CM Siddaramaiah and Karnataka HC 
ಸುದ್ದಿಗಳು

[ಮುಡಾ ಪ್ರಕರಣ] ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಮುಖ್ಯ; ಸುಣ್ಣಕ್ಕೆ ಬೆಣ್ಣೆ ಹಂಚಿಕೆ: ಹಿರಿಯ ವಕೀಲ ರಾಘವನ್‌ ಆಕ್ಷೇಪ

ಮುಡಾ 3.16 ಎಕರೆ ಭೂಮಿಯನ್ನು ವಶಪಡಿಸಿಕೊಂಡಾಗ, ಆ ಜಮೀನಿನ ಮೌಲ್ಯ 3.24 ಲಕ್ಷ ರೂಪಾಯಿ ಆಗಿತ್ತು. ಹೀಗಿರುವಾಗ ಯಾವ ಮೌಲ್ಯ ಆಧರಿಸಿ 14 ನಿವೇಶನಗಳನ್ನು (ಪಾರ್ವತಿ ಅವರಿಗೆ) ನೀಡಲಾಗಿದೆ? ಮುಡಾ ವಿವೇಚನ ಬಳಸಿಲ್ಲ ಎಂದು ಆಕ್ಷೇಪಿಸಿದ ರಾಘವನ್.‌

Siddesh M S

“ಸುಣ್ಣಕ್ಕೆ ಬೆಣ್ಣೆ ಹಂಚಿಕೆ ಮಾಡಿರುವುದು ಇಲ್ಲಿ ಎದುರಾಗಿರುವ ಆರೋಪ. ಭ್ರಷ್ಟಾಚಾರ ನಿರೋಧಕ ಕಾಯಿದೆಯ ಉದ್ದೇಶವೇ ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಕಾಯ್ದುಕೊಳ್ಳುವುದಾಗಿರುವುದರಿಂದ ರಾಜ್ಯಪಾಲರು ತನಿಖೆ ನಡೆಯಲು ಅಭಿಯೋಜನಾ ಮಂಜೂರಾತಿ ನೀಡಿದ್ದಾರೆ” ಎಂದು ಹಿರಿಯ ವಕೀಲ ಕೆ ಜಿ ರಾಘವನ್‌ ಸೋಮವಾರ ಪ್ರತಿಪಾದಿಸಿದರು.

ರಾಜ್ಯಪಾಲರು ಅಭಿಯೋಜನಾ ಮಂಜೂರಾತಿ ನೀಡಿರುವುದನ್ನು ವಜಾ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ಮುಂದುವರಿಸಿತು.

ಕೇವಿಯಟರ್‌ ಆಗಿರುವ ನಾಲ್ಕನೇ ಪ್ರತಿವಾದಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ವಾದಿಸಿದ ರಾಘವನ್‌ ಅವರು “ಸಾರ್ವಜನಿಕ ಹಿತಾಸಕ್ತಿ ಅಡಗಿರುವುದರಿಂದ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದೆ. ಮಾಧ್ಯಮಗಳಲ್ಲಿ ಮುಡಾ ಹಗರಣ ವರದಿಯಾದ ಬೆನ್ನಿಗೇ ರಾಜ್ಯ ಸರ್ಕಾರ ಐಎಎಸ್‌ ಅಧಿಕಾರಿ (ವೆಂಕಟಾಚಲಪತಿ) ನೇತೃತ್ವದಲ್ಲಿ ಆನಂತರ ಹೈಕೋರ್ಟ್‌ನ ನಿವೃತ್ತ (ಪಿ ಎನ್‌ ದೇಸಾಯಿ) ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಇದು ಸಾರ್ವಜನಿಕ ನಂಬಿಕೆ ಹಾಳಾಗಿರುವುದಕ್ಕೆ ಉತ್ತರವಾಗಿದೆ. ಉನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ವ್ಯಕ್ತಿಯ ವಿರುದ್ಧ ತನಿಖೆ ಕೋರಲಾಗಿದೆ. ಕೊನೆಯಲ್ಲಿ ಸಿದ್ದರಾಮಯ್ಯ ಅವರು ಆರೋಪಮುಕ್ತವಾಗಬಹುದು. ಆದರೆ, ನ್ಯಾಯಾಲಯವು ಇಂಥ ವಿಚಾರಗಳಲ್ಲಿ ತನಿಖೆಗೆ ಬೆಂಬಲ ಸೂಚಿಸಬೇಕು” ಎಂದು ಮನವಿ ಮಾಡಿದರು.

