ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಲಬುರ್ಗಿಯ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 16ರಂದು ನಡೆಸಲು ಉದ್ದೇಶಿಸಿರುವ ಆರ್ಎಸ್ಎಸ್ ಪಥಸಂಚಲನಕ್ಕೆ ಸರ್ಕಾರ ನೀಡಿರುವ ಷರತ್ತುಬದ್ಧ ಅನುಮತಿಯನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ನ ಕಲಬುರ್ಗಿ ಪೀಠವು ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಗುರುವಾರ ಇತ್ಯರ್ಥಪಡಿಸಿದೆ.
ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಆರ್ಎಸ್ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ನ್ಯಾಯಾಲಯದ ಸಲಹೆಯಂತೆ ಶಾಂತಿ ಸಭೆ ನಡೆಸಿದ ಬಳಿಕ, ಅರ್ಜಿದಾರರಿಗೆ ನವೆಂಬರ್ 16ರಂದು ಪಥಸಂಚಲನ ನಡೆಸಲು ಚಿತ್ತಾಪುರ ತಹಶೀಲ್ದಾರ್ ನೀಡಿರುವ ಅನುಮತಿಯನ್ನು ಪರಿಗಣಿಸಿದ ಪೀಠವು 300 ಆರ್ಎಸ್ಎಸ್ ಸದಸ್ಯರು ಹಾಗೂ 50 ವಾದ್ಯಗಾರರ ವಾದ್ಯವೃಂದಕ್ಕೆ ಪಥಸಂಚಲನ ನಡೆಸಲು ಅನುಮತಿಸಿತು.
ಅರ್ಜಿದಾರರಿಗೆ ನವೆಂಬರ್ 16ರಂದು ಪಥಸಂಚಲನ ನಡೆಸಲು ಷರತ್ತುಬದ್ಧ ಅನುಮತಿ ನೀಡಿ ನವೆಂಬರ್ 12ರಂದು ತಹಶೀಲ್ದಾರ್ ಕಚೇರಿಯಿಂದ ಹೊರಡಿಸಲಾದ ಆದೇಶ ಪ್ರತಿಯನ್ನು ದಾಖಲಿಸಿಕೊಳ್ಳಲಾಗಿದೆ. ಅನುಮತಿ ನೀಡಲು ರಾಜ್ಯ ಸರ್ಕಾರ ಮಾಡಿದ ಪ್ರಯತ್ನವನ್ನು ಶ್ಲಾಘಿಸಿರುವ ಅರ್ಜಿದಾರರ ಪರ ವಕೀಲರು, ಒಂದು ಬಾರಿಯ ಕ್ರಮವಾಗಿ ಪಥಸಂಚಲನದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಿಸುವಂತೆ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ಅಡ್ವೊಕೇಟ್ ಜನರಲ್ ಅವರು, ಹಿಂದಿನ ದತ್ತಾಂಶಗಳನ್ನು ಆಧರಿಸಿಯೇ ಸಂಖ್ಯೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅರ್ಜಿದಾರರ ಪರ ವಕೀಲರು, ಕಡೆಯ ಪಕ್ಷ ಬ್ಯಾಂಡ್ ಸದಸ್ಯರ ಸಂಖ್ಯೆಯನ್ನು 25ರಿಂದ 50 ಮಂದಿಗೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಎಜಿ ಸಮ್ಮತಿ ಸೂಚಿಸಿದ್ದಾರೆ. ಈ ಒಂದು ಬದಲಾವಣೆಯ ಹೊರತಾಗಿ ತಹಶೀಲ್ದಾರ್ ಅವರ ಆದೇಶ ಹಾಗೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ನವೆಂಬರ್ 16ರಂದು 300 ಸದಸ್ಯರು ಹಾಗೂ 50 ವಾದ್ಯಗಾರರ ವಾದ್ಯವೃಂದದೊಂದಿಗೆ ಆರ್ಎಸ್ಎಸ್ ಪಥಸಂಚಲನ ನಡೆಸಲು ಅನುಮತಿ ನೀಡಿ, ಅರ್ಜಿ ಇತ್ಯರ್ಥಪಡಿಸಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಪಥಸಂಚಲನಕ್ಕೆ ಅನುಮತಿ ನೀಡಿರುವುದಕ್ಕಾಗಿ ಅಧಿಕಾರಿಗಳಿಗೆ ಅರ್ಜಿದಾರರು ಕೃತಜ್ಞರಾಗಿದ್ದಾರೆ. ಅದಾಗ್ಯೂ, ಪಥಸಂಚಲನದಲ್ಲಿ 300 ಸದಸ್ಯರು ಹಾಗೂ 25 ವಾದ್ಯಗಾರರು ಭಾಗವಹಿಸುವಂತೆ ವಿಧಿಸಲಾಗಿರುವ ಷರತ್ತು ಮಾರ್ಪಡಿಸಿ, 600 ಸದಸ್ಯರು ಹಾಗೂ 50 ವಾದ್ಯಗಾರರಿಗೆ ಅವಕಾಶ ನೀಡಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಪಥಸಂಚಲನ ನಡೆಸಲು ಉದ್ದೇಶಿಸಲಾಗಿರುವ ಸ್ಥಳದ ಹತ್ತಿರದ ಪ್ರದೇಶಗಳಲ್ಲಿ ಅರ್ಜಿದಾರರು ಈ ಹಿಂದೆ ನಡೆಸಿದ್ದ ಸಭೆಗಳಲ್ಲಿ ಭಾಗವಹಿಸಿದವರ ಸಂಖ್ಯೆ ಪರಿಗಣಿಸಿದ ನಂತರವೇ 300 ಸದಸ್ಯರು ಹಾಗೂ 25 ವಾದ್ಯಗಾರರ ಸಂಖ್ಯೆ ನಿಗದಿಪಡಿಸಲಾಗಿದೆ” ಎಂದು ಪೀಠಕ್ಕೆ ತಿಳಿಸಿದರು.
ವಾದ ಮುಂದುವರಿಸಿದ ಅರುಣ್ ಶ್ಯಾಮ್ ಅವರು “ಸಂಘಟನೆಯು 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪಥಸಂಚಲನ ಹಾಗೂ ಸಭೆ ನಡೆಸಲಾಗುತ್ತಿದೆ. ಹತ್ತಿರದ ಜನರ ಭಾವನೆಗಳ ಬಗ್ಗೆ ನಮಗೆ ಕಾಳಜಿ ಇದೆ. 100 ವರ್ಷಗಳ ಆಚರಣೆಯ ವಿಶೇಷ ಸಂದರ್ಭವಾಗಿರುವ ಕಾರಣಕ್ಕಾಗಿಯೇ ಒಂದು ಬಾರಿಯ ಕ್ರಮವಾಗಿ ಈ ಮನವಿ ಮಾಡಲಾಗುತ್ತಿದೆ ಎಂದರಲ್ಲದೆ, ಬ್ಯಾಂಡ್ ಸದಸ್ಯರ ಸಂಖ್ಯೆಯನ್ನು 25ರಿಂದ 50ಕ್ಕೆ ಹೆಚ್ಚಿಸಬೇಕು” ಎಂದು ಕೋರಿದರು.
ಅರ್ಜಿದಾರರ ಮನವಿಗೆ ಅಡ್ವೊಕೇಟ್ ಜನರಲ್ ಅವರು ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ, ತಹಶೀಲ್ದಾರ್ ಆದೇಶದಲ್ಲಿ ವಿಧಿಸಲಾದ ಎರಡನೇ ಷರತ್ತನ್ನು ಮಾರ್ಪಡಿಸಿದ ಪೀಠವು ಬ್ಯಾಂಡ್ನಲ್ಲಿರುವ ಸದಸ್ಯರ ಸಂಖ್ಯೆಯನ್ನು 25ರಿಂದ 50ಕ್ಕೆ ಹೆಚ್ಚಿಸಿತು.