CJI Ramana and SCBA
CJI Ramana and SCBA 
ಸುದ್ದಿಗಳು

ಭೌತಿಕ ವಿಚಾರಣೆ ಆರಂಭ, ನ್ಯಾಯಮೂರ್ತಿಗಳಾಗಿ ವಕೀಲರಿಗೆ ಪದೋನ್ನತಿ ಮುಂತಾದ ವಿಚಾರಗಳ ಕುರಿತು ಸಿಜೆಐಗೆ ಎಸ್‌ಸಿಬಿಎ ಪತ್ರ

Bar & Bench

ಸುಪ್ರೀಂ ಕೋರ್ಟ್ ವಕೀಲರ ಸಂಘ​​(ಎಸ್‌ಸಿಬಿಎ) ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಪತ್ರ ಬರೆದಿದ್ದು, ಭೌತಿಕ ವಿಚಾರಣೆ ಪುನಾರಂಭ, ಸುಪ್ರೀಂಕೋರ್ಟ್‌ ವಕೀಲರಿಗೆ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ತಕ್ಷಣ ಗಮನ ಹರಿಸಬೇಕು ಎಂದು ಮನವಿ ಮಾಡಿದೆ.

ಶೋಧನಾ ಸಮಿತಿಯೊಂದು ಗುರುತಿಸಿದ್ದ ವಿವಾದಿತ ಸರ್ವೋಚ್ಚ ನ್ಯಾಯಾಲಯದ ವಕೀಲರ ಪಟ್ಟಿಯನ್ನು ಎಸ್‌ಸಿಬಿಎ ಮರುಪರಿಶೀಲಿಸಿದ್ದು ಈ ