Prajwal Revanna & Karnataka HC 
ಸುದ್ದಿಗಳು

[ಪ್ರಜ್ವಲ್‌ ಆಜೀವ ಸೆರೆವಾಸ] ಕಾಂಗ್ರೆಸ್‌ ಸರ್ಕಾರದ ಪಿತೂರಿ ಎಂದು ಲೂಥ್ರಾ ವಾದ; ಸಾಕ್ಷ್ಯ ಅಲ್ಲಗಳೆದಿಲ್ಲ ಎಂದ ಸರ್ಕಾರ

ಸಂತ್ರಸ್ತೆ ಮೂರು ವರ್ಷ ಮೌನವಾಗಿದ್ದರು. ಅಶ್ಲೀಲ ಕೃತ್ಯ ನಡೆದ ನಂತರವೂ 2023ರಲ್ಲಿ ಸಂತ್ರಸ್ತೆಯು ಮತ್ತೆ ಹಾಸನದ ಗನ್ನಿಗಢ ತೋಟದ ಮನೆಗೆ ಹೋಗಿದ್ದರು. ಅದಾಗ್ಯೂ, ತಾನು ತೊಡುತ್ತಿದ್ದ ಬಟ್ಟೆಯನ್ನು ಏಕೆ ಮರಳಿ ತಂದಿಲ್ಲ ಎಂದು ಪ್ರಶ್ನಿಸಿದ ಲೂಥ್ರಾ.

Bar & Bench

“ವ್ಯಾಪಕವಾಗಿ ಹರಿದಾಡಿದ ಅಶ್ಲೀಲ ವಿಡಿಯೋದಲ್ಲಿನ ಪ್ರಜ್ವಲ್‌ ರೇವಣ್ಣ ಅಂಗಾಂಗ, ಬಟ್ಟೆ ಹೊಂದಿಕೆಯಾಗಿದೆ. ಸಂತ್ರಸ್ತೆಯ ಬಟ್ಟೆಯ ಮೇಲಿನ ವಂಶವಾಹಿ ಮತ್ತು ಪ್ರಜ್ವಲ್‌ ವಂಶವಾಹಿ ಒಂದೇ ಆಗಿದೆ. ಇದ್ಯಾವುದನ್ನೂ ಪ್ರಜ್ವಲ್‌ ಪರ ವಕೀಲರು ಅಲ್ಲಗಳೆದಿಲ್ಲ” ಎಂದು ರಾಜ್ಯ ಸರ್ಕಾರವು ಸೋಮವಾರ ಹೈಕೋರ್ಟ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿಯನ್ನು ವಿರೋಧಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ತಮಗೆ ವಿಧಿಸಲಾಗಿರುವ ಆಜೀವ ಸೆರೆವಾಸ ಶಿಕ್ಷೆ ಬದಿಗೆ ಸರಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್‌ ಮುದಗಲ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠ ನಡೆಸಿತು.

ಪ್ರಜ್ವಲ್‌ ಪರ ವಾದಿಸಿದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು “ಇಡೀ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಪ್ರತೀಕಾರ ತೀರಿಸಿಕೊಂಡಿದ್ದು, ಅದಕ್ಕೆ ಸಂತ್ರಸ್ತೆಯನ್ನು ಬಳಕೆ ಮಾಡಿಕೊಂಡಿದೆ. ಪ್ರಜ್ವಲ್‌ ಎಲ್ಲಾ ರೀತಿಯಲ್ಲೂ ತನಿಖೆಗೆ ಸಹಕರಿಸಿದ್ದಾರೆ. ಸಂತ್ರಸ್ತೆಯು ಮೂರು ವರ್ಷ ಮೌನವಾಗಿದ್ದರು. ಆನಂತರ ನಾಲ್ಕು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಅಶ್ಲೀಲ ಕೃತ್ಯ ನಡೆದ ನಂತರವೂ 2023ರಲ್ಲಿ ಸಂತ್ರಸ್ತೆಯು ಮತ್ತೆ ಹಾಸನದ ಗನ್ನಿಗಢ ತೋಟದ ಮನೆಗೆ ಹೋಗಿದ್ದರು. ಅದಾಗ್ಯೂ, ಸಂತ್ರಸ್ತೆಯು ತಾನು ತೊಡುತ್ತಿದ್ದ ಬಟ್ಟೆಯನ್ನು ಏಕೆ ಮರಳಿ ತಂದಿಲ್ಲ” ಎಂದು ಪ್ರಶ್ನಿಸಿದರು.

ಅಲ್ಲದೇ, ““ಪ್ರಜ್ವಲ್‌ ತನ್ನ ಮಾಜಿ ಕಾರು ಚಾಲಕನ (ಕಾರ್ತಿಕ್‌) ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ, ಪ್ರಜ್ವಲ್‌ ಚುನಾವಣಾ ಏಜೆಂಟ್‌ ಈ ಕುಕೃತ್ಯದ ಸಂಬಂಧ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಮಾತ್ರ ಸರ್ಕಾರ ಏಕೆ ನಡೆಸಿಲ್ಲ” ಎಂದು ಪ್ರಶ್ನಿಸಿದರು.

“2024ರ ಏಪ್ರಿಲ್‌ 24ರಂದು ಪ್ರಜ್ವಲ್‌ ದೇಶ ತೊರೆದಿದ್ದರು. ವಿದೇಶಕ್ಕೆ ಪ್ರಜ್ವಲ್‌ ತೆರಳುವಾಗ ಎಫ್‌ಐಆರ್‌ ದಾಖಲಾಗಿರಲಿಲ್ಲ. ಏಪ್ರಿಲ್‌ 28ರಂದು ಎಫ್‌ಐಆರ್‌ ದಾಖಲಾಗಿತ್ತು. ಆನಂತರ 2024ರ ಮೇನಲ್ಲಿ ಪ್ರಜ್ವಲ್‌ ಸ್ವದೇಶಕ್ಕೆ ಮರಳಿದಾಗ ಅವರನ್ನು ಬಂಧಿಸಲಾಗಿತ್ತು. ತನ್ನ ಆಪಲ್‌ ಫೋನ್‌ ಅನ್ನು ಪ್ರಜ್ವಲ್‌ ತನಿಖಾಧಿಕಾರಿಗೆ ನೀಡಿಲ್ಲ ಎಂದು ಹೇಳಲಾಗಿದೆ. ಆದರೆ, ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿಯಲ್ಲಿ ಮೊಬೈಲ್‌ ನೀಡುವಂತೆ ಪ್ರಜ್ವಲ್‌ಗೆ ಯಾವುದೇ ನೋಟಿಸ್‌ ನೀಡಿಲ್ಲ. ಐಎಂಇಐ ನಂಬರ್‌ ಆಧರಿಸಿ ಮೊಬೈಲ್‌ ಕಂಪನಿಯಿಂದ ಮಾಹಿತಿ ಪಡೆಲು ಸಹ ಪೊಲೀಸರು ಯತ್ನಿಸಿಲ್ಲ” ಎಂದರು.

“ಪ್ರಜ್ವಲ್‌ ನಡೆಸಿದ್ದಾರೆ ಎನ್ನಲಾದ ಅಶ್ಲೀಲ ಕೃತ್ಯದ ಆಯ್ದ ವಿಡಿಯೊಗಳನ್ನು ಮಾತ್ರ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ. 2025ರ ಮೇ 2ರಿಂದ ಜೂನ್‌ 20ರವರೆಗೆ 13 ಸಾಕ್ಷ್ಯಗಳನ್ನು ಪ್ರಾಸಿಕ್ಯೂಟ್‌ ಮಾಡಲಾಗಿದೆ. ಮತ್ತೆ ಐದನ್ನು ಪುನರ್‌ ವಿಚಾರಣೆಗೆ ಒಳಪಡಿಸಲಾಗಿದೆ. ಜುಲೈ 18ರಂದು ಅಂತಿಮ ವಿಚಾರಣೆ ಮುಗಿದಿದೆ. ಒಟ್ಟಾರೆ 90 ದಿನದಲ್ಲಿ ವಿಚಾರಣೆ ಮುಗಿದಿದೆ. ವಿಶೇಷ ನ್ಯಾಯಾಧೀಶರು 10 ದಿನ ರಜೆ ಇದ್ದರು, 12 ದಿನ ಸಾರ್ವಜನಿಕ ರಜೆ ಇತ್ತು. ಹೀಗಿರುವಾಗ, ಪ್ರಜ್ವಲ್‌ ವಿಚಾರಣೆ ವಿಳಂಬಗೊಳಿಸಿದ್ದಾರೆ ಎಂದು ಹೇಳುವುದು ಎಷ್ಟು ಸರಿ” ಎಂದು ಪ್ರಶ್ನಿಸಿದರು.

ಸಿದ್ಧಾರ್ಥ್‌ ಅವರ ವಾದವನ್ನು ಆಲಿಸಿದ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ವ್ಯಾಪಕವಾಗಿ ಹರಿದಾಡಿದ ಅಶ್ಲೀಲ ವಿಡಿಯೊದಲ್ಲಿ ಪ್ರಜ್ವಲ್‌ ರೇವಣ್ಣ ಅಂಗಾಂಗ, ಬಟ್ಟೆ ಹೊಂದಿಕೆಯಾಗಿದೆ. ಸಂತ್ರಸ್ತೆಯ ಬಟ್ಟೆಯ ಮೇಲಿನ ವಂಶವಾಹಿ ಮತ್ತು ಪ್ರಜ್ವಲ್‌ ವಂಶವಾಹಿ ಒಂದೇ ಆಗಿದೆ. ಅಪಾರವಾದ ಡಿಜಿಟಲ್‌ ಸಾಕ್ಷ್ಯವಿದೆ. ಇದ್ಯಾವುದನ್ನೂ ಪ್ರಜ್ವಲ್‌ ಪರ ವಕೀಲರು ಅಲ್ಲಗಳೆದಿಲ್ಲ” ಎಂದರು.

ಉಭಯ ಪಕ್ಷಕಾರರ ವಾದ ಆಲಿಸಿದ ನ್ಯಾಯಾಲಯವು ಲಿಖಿತ ವಾದಾಂಶ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆಗಸ್ಟ್‌ 2ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್‌ಗೆ ಜೀವನ ಪರ್ಯಂತ ಜೈಲು ಶಿಕ್ಷೆಯ ಜೊತೆಗೆ ₹11.60 ಲಕ್ಷ ದಂಡವನ್ನು ವಿಧಿಸಿತ್ತು. ಇದರಲ್ಲಿ ಸಂತ್ರಸ್ತೆಗೆ ₹11.25 ಲಕ್ಷವನ್ನು ಪರಿಹಾರದ ರೂಪದಲ್ಲಿ, ಬಾಕಿ ಹಣವನ್ನು ಸರ್ಕಾರದ ಖಾತೆಗೆ ಜಮೆ ಮಾಡಲು ಆದೇಶಿಸಿತ್ತು.

ಐಪಿಸಿ ಸೆಕ್ಷನ್‌ 376(2)(ಎನ್‌) (ಪದೇ ಪದೇ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವನ ಪರ್ಯಂತ ಶಿಕ್ಷೆ ಮತ್ತು ₹5 ಲಕ್ಷ ದಂಡ; 376(2)(ಕೆ) (ಪ್ರಭಾವಿ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ₹5 ಲಕ್ಷ ದಂಡ; 354(ಬಿ) (ವಿವಸ್ತ್ರಗೊಳಿಸುವಾಗ ಆಕೆಯ ಮೇಲೆ ಹಲ್ಲೆ) ಅಡಿ ಅಪರಾಧಕ್ಕೆ 7 ವರ್ಷ ಶಿಕ್ಷೆ ₹50,000 ದಂಡ; 354-ಎ (ಮಹಿಳೆಯ ಘನತೆಗೆ ಚ್ಯುತಿ) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25,000 ದಂಡ; 354(ಸಿ) (ವಿವಸ್ತ್ರಗೊಳಿಸಿರುವ ಮಹಿಳೆಯನ್ನು ನೋಡಿ ಆನಂದಿಸುವುದು) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25,000 ದಂಡ; 201 (ಅಪರಾಧ ಕೃತ್ಯದ ಸಾಕ್ಷಿ ನಾಶ) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹25,000 ದಂಡ; ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ (ಖಾಸಗಿತನದ ಉಲ್ಲಂಘಿಸಿ ವಿಡಿಯೊ ಮಾಡಿ, ಪ್ರಸಾರ ಮಾಡಿರುವುದು) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹25,000 ದಂಡ; 506 (ಕ್ರಿಮಿನಲ್‌ ಬೆದರಿಕೆ) 2 ವರ್ಷ ಶಿಕ್ಷೆ, ₹10,000 ದಂಡ ವಿಧಿಸಿತ್ತು. ಈ ತೀರ್ಪನ್ನು ಬದಿಗೆ ಸರಿಸುವಂತೆ ಪ್ರಜ್ವಲ್‌ ಕೋರಿದ್ದಾರೆ.