Chief Justice N V Anjaria and K V Aravind, Karnataka HC 
ಸುದ್ದಿಗಳು

ಪಾರ್ಟಿ ಇನ್‌ ಪರ್ಸನ್‌ ವಾದ ಸಾಮರ್ಥ್ಯವನ್ನು ರಿಜಿಸ್ಟ್ರಿ ಕಚೇರಿ ಮೌಲ್ಯಮಾಪನ ಮಾಡಬೇಕು: ಹೈಕೋರ್ಟ್‌

ಪಾರ್ಟಿ ಇನ್‌ ಪರ್ಸನ್‌ ಸಮರ್ಥತೆಯನ್ನು ರಿಜಿಸ್ಟ್ರಿಯು ಪ್ರಮಾಣೀಕರಿಸಿ ಪ್ರಪತ್ರ (ಫಾರಂ) 16 ಅನ್ನು ನೀಡುವ ಮೊದಲು ಅವರ ಕ್ಷಮತೆಯನ್ನು ನಿರ್ಧರಿಸಬೇಕು ಎಂದ ನ್ಯಾಯಾಲಯ.

Bar & Bench

“ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ, ಸ್ವಯಂ ವಾದ ಮಂಡಿಸುವ (ಪಾರ್ಟಿ ಇನ್‌ ಪರ್ಸನ್‌) ಅರ್ಜಿದಾರರು ತಾವು ಸ್ವಯಂ ವಾದ ಮಾಡುತ್ತೇವೆ ಎಂಬುದನ್ನು ಪ್ರಮಾಣೀಕರಿಸುವ ಮುನ್ನ ಕರಡು ಸಿದ್ಧಪಡಿಸಿ ವಾದ ಮಂಡಿಸುವ ಅವರ ಸಾಮರ್ಥ್ಯ‌ವನ್ನು ರಿಜಿಸ್ಟ್ರಿ ಕಚೇರಿಯು ಮೌಲ್ಯಮಾಪನಕ್ಕೆ ಒಳಪಡಿಸುವ ಅಗತ್ಯವಿದೆ” ಎಂದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಅಭಿಪ್ರಾಯಪಟ್ಟಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದ ಸರ್ವೇ ನಂಬರ್ 27ರಲ್ಲಿರುವ 3.10 ಎಕರೆ ಪ್ರದೇಶದಲ್ಲಿನ ಮುಸ್ಲಿಮರ ಖಬರಸ್ತಾನದ ಜಮೀನಿನ ಯಥೋಚಿತ ಸರ್ವೇ ನಡೆಸಿ ಹದ್ದುಬಸ್ತ್‌ ಮತ್ತು ದುರಸ್ತ್‌ ಮಾಡಿ ರಕ್ಷಿಸಲು ನಿರ್ದೇಶಿಸಬೇಕು ಕೋರಿ ಆರ್‌ ಟಿ ನಗರದ ಮೊಹಮ್ಮದ್‌ ಇಕ್ಬಾಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಖುದ್ದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಾದಿಸಿದ್ದರು. ಈ ಸಂಬಂಧ ಆದೇಶಿಸಿರುವ ಪೀಠವು “ಅರ್ಜಿಯು ದಾರಿತಪ್ಪಿಸುವ ಮನವಿಗಳಿಂದ ಕೂಡಿದೆ” ಎಂದು ಹೇಳಿ ವಜಾಗೊಳಿಸಿದೆ.

ಕರ್ನಾಟಕ ಹೈಕೋರ್ಟ್‌ ಪಾರ್ಟಿ ಇನ್‌ ಪರ್ಸನ್‌ ನಿಯಮಗಳು–2018ರ ಅಡಿಯಲ್ಲಿ, ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ಪ್ರಕರಣದಲ್ಲಿ ಸ್ವಯಂ ವಾದ ಮಂಡಿಸುವ ಸಾಮರ್ಥ್ಯ ಪಕ್ಷಕಾರನಿಗಿದೆಯೇ ಎಂಬುದನ್ನು ರಿಜಿಸ್ಟ್ರಿಯು ಪ್ರಮಾಣೀಕರಿಸಿ ಪ್ರಪತ್ರ (ಫಾರಂ) 16 ಅನ್ನು ನೀಡುವ ಮೊದಲು, ಅಂತಹ ವ್ಯಕ್ತಿಯು, ವಾದವನ್ನು ಕಾನೂನಿಗೆ ಅನುಗುಣವಾಗಿ ವಾದಿಸಬಲ್ಲರೇ ಹೇಗೆ ಎಂಬುದನ್ನು ಒರೆಗೆ ಹಚ್ಚಬೇಕು ಮತ್ತು ಕರಡು ರಚಿಸುವ ಅವರ ಸಾಮರ್ಥ್ಯವನ್ನು ಪರಿಶೀಲಿಸುವುದಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದಿದೆ.