸಕ್ತ ವರ್ಷವೂ ಪುರಿಯ ಬಡದಂಡದಲ್ಲಿನ್ನ ಜಗನ್ನಾಥ ಬಿಜೆಯಲ್ಲಿ ಮಾತ್ರ ರಥಯಾತ್ರೆ ನಡೆಸಲಾಗುತ್ತದೆ ಎಂದು ವಿಶೇಷ ಪರಿಹಾರ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪುರಿಗಿಂತಲೂ ತಮ್ಮ ಸ್ಥಳಗಳಲ್ಲಿ ಕೋವಿಡ್‌ ಪ್ರಭಾವ ಕಡಿಮೆಯಾಗಿದೆ. ಹೀಗಾಗಿ, ಅಂಥ ಸ್ಥಳಗಳಲ್ಲಿ ರಥಯಾತ್ರೆ ನಡೆಸಲು ಅನುಮತಿಸಬೇಕು ಎಂದು ಮನವಿದಾರರು ಕೋರಿದ್ದರು.

ಪುರಿಯಲ್ಲಿ ರಥಯಾತ್ರೆ ನಡೆಸುವುದಕ್ಕೆ ಸಂಬಂಧಿಸಿದಂತೆ ಒಡಿಶಾ ವಿಕಾಸ್‌ ಪರಿಷತ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಈಗಾಗಲೇ ಆದೇಶ ಹೊರಡಿಸಿದ್ದನ್ನು ಪ್ರಸ್ತಾಪಿಸಿದ ಹೈಕೋರ್ಟ್‌, ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಪ್ರಶ್ನಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಲಾಗದು ಎಂದು ಅಭಿಪ್ರಾಯಪಟ್ಟಿದೆ.

“ರಥಯಾತ್ರೆಗೆ ಸಂಬಂಧಿಸಿದಂತೆ ಪುರಿಯಲ್ಲಿರುವ ಜಗನ್ನಾಥ ದೇವಾಲಯಕ್ಕೆ ವಿಶೇಷ ಮಾನ್ಯತೆ ಇದೆ. ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ಪುರಿಯಲ್ಲಿ ರಥಯಾತ್ರೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಿದೆ ಎಂಬ ಅಭಿಪ್ರಾಯವ್ಯಕ್ತಪಡಿಸಿದ ಪೀಠವು ರಿಟ್‌ ಮನವಿಗಳನ್ನು ವಜಾ ಮಾಡಿದೆ.