“(ಸಿಎಂ ಪತ್ನಿ) ಪಾರ್ವತಿ ಅವರಲ್ಲದೇ ಬೇರೆ ಯಾವುದೇ ಸಾಮಾನ್ಯ ವ್ಯಕ್ತಿ ತಮ್ಮ ಭೂಮಿ ವಶಪಡಿಸಿಕೊಂಡಿರುವುದಕ್ಕೆ ಪರಿಹಾರ ಕೇಳಿದ್ದರೆ ಮುಡಾ ಆ ವ್ಯಕ್ತಿಗೆ ಹಕ್ಕುಸಾಧನೆ ತೋರಿಸುವಂತೆ ಕೇಳುತಿತ್ತು. ಆಗ ಆ ವ್ಯಕ್ತಿಯು ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು. ಆದರೆ, ಪಾರ್ವತಿ ಅವರ ಪ್ರಕರಣಲ್ಲಿ ಅದೇನು ಆಗಿಲ್ಲ. ನಿಯಮಗಳನ್ನು ತಿದ್ದುಪಡಿ ಮಾಡಲಾಗಿದ್ದು, ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ” ಎಂದು ಆಕ್ಷೇಪಿಸಿದರು.

“ಮುಡಾದಲ್ಲಿ 2003-09ರ ನಡುವೆ 60:40 ಯೋಜನೆ ಜಾರಿಯಲ್ಲಿತ್ತು. ಆದರೆ, ಪಾರ್ವತಿ ಅವರಿಗೆ ನಿವೇಶನ ಹಂಚಲು 2015ರಲ್ಲಿ 50:50 ಯೋಜನೆಯನ್ನು ಮುಡಾ ಅಳವಡಿಸಿಕೊಂಡಿದೆ. ಯಾವ ನಿಬಂಧನೆಯಡಿ 14 ನಿವೇಶನಗಳನ್ನು ನೀಡಲಾಗಿದೆ? ಹಲವು ಸಂದರ್ಭದಲ್ಲಿ ವಾಸ್ತವಿಕ ಅಂಶಗಳನ್ನು ಮರೆಮಾಚುವುದು ದುರುದ್ದೇಶಕ್ಕೆ ಆಧಾರ ಒದಗಿಸಲಿದೆ. ಮುಡಾ ಆಕ್ಷೇಪಾರ್ಹವಾದ 3.16 ಎಕರೆ ಭೂಮಿಯನ್ನು ವಶಪಡಿಸಿಕೊಂಡಾಗ, ಆ ಜಮೀನಿನ ಮೌಲ್ಯ 3.24 ಲಕ್ಷ ರೂಪಾಯಿ ಆಗಿತ್ತು. ಹೀಗಿರುವಾಗ ಯಾವ ಮೌಲ್ಯ ಆಧರಿಸಿ 14 ನಿವೇಶನಗಳನ್ನು ನೀಡಲಾಗಿದೆ? ಮುಡಾ ಯಾವುದೇ ರೀತಿಯಲ್ಲಿಯೂ ವಿವೇಚನ ಬಳಸಿಲ್ಲ. ಸುಣ್ಣಕ್ಕೆ ಬೆಣ್ಣೆ ವಿನಿಮಯವೇ? ಈ ಪ್ರಕರಣದಲ್ಲಿ ಅದನ್ನೇ ಮಾಡಲಾಗಿದ್ದು, ಅದೇ ಆರೋಪವಾಗಿದೆ. ದುಬಾರಿ ಮೌಲ್ಯ ಹೊಂದಿರದ 3.16 ಎಕರೆ ಜಮೀನಿಗೆ ಪ್ರತಿಷ್ಠಿತ ಬಡಾವಣೆಯಲ್ಲಿ 14 ನಿವೇಶನ ಹಂಚಿಕೆ ಮಾಡಲಾಗಿದೆ. ಇದು ಸರಿಯೋ, ತಪ್ಪೋ ಅದರ ತನಿಖೆ ಆಗಬೇಕು” ಎಂದು ಪ್ರತಿಪಾದಿಸಿದರು.

“ಪಾರ್ವತಿ ಅವರಿಗೆ ನಿವೇಶನ ಹಂಚಿಕೆಯಲ್ಲಿ ಪಕ್ಷಪಾತಿ ಧೋರಣೆ ತಳೆಯಲಾಗಿದ್ದು, ಅದಕ್ಕಾಗಿ ತನಿಖೆ ಆಗಲೇಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೆಲ್ಲವೂ ನಡೆದಿದೆ. 2017ರಲ್ಲಿ ಮುಡಾ ಕೈಗೊಂಡಿರುವ ನಿರ್ಣಯವೇ ಇಡೀ ಪ್ರಕರಣದ ಕೊಂಡಿಯಾಗಿದೆ” ಎಂದರು.

“ಸಾರ್ವಜನಿಕ ಸೇವಕರ ನಡತೆಯು ಅತ್ಯಂತ ಕರಾರುವಕ್ಕಾಗಿರಬೇಕು. ಪ್ರಮಾದ ಆಗಿರುವುದರಲ್ಲಿ ಸಾರ್ವಜನಿಕ ಸೇವಕನ ಸಣ್ಣ ಪಾತ್ರವಿದ್ದರೂ ಭ್ರಷ್ಟಾಚಾರ ನಿರೋಧಕ ಕಾಯಿದೆ ಅನ್ವಯವಾಗುತ್ತದೆ ಎಂದು ತಮ್ಮದೇ (ನ್ಯಾ. ನಾಗಪ್ರಸನ್ನ) ತೀರ್ಪು ಹೇಳುತ್ತದೆ. ಮುಡಾ ನಿರ್ಣಯ ಅಥವಾ ನಿರ್ಧಾರದಲ್ಲಿ ಮುಖ್ಯಮಂತ್ರಿ ಪಾತ್ರವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಅಲ್ಲಿ ಮುಖ್ಯಮಂತ್ರಿಯ ಸಣ್ಣಮಟ್ಟದ ಪಾತ್ರ ಇದ್ದರೂ ಅದರ ತನಿಖೆಯಾಗಬೇಕು. ಇನ್ನು ಸೆಕ್ಷನ್‌ 17ಎ ಹಂತದಲ್ಲಿ ಸಹಜ ನ್ಯಾಯತತ್ವ ಅನ್ವಯಿಸುವುದಿಲ್ಲ” ಎಂದರು.

“ಹಾಡುಗಲಿನಲ್ಲಿ ವಂಚನೆ ನಡೆಯುವುದಿಲ್ಲ, ಅದನ್ನು ಮರೆಮಾಚುವ ಮೂಲಕ ಮಾಡಲಾಗುತ್ತದೆ. ವಂಚನೆ ನಡೆದಿದೆಯೋ, ಇಲ್ಲವೋ ಎಂಬುದನ್ನು ಅರಿಯಲು ನ್ಯಾಯಾಲಯ ಯಾವ ವಿಧಾನ ಅನುಸರಿಸಬೇಕು ಎಂದು ಹೇಳುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ. ಇದು ಕ್ಲಿಷ್ಟಕರವಾದ ಪ್ರಯತ್ನ” ಎಂದು ಮಾರ್ಮಿಕವಾಗಿ ನುಡಿದರು.

ವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಆದೇಶ ವಿಸ್ತರಿಸಿ, ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರ ಕೋರಿಕೆಯಂತೆ ವಿಚಾರಣೆಯನ್ನು ಸೆಪ್ಟೆಂಬರ್‌ 9ಕ್ಕೆ ಮುಂದೂಡಿತು.