ಸುದ್ದಿಗಳು

ಸಮಾಜದಂಚಿನ ಸಮುದಾಯಗಳನ್ನು ಹೊರಗಿಡುವ ಚಾರಿತ್ರಿಕ ಪುನರಾವರ್ತನೆಯನ್ನು ಪ್ರಬಲರು ತೊಡೆಯಬೇಕು: ನ್ಯಾ. ಚಂದ್ರಚೂಡ್

Bar & Bench

ಸಮಾಜದಂಚಿನಲ್ಲಿರುವ ವ್ಯಕ್ತಿಗಳನ್ನು ಅನ್ಯವಾಗಿ ಕಾಣುವ ಮತ್ತು ಅವರನ್ನು ಹೊರಗಿಡುವ ಪ್ರಕ್ರಿಯೆಯನ್ನು ಅಂತ್ಯಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ.

ನವದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್ ಮತ್ತು ದಕ್ಷಿಣ ಏಷ್ಯಾದ ರೋಸಾ ಲಕ್ಸೆಂಬರ್ಗ್ ಸ್ಟಿಫ್ಟಂಗ್ ಆಯೋಜಿಸಿದ್ದ ಬಿ ಆರ್ ಅಂಬೇಡ್ಕರ್ ನೆನಪಿನ 13 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಮಾಜದ ಅಂಚಿನ‌ ಸಮುದಾಯಗಳನ್ನು ಹೊರಗಿಡುವ ʼಚಾರಿತ್ರಿಕ ಪುನರಾವರ್ತನʼದಿಂದ ಹೊರಬರುವುದು, ಅವರಿಗೆ ಗೌರವ ಮನ್ನಣೆ ನೀಡುವುದು ಭಾರತದ ಜನರ ಜವಾಬ್ದಾರಿ, ಸಮಾಜದಲ್ಲಿನ ಪ್ರಬಲರ ಜವಾಬ್ದಾರಿ. ಸಮಾಜದಲ್ಲಿನ ಉಳ್ಳವರು ಐತಿಹಾಸಿಕ ಸಂಕೋಲೆಗಳಿಂದ ಬಿಡಿಸಿಕೊಂಡು ಸಂವಾದಿಸುವುದು ಮತ್ತು ಸಮಾಜದ ಅಂಚಿನಲ್ಲಿರುವ ಜನರಿಗೆ ಮನ್ನಣೆ ನೀಡುವುದು ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟರು.

ʼಭಾರತದ ನಿವಾಸಿಗಳಾದ ನಾವುʼ ಎಂಬ ಸಾಲಿನೊಂದಿಗೆ ಆರಂಭವಾಗುವ ಸಂವಿಧಾನದ ಪ್ರಸ್ತಾವನೆಯ ಕುರಿತು ಮಾತನಾಡಿದ ಅವರು “ಆದರೆ ನಾವು ಯಾರು? ಭಾರತದ ಜನರೇ? ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಲಾದ 'ಜನರಲ್ಲಿʼ ಬುಡಕಟ್ಟು ಸಮುದಾಯವೂ ಬರಲಿದ್ದು ಸಂವಿಧಾನ ಜಾರಿಯಲ್ಲಿದ್ದರೂ ಅವರಿನ್ನೂ ಅಧಿಸೂಚಿತ ಬುಡಕಟ್ಟಾಗಿಯೇ ಉಳಿದಿರುವುದಕ್ಕೆ ಅಚ್ಚರಿಯಾಗುತ್ತದೆ. ಅದು ಸಲಿಂಗಿಗಳನ್ನು ಒಳಗೊಂಡಿದೆಯೇ? ಅದು ಮಹಿಳೆಯರನ್ನು ಒಳಗೊಂಡಿದೆಯೇ? ಅದು ದಲಿತ ಸಮುದಾಯವನ್ನು ಅಂಗವಿಕಲರನ್ನು ಒಳಗೊಂಡಿದೆಯೇ?” ಎಂದು ಪ್ರಶ್ನಿಸಿದರು.