Karnataka HC and  JSW
Karnataka HC and JSW 
ಸುದ್ದಿಗಳು

ಸಂಪುಟದಲ್ಲಿ ನಿರ್ಧಾರ ಕೈಗೊಳ್ಳದೇ ಸರ್ಕಾರಿ ಆದೇಶ ಹೊರಡಿಸುವುದು ಎತ್ತಿನ ಮುಂದೆ ಚಕ್ಕಡಿ ಹೂಡಿದ ಹಾಗೆ: ಹೈಕೋರ್ಟ್‌

Bar & Bench

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳದೇ ಸರ್ಕಾರಿ ಆದೇಶ ಹೊರಡಿಸುವುದು ಎತ್ತಿನ ಮುಂದೆ ಚಕ್ಕಡಿ ಹೂಡಿದ ಹಾಗೆ ಎಂದಿರುವ ಕರ್ನಾಟಕ ಹೈಕೋರ್ಟ್, ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಉಕ್ಕಿನ ಕಾರ್ಖಾನೆ ಜೆಎಸ್‌ಡಬ್ಲ್ಯು ಲಿಮಿಟೆಡ್‌ಗೆ 3,667 ಎಕರೆ ಭೂಮಿ ವರ್ಗಾವಣೆ/ಮಾರಾಟದ ವಿಚಾರದಲ್ಲಿ ವಾಸ್ತವಾಂಶವನ್ನು ಬಹಿರಂಗಪಡಿಸುವಂತೆ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಸಾಮಾಜಿಕ ಕಾರ್ಯಕರ್ತ ಕೆ ಎ ಪೌಲ್‌ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ಸಂಪುಟ ಸಭೆಯ ಒಪ್ಪಿಗೆ ಪಡೆಯದೇ ಮೇ 6ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಂಪುಟದ ಹಲವು ಸಚಿವರ ವಿರೋಧದ ಹೊರತಾಗಿಯೂ ಅತ್ಯಂತ ಕಡಿಮೆ ದರಕ್ಕೆ ಭೂಮಿ ಪರಭಾರೆ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಮಂಡಿಸಿತ್ತು ಎಂದು ಅರ್ಜಿದಾರರು ವಾದಿಸಿದ್ದರು. ಈ ಸಂಬಂಧ ವಿಚಾರಣೆಯ ವೇಳೆ ಪೀಠವು ಸಂಪುಟದ ಒಪ್ಪಿಗೆ ಇಲ್ಲದೆ ಹೇಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಪ್ರಶ್ನಿಸಿತು.

“ಮೇ 6ರ ಸರ್ಕಾರಿ ಆದೇಶದ ಜೊತೆಗೆ ಜೂನ್‌ 15ರ ಮೆಮೊ ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಂಪುಟದ ಒಪ್ಪಿಗೆ ಇಲ್ಲದೇ ಅವುಗಳನ್ನು ಜಾರಿ ಮಾಡುವುದಿಲ್ಲವೇ ಎಂಬುದರ ಕುರಿತು ನಿರ್ದಿಷ್ಟವಾಗಿ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು. ಸಂಪುಟದ ಒಪ್ಪಿಗೆ ಇಲ್ಲದೇ ಸರ್ಕಾರಿ ಆಸ್ತಿಯ ಮಾರಾಟ/ವರ್ಗಾವಣೆ ಆದೇಶ ಹೊರಡಿಸಬಹುದೇ ಎಂಬುದರ ಕುರಿತೂ ಹೆಚ್ಚುವರಿ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು” ಎಂದು ಪೀಠ ಹೇಳಿದೆ.

ಕಳೆದ ವಿಚಾರಣೆಯ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಜೂನ್‌ 14ರಂದು ಬರೆದಿರುವ ಪತ್ರದ ಜೊತೆಗೆ ಅನುಪಾಲನಾ ಮೊಮೆವನ್ನು ದಾಖಲೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಏಪ್ರಿಲ್‌ 26ರ ಸಂಪುಟ ಸಭೆಯಲ್ಲಿ ಜೆಎಸ್‌ಡಬ್ಲ್ಯು ಲಿಮಿಟೆಡ್‌ಗೆ ಕ್ರಮವಾಗಿ 2000.58 ಎಕರೆ ಮತ್ತು 1666.73 ಎಕರೆ ಭೂಮಿ ಪರಭಾರೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅದಾಗ್ಯೂ, ಮುಂದೆ ನಡೆದ ಸಭೆಗಳಲ್ಲಿ ನಿರ್ಧಾರವನ್ನು ಖಚಿತಪಡಿಸಿರಲಿಲ್ಲ ಎಂದೂ ಪತ್ರದಲ್ಲಿ ನಮೂದಿಸಲಾಗಿತ್ತು.

ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರೊ. ಕೆ ಇ ರಾಧಾಕೃಷ್ಣ ಅವರನ್ನು ಪಿಐಎಲ್‌ನಲ್ಲಿ ಸಹ ಅರ್ಜಿದಾರರನ್ನಾಗಿ ಸೇರಿಸಲು ನ್ಯಾಯಾಲಯವು ಅನುಮತಿಸಿದ್ದು, ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿದೆ.