Karnataka High Court 
ಸುದ್ದಿಗಳು

ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಗೌರವಧನ ಪಡೆಯಲು ಯತ್ನಿಸುವ ನಕಲಿಗಳ ವಿರುದ್ದ ಕಠಿಣ ಕ್ರಮ ಅಗತ್ಯ: ಹೈಕೋರ್ಟ್‌

“ಅರ್ಜಿದಾರರು ಸ್ವಾತಂತ್ರ್ಯ ಹೋರಾಟದ ವೇಳೆ ಜೈಲು ಸೇರಿದ್ದಕ್ಕೆ, ಮನೆಯಿಂದ ಹೊರಗುಳಿದಿದ್ದಕ್ಕೆ ಹಾಗೂ ಆ ಸಮಯದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ” ಎಂದ ಹೈಕೋರ್ಟ್‌.

Bar & Bench

ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸರ್ಕಾರದಿಂದ ಗೌರವಧನ ಪಡೆಯಲು ಯತ್ನಿಸುವ ನಕಲಿ ವ್ಯಕ್ತಿಗಳನ್ನು ಕಠಿಣ ರೀತಿಯಲ್ಲಿ ದಂಡಿಸಬೇಕು ಎಂದು ಆದೇಶ ಹೊರಡಿಸಿರುವ ಕರ್ನಾಟಕ ಹೈಕೋರ್ಟ್‌, ‘ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಯಾವುದೇ ತೊಂದರೆ ಆಗಬಾರದು. ಆದರೆ, ಕೆಲವರು ನಕಲಿ ದಾಖಲೆ ಒದಗಿಸಿ ಗೌರವಧನಕ್ಕೆ ಹಕ್ಕು ಮಂಡಿಸುತ್ತಾರೆ. ಅಂತಹ ಪ್ರಕರಣಗಳನ್ನು ಸರ್ಕಾರ ಕಠಿಣ ನಿಲುವು ತಳೆಯಬೇಕು” ಎಂದು ಆದೇಶಿಸಿದೆ.

ಸ್ವಾತಂತ್ರ್ಯ ಹೋರಾಟಗಾರ ಎಂದು ಹಲವು ವರ್ಷಗಳ ಕಾಲ ರಾಜ್ಯ ಸರ್ಕಾರದಿಂದ ಗೌರವಧನ ಪಡೆದ ಮುಳಬಾಗಿಲು ತಾಲ್ಲೂಕಿನ ಮಂಡಿಕಲ್‌ ಗ್ರಾಮದ 85 ವರ್ಷದ ಎಂ ವಿ ಶ್ರೀನಿವಾಸ ಗೌಡ ಅವರಿಂದ ಹಣ ವಸೂಲು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಶ್ರೀನಿವಾಸ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ರಾಮಚಂದ್ರ ಡಿ.ಹುದ್ದಾರ ಅವರ ವಿಭಾಗೀಯ ಪೀಠ ತಿರಸ್ಕರಿಸಿದೆ.

“ಅರ್ಜಿದಾರರು ಸ್ವಾತಂತ್ರ್ಯ ಹೋರಾಟದ ವೇಳೆ ಜೈಲು ಸೇರಿದ್ದಕ್ಕೆ, ಮನೆಯಿಂದ ಹೊರಗುಳಿದಿದ್ದಕ್ಕೆ ಹಾಗೂ ಆ ಸಮಯದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ಸರ್ಕಾರದ ನಿಯಮಗಳ ಅನುಸಾರ ಅವರು ರಾಜ್ಯ ಸರ್ಕಾರದಿಂದ ನೀಡುವ ಗೌರವ ಧನ ಪಡೆಯಲು ವಿಫಲವಾಗಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, ರಾಜುಪೇಟೆ ಸತ್ಯಾಗ್ರಹ ಹಾಗೂ ಮೈಸೂರು ಚಲೋ ಚಳವಳಿಗಳಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸಿದ್ದೇನೆ. ಸರ್ಕಾರದ ಆದೇಶದಂತೆ ದಾಖಲೆಗಳನ್ನು ಸಲ್ಲಿಸಿ 1981ರಿಂದ ಪ್ರತಿ ತಿಂಗಳೂ ರಾಜ್ಯ ಸರ್ಕಾರದ ಗೌರವ ಧನ ಪಡೆಯುತ್ತಿದ್ದೇನೆ. ಆದರೆ, ನನ್ನ ವಿರುದ್ಧ ಲೋಕಾಯುಕ್ತಕ್ಕೆ ನೀಡಲಾಗಿದ್ದ ಸುಳ್ಳು ದೂರು ಆಧರಿಸಿ ಗೌರವಧನ ವಾಪಸು ಪಡೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದು ಇದು ಕಾನೂನು ಬಾಹಿರ ಕ್ರಮ ಎಂದು ಶ್ರೀನಿವಾಸ ಗೌಡ ಆಕ್ಷೇಪಿಸಿದ್ದರು.

ಪ್ರಕರಣದ ಹಿನ್ನೆಲೆ: ಎಂ ವಿ ಶ್ರೀನಿವಾಸ ಗೌಡ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹಕ್ಕು ಮಂಡಿಸಿ ಗೌರವಧನ ಪಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಮಂಡಿಕಲ್‌ ನಿವಾಸಿ ನಾಗರಾಜ್ 2015ರ ಆಗಸ್ಟ್ 1ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಲೋಕಾಯುಕ್ತ ತನಿಖೆ ದೃಢಪಟ್ಟಿದೆ ಎಂಬ ಆಧಾರದಲ್ಲಿ ಕೋಲಾರ ಜಿಲ್ಲಾಧಿಕಾರಿ 2018ರ ನವೆಂಬರ್ 14ರಂದು ಆದೇಶವೊಂದನ್ನು ಹೊರಡಿಸಿ, ಶ್ರೀನಿವಾಸಗೌಡ ಅವರಿಗೆ ಈತನಕ ನೀಡಲಾಗಿರುವ ಗೌರವಧನ ವಾಪಸು ಪಡೆಯುವ ಪ್ರಕ್ರಿಯೆ ಆರಂಭಿಸುವಂತೆ ಮುಳಬಾಗಿಲು ತಹಶೀಲ್ದಾರ್‌ಗೆ ಆದೇಶಿಸಿದ್ದರು.

ಇದರ ಅನುಸಾರ ತಹಶೀಲ್ದಾರ್‌ 2019ರ ಮೇ 20ರಂದು ಅರ್ಜಿದಾರರಿಗೆ ನೋಟಿಸ್‌ ನೀಡಿ 2019ರ ಮೇ 30ರೊಳಗೆ ₹9,08,661 ಗೌರವ ಧನವನ್ನು ವಾಪಸು ಪಾವತಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

M V Srinivas Gowda Vs State of Karnataka.pdf
Preview