Justice Bechu Kurian Thomas with Kerala HC
Justice Bechu Kurian Thomas with Kerala HC 
ಸುದ್ದಿಗಳು

ಅತ್ಯಾಚಾರ ಸಂತ್ರಸ್ತರ ಕನ್ಯತ್ವ, ನಡತೆ ಕುರಿತ ರೂಢಿಗತ ಕಲ್ಪನೆಗಳಿಗೆ ನ್ಯಾಯಾಲಯಗಳು ತುತ್ತಾಗಬಾರದು: ಕೇರಳ ಹೈಕೋರ್ಟ್

Bar & Bench

ಸ್ತ್ರೀಯರ ನಡತೆಯನ್ನು ಪುರುಷ ದೃಷ್ಟಿಯಿಂದ ಪರಿಶೀಲಿಸುವುದನ್ನು ನ್ಯಾಯಾಲಯಗಳು ತಪ್ಪಿಸಬೇಕು ಎಂದು ಕೇರಳ ಹೈಕೋರ್ಟ್‌ ಬುಧವಾರ ತಿಳಿಸಿದೆ.

ಮಹಿಳೆಯರ ವಿರುದ್ಧ ಲೈಂಗಿಕ ಅಪರಾಧಗಳನ್ನು ಒಳಗೊಂಡಿರುವ ಪ್ರಕರಣಗಳಲ್ಲಿ ಸ್ತ್ರೀಯರ ನಡತೆ ಬಗ್ಗೆ ಇರುವ ರೂಢಿಗತ ಕಲ್ಪನೆ, ಮಿಥ್ಯೆ ಹಾಗೂ ಸಾಮಾನ್ಯೀಕರಣಕ್ಕೆ ನ್ಯಾಯಾಲಯಗಳು ತುತ್ತಾಗುವುದನ್ನು ತಪ್ಪಿಸಬೇಕು ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಅಭಿಪ್ರಾಯಪಟ್ಟರು.

ಅಂತಹ ಅತ್ಯಾಚಾರ ಮಿಥ್ಯೆಗಳು ಕನ್ಯತ್ವದ ಬಗ್ಗೆ, ಅತ್ಯಾಚಾರಕ್ಕೆ ಪ್ರತಿರೋಧ ಒಡ್ಡುವ ಕುರಿತು, ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕು ಎನ್ನುವ ಬಗ್ಗೆ ಮುಂತಾದ ಹಲವು ವಿಷಯಗಳನ್ನು ಒಳಗೊಂಡಿರುತ್ತವೆ ಎಂದು ನವನಟಿ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂನ ನಟ ನಿರ್ಮಾಪಕ ವಿಜಯ್ ಬಾಬುಗೆ ನಿರೀಕ್ಷಣಾ ಜಾಮೀನು ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ.

"ನ್ಯಾಯಾಲಯಗಳು ಸ್ತ್ರೀಯರ ನಡತೆಯನ್ನು ಪುರುಷ ದೃಷ್ಟಿಕೋನದಿಂದ ಪರಿಶೀಲಿಸುವುದನ್ನು ತಪ್ಪಿಸಬೇಕು. ಪಕ್ಷಪಾತದ ಭಿನ್ನ ಸ್ವರೂಪಗಳಾದ ಮಿಥ್ಯೆ. ಸರಳೀಕರಣ ಮತ್ತು ಸಾಮಾನ್ಯೀಕರಣವನ್ನು ತಪ್ಪಿಸಬೇಕು ... ಕನ್ಯತ್ವ, ಪ್ರತಿರೋಧ, ನಡತೆ , ಶಾರೀರಿಕ ಗಾಯಗಳ ಪ್ರದರ್ಶನ, ನಿರ್ದಿಷ್ಟ ರೀತಿಯ ವರ್ತಿಸಬೇಕು ಎಂದು ಬಯಸುವುದು, ಕೃತ್ಯದ ಬಗ್ಗೆ ಕೂಡಲೇ ಪ್ರಕರಣ ದಾಖಲಿಸಲು ಮುಂದಾಗಬೇಕು ಎನ್ನುವುದು ಇವೆಲ್ಲಾ ಅತ್ಯಾಚಾರದ ಮಿಥ್ಯೆಗಳು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.

ಆರೋಪಿಗಳು, ದೂರುದಾರರು ಹಾಗೂ ಪ್ರಾಸಿಕ್ಯೂಷನ್ ಪರವಾಗಿ ವ್ಯಾಪಕ ವಾದ ಮಂಡಿಸಲಾಯಿತಾದರೂ, ಲೈಂಗಿಕ ಕೃತ್ಯಕ್ಕೆ ಒಪ್ಪಿಗೆ ಇತ್ತೆ ಅಥವಾ ಇಲ್ಲವೇ ಎಂಬುದೂ ಸೇರಿದಂತೆ ನಿರೀಕ್ಷಣಾ ಜಾಮೀನಿನ ಹಂತದಲ್ಲಿ, ಪ್ರಕರಣದ ಅರ್ಹತೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಖುದ್ದು ನೆನಪಿಸಿತು.