A1
A1
ಸುದ್ದಿಗಳು

ಮತಾಂತರ: ಕಾನೂನು ರೂಪಿಸಲು ಸಂಸತ್ತು ಸ್ವತಂತ್ರ, ಸುದ್ದಿ ಆಧರಿಸಿ ನ್ಯಾಯಾಲಯ ಶಿಫಾರಸು ಮಾಡಲಾಗದು ಎಂದ ದೆಹಲಿ ಹೈಕೋರ್ಟ್

Bar & Bench

ಬಲವಂತದ ಮತಾಂತರವನ್ನು ನಿಷೇಧಿಸುವ ಕಾನೂನುಗಳನ್ನು ರೂಪಿಸಲು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ಸ್ವತಂತ್ರವಾಗಿವೆ, ಆದರೆ ಅಂತಹ ಯಾವುದೇ ಶಿಫಾರಸು ಮಾಡಲು ನ್ಯಾಯಾಲಯಕ್ಕೆ ಬಲವಾದ ಕಾರಣ ಅಗತ್ಯವಿರುತ್ತದೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.

ಪತ್ರಿಕಾ ವರದಿಗಳನ್ನು ಆಧರಿಸಿ ಅಂತಹ ಶಿಫಾರಸು ಮಾಡಲಾಗದು. ಅರ್ಜಿದಾರರು ಅಂತಹ ಮನವಿ ಸಲ್ಲಿಸಲು ಬಲವಾದ ಸಾಕ್ಷ್ಯಗಳನ್ನು ಒದಗಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ಮತ್ತು ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಪ್ರಲೋಭನೆ ಅಥವಾ ವಾಮಾಚಾರದ ಮೂಲಕ ರಾಷ್ಟ್ರರಾಜಧಾನಿಯಲ್ಲಿ ನಡೆಯುತ್ತಿರುವ ಬಲವಂತದ ಮತಾಂತರ ತಡೆಯುವಂತೆ ಕೋರಿ ಬಿಜೆಪಿ ನಾಯಕ, ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಅರ್ಜಿಯ (ಪಿಐಎಲ್) ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅಲ್ಲದೆ ಈ ಕುರಿತಂತೆ ದಾಖಲೆಗಳಿದ್ದರೆ ಸಲ್ಲಿಸುವಂತೆ ನ್ಯಾಯಾಲಯ ಉಪಾಧ್ಯಾಯ ಅವರಿಗೆ ಕಳೆದ ವಿಚಾರಣೆ ವೇಳೆಯೇ ಸೂಚಿಸಿದ್ದರೂ ಅವರು ದಾಖಲೆ ನೀಡದೇ ಇರುವುದನ್ನು ನ್ಯಾಯಾಲಯ ಪ್ರಸ್ತಾಪಿಸಿತು. ಆರ್‌ಟಿಐ ಅಡಿ ಮಾಹಿತಿ ಕೇಳಲಾಗಿದೆ ಎಂದು ಉಪಾಧಾಯ ಅವರು ಹೇಳಿದಾಗ ನಾಲ್ಕು ವಾರಗಳ ಕಾಲಾವಕಾಶ ನೀಡುವುದಾಗಿ ನ್ಯಾಯಾಲಯ ತಿಳಿಸಿತು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾ ವಾದ ಮಂಡಿಸಿದರು.