ಕಾರ್ಯವಿಧಾನ ಪಾಲಿಸದೆಯೇ ಮತ್ತು ನ್ಯಾಯಾಲಯದಿಂದ ಆದೇಶ ಪಡೆಯದೆಯೇ ತೆರವು ಕಾರ್ಯಾಚರಣೆಯನ್ನು ಕಾನೂನು ಜಾರಿಯ ಸಾಧನವಾಗಿ ಬಳಸಿದರೆ ಕಾನೂನುಬದ್ಧವಾಗಿ ನಡೆಯಬೇಕಾದ ಕಾರ್ಯ ಬಲವಂತದ ಕೃತ್ಯವಾಗಿ ಬಿಡುತ್ತದೆ ಎಂದು ಬುಲ್ಡೋಜರ್ ನ್ಯಾಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಒಡಿಶಾ ಸರ್ಕಾರವನ್ನು ರಾಜ್ಯ ಹೈಕೋರ್ಟ್ ಈಚೆಗೆ ಟೀಕಿಸಿದೆ.
ಬುಲ್ಡೋಜರ್ ನ್ಯಾಯ ಒಂದು ಕಾರ್ಯವಿಧಾನವಾಗಿದ್ದು ಕಾರ್ಯಾಂಗ ತನ್ನ ತಾರ್ಕಿಕತೆಯನ್ನು ಮೀರಿ ವ್ಯವಸ್ಥೆಯಿಂದ ಕುಮ್ಮಕ್ಕು ಪಡೆದಿದ್ದರೆ ಅದು ಕಾನೂನು ಪ್ರಕ್ರಿಯೆಯನ್ನು ಅತಿಕ್ರಮಿಸುತ್ತದೆ ಎಂದು ಜೂನ್ 20ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ಸಂಜೀಬ್ ಕುಮಾರ್ ಪಾಣಿಗ್ರಾಹಿ ಅವರು ತಿಳಿಸಿದ್ದಾರೆ.
ಕಾರ್ಯಾಂಗವು ತನ್ನ ತರ್ಕವನ್ನು ಮೀರಿ ಯಂತ್ರವನ್ನು ಅವಲಂಬಿಸುವ ಕಾರ್ಯವಿಧಾನವನ್ನು ʼಬುಲ್ಡೋಜರ್ ನ್ಯಾಯʼ ಎನ್ನಲಾಗುತ್ತದೆ ಎಂದು ನ್ಯಾಯಮೂರ್ತಿ ಸಂಜೀಬ್ ಕುಮಾರ್ ಪಾಣಿಗ್ರಾಹಿ ಅವರು ಜೂ.20ರಂದು ನೀಡಿದ ತೀರ್ಪಿನಲ್ಲಿ ವಿವರಿಸಿದ್ದಾರೆ.
ಕಾರ್ಯವಿಧಾನದ ಪಾಲನೆ ಮತ್ತು ನ್ಯಾಯಾಂಗ ಆದೇಶದ ಅನುಪಸ್ಥಿತಿಯಲ್ಲಿ ತೆರವು ಕಾರ್ಯಾಚರಣೆಯನ್ನು ಕಾನೂನು ಜಾರಿಯ ಸಾಧನವಾಗಿ ಬಳಸುವುದು ಕಾನೂನುಬದ್ಧ ಕಾರ್ಯವನ್ನು ಬಲವಂತದ ಕೃತ್ಯವಾಗಿಸುತ್ತದೆ. ಸಾಂವಿಧಾನಿಕ ಸಂವೇದನೆಗೆ ಧಕ್ಕೆ ತರುತ್ತಿರುವುದು ಬುಲ್ಡೋಜರ್ ಅಲ್ಲ, ಬದಲಿಗೆ ಕಾನೂನು ತನ್ನ ಅಂತಿಮ ನಿರ್ಣಯವನ್ನು ತಿಳಿಸುವುದಕ್ಕೂ ಮುನ್ನವೇ ಅದನ್ನು ಸುಲಭವಾಗಿ ನಿಯೋಜಿಸುತ್ತಿರುವ ಕ್ರಿಯೆ ಸಾಂವಿಧಾನಿಕ ಸಂವೇದನೆಗೆ ಧಕ್ಕೆ ತರುತ್ತಿದೆ. ಕಾನೂನಿನಿಂದ ನಿಯಂತ್ರಿತವಾದ ವ್ಯವಸ್ಥೆಯಲ್ಲಿ ಬಲವು ತರ್ಕವನ್ನು ಹಿಂಬಾಲಿಸಬೇಕೇ ಹೊರತು ಮುಂದೆ ಹೋಗಬಾರುದು. ಯಾವಾಗ ಹೀಗೆ ತಿರುವುಮುರುವಾಗುತ್ತದೆಯೋ ಆಗ ಪ್ರಭುತ್ವದ ಕ್ರಿಯೆಗಳು ಕಾನೂನುಬದ್ಧತೆಯನ್ನು ಕಳೆದುಕೊಳ್ಳುತ್ತವೆ, ಇದರ ಜೊತೆಗೇ ಕಾನೂನಾತ್ಮಕ ಆಡಳಿತವನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊಂದಿರುವ ಸಂಸ್ಥೆಗಳೆಡೆಗಿನ ವಿಶ್ವಾಸಾರ್ಹತೆಯೂ ಕ್ಷೀಣಿಸುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು.
ಬುಲ್ಡೋಜರ್ ನ್ಯಾಯಕ್ಕೆ ಆಸ್ಪದ ಕಲ್ಪಿಸದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಗಸೂಚಿಗಳನ್ನು ಪಾಲಿಸದೆ ಅಧಿಕಾರಿಗಳು ಸಮುದಾಯ ಕೇಂದ್ರವೊಂದನ್ನು ಕೆಡವಿದ್ದಾರೆ ಎಂದು ಆರೋಪಿಸಲಾದ ಪ್ರಕರಣ ಇದಾಗಿದೆ.
ಸಾರ್ವಜನಿಕರಿಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದ್ದ ಈ ಕಟ್ಟಡವನ್ನು ಕೆಡವುವಲ್ಲಿ ತಹಶೀಲ್ದಾರ್ ಅನಗತ್ಯ ಆತುರ ತೋರಿದ್ದಾರೆ ಎಂದು ಕಂಡುಕೊಂಡ ನ್ಯಾಯಾಲಯ, ರಾಜ್ಯ ಸರ್ಕಾರ ₹10 ಲಕ್ಷ ಪರಿಹಾರವನ್ನು ಪಾವತಿಸುವಂತೆ ಮತ್ತು ತಪ್ಪಿತಸ್ಥ ಅಧಿಕಾರಿಯ ವೇತನದಿಂದ ₹2 ಲಕ್ಷವನ್ನು ಸೂಕ್ತ ಕಂತುಗಳಲ್ಲಿ ವಸೂಲಿ ಮಾಡುವಂತೆ ನಿರ್ದೇಶಿಸಿತು.
[ತೀರ್ಪಿನ ಪ್ರತಿ]