Patna High Court
Patna High Court 
ಸುದ್ದಿಗಳು

ಮಕ್ಕಳು ದೇಶದ ಸಂಪತ್ತು:ಮಧ್ಯಾಹ್ನದ ಬಿಸಿಯೂಟ, ಡಿಜಿಟಲ್ ಉಪನ್ಯಾಸ ನೀಡುವಂತೆ ಬಿಹಾರ ಸರ್ಕಾರಕ್ಕೆ ಪಟ್ನಾ ಹೈಕೋರ್ಟ್ ಆದೇಶ

Bar & Bench

ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಚಟುವಟಿಕೆಗೂ ಹೊಡೆತ ಬಿದ್ದಿದ್ದು ಅವರ ಆರೋಗ್ಯ, ಪೌಷ್ಟಿಕತೆ ಮತ್ತು ಶೈಕ್ಷಣಿಕ ಚಟುವಟಿಕೆಯ ಬಗ್ಗೆ ಕಾರ್ಯಗತಗೊಳಿಸಬಹುದಾದ ವ್ಯವಸ್ಥೆ ಮಾಡುವಂತೆ ಬಿಹಾರ ಸರ್ಕಾರಕ್ಕೆ ಪಟ್ನಾ ಹೈಕೋರ್ಟ್ ಆದೇಶಿಸಿದೆ.

ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಜುಲೈ 6ರಂದು ಪ್ರಕಟವಾದ “ಶಾಲೆಗಳು ಬಂದ್, ಬಿಸಿಯೂಟ ಇಲ್ಲ, ಬಿಹಾರದ ಹಳ್ಳಿಗಳಲ್ಲಿ ಚಿಂದಿ ಮಾರುವುದಕ್ಕೆ ಮರಳಿದ ಮಕ್ಕಳು” ಎಂಬ ವರದಿಯ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜ್ಯಾದ್ಯಂತ ಮಕ್ಕಳಿಗೆ ಅಸಮರ್ಪಕವಾಗಿ ಶಿಕ್ಷಣ ಮತ್ತು ಭೋಜನದ ವ್ಯವಸ್ಥೆ ಮಾಡದ್ದಕ್ಕೆ ಆತಂಕ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ಎಸ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಹೀಗೆ ಹೇಳಿದೆ.

"ಬಿಹಾರ ರಾಜ್ಯದ ಮಕ್ಕಳ ಕತೆ ಶಾಲೆಗಳಿಂದ ಗುಜುರಿಯ ಕಡೆಗೆ ತಿರುಗಬಾರದು."
ಪಟ್ನಾ ಹೈಕೋರ್ಟ್

“ದೇಹ ಮತ್ತು ಮಿದುಳನ್ನು ಆವರಿಸುವ ಚಟುವಟಿಕೆ ಹಾಗೂ ಹೊಟ್ಟೆ ತುಂಬಾ ಊಟ ಮಾಡುವ ಎರಡು ಅವಶ್ಯಕತೆಗಳು ಮಕ್ಕಳಿಗಿದೆ” ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಹೇಳಿದೆ.

“ಮಕ್ಕಳು ದೇಶದ ಸಂಪತ್ತು. ಸದ್ಯದ ಪರಿಸ್ಥಿತಿಗೆ ಸ್ಪಂದಿಸಿದ್ದರೆ ಅಥವಾ ಸ್ಪಂದಿಸುವುದು ತಡವಾದರೆ ಆರೋಗ್ಯ, ಅಭಿವೃದ್ಧಿ ಮತ್ತು ಮಕ್ಕಳ ಯೋಗಕ್ಷೇಮದ ವಿಚಾರದಲ್ಲಿ ದೀರ್ಘವಾಧಿಯಲ್ಲಿ ಸರಿಪಡಿಸಲಾಗದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ನ್ಯಾಯಪೀಠ ಹೇಳಿತು.

ಹೈಕೋರ್ಟ್ ನೀಡಿರುವ 19 ಸಲಹೆಗಳನ್ನು ಜಾರಿಗೊಳಿಸಿದರೆ ರಾಜ್ಯಾದ್ಯಂತ ಇರುವ 1.19 ಕೋಟಿ ವಿದ್ಯಾರ್ಥಿಗಳಿಗೆ ತಕ್ಷಣಕ್ಕೆ ಪರಿಹಾರ ದೊರಕುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಛಯ್ಯ ಕೀರ್ತಿ ಅವರನ್ನು ನ್ಯಾಯಾಲಯವು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿದೆ.