Line for Liquor Shops
Line for Liquor Shops  Image for representational purpose
ಸುದ್ದಿಗಳು

ರಾಮ ಮಂದಿರ ಉದ್ಘಾಟನೆ: ಜ.22ರಂದು ಮದ್ಯರಹಿತ ದಿನ ಎಂದು ಘೋಷಿಸಲು ಕೋರಿದ್ದ ಪಿಐಎಲ್‌ ತಿರಸ್ಕರಿಸಿದ ಕಲ್ಕತ್ತಾ ಹೈಕೋರ್ಟ್

Bar & Bench

ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಜನವರಿ 22 ಅನ್ನು "ಒಣ ದಿನ" ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಕಲ್ಕತ್ತಾ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ  ಹಿರಣ್ಮಯ್ ಭಟ್ಟಾಚಾರ್ಯ ಅವರ ನೇತೃತ್ವದ ವಿಭಾಗೀಯ ಪೀಠವು ಮದ್ಯರಹಿತ ದಿನ ಎಂದು ಘೋಷಿಸುವುದು ನೀತಿ ನಿರ್ಧಾರದ ವ್ಯಾಪ್ತಿಯಲ್ಲಿ ಬರುತ್ತದೆ, ಅದನ್ನು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

"ಇದು ನೀತಿ ನಿರ್ಧಾರದ ಭಾಗ. ಮದ್ಯದ ಪರವಾನಗಿಗೆ ಅವಕಾಶ ನೀಡುವ ಕಾನೂನುಗಳನ್ನು ನೀವು ಪ್ರಶ್ನಿಸಬೇಕಾಗುತ್ತದೆ. ವಾಸ್ತವವಾಗಿ, ನಿಷೇಧವಿದೆ. ಎಲ್ಲರೂ ಮದ್ಯ ತಯಾರಿಸಲು ಸಾಧ್ಯವಿಲ್ಲ. ಪಾನೀಯ ನಿಗಮವಿದೆ, ಮತ್ತು ಅಬಕಾರಿ ಕಾಯಿದೆಯಡಿ ಕಾಯಿದೆಯ ಮೂಲಕ ವ್ಯಾಪಾರವನ್ನು ನಿಯಂತ್ರಿಸಲಾಗುತ್ತದೆ. ಆ ನಿಬಂಧನೆಗಳನ್ನು ಪ್ರಶ್ನಿಸದ ಹೊರತು, ನಾವು ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

CJ TS Sivagnanam and Justice Hiranmay Bhattacharyya

ವಿಚಾರಣೆಯ ಸಮಯದಲ್ಲಿ, ಅರ್ಜಿದಾರರ ಪರ ಹಾಜರಾದ ವಕೀಲರು, ರಾಮ ಮಂದಿರ ಪ್ರತಿಷ್ಠಾಪನೆಯ ದೃಷ್ಟಿಯಿಂದ ಜನವರಿ 22 ಅನ್ನು ಮದ್ಯರಹಿತ ಶುಷ್ಕ ದಿನ (ಡ್ರೈ ಡೇ) ಎಂದು ಘೋಷಿಸುವ ನಿರ್ಧಾರವನ್ನು ಛತ್ತೀಸಗಢ ಸೇರಿದಂತೆ ಐದು ರಾಜ್ಯಗಳು ತೆಗೆದುಕೊಂಡಿವೆ ಎಂದು ಗಮನಸೆಳೆದರು. 

ಇತ್ತ, ಪಶ್ಚಿಮ ಬಂಗಾಳ ಸರ್ಕಾರದ ವಕೀಲರು ಪಿಐಎಲ್ ಅನ್ನು "ವಿಚಿತ್ರವಾದದ್ದು" ಎಂದು ಕರೆದರು ಮತ್ತು ಕೆಲವು ರಾಜ್ಯಗಳು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿವೆ ಎಂಬ ಕಾರಣಕ್ಕಾಗಿ, ಪಶ್ಚಿಮ ಬಂಗಾಳ ಸರ್ಕಾರವನ್ನು ಅದನ್ನು ಅನುಸರಿಸುವಂತೆ ಕೇಳಲಾಗುವುದಿಲ್ಲ ಎಂದು ವಾದಿಸಿದರು.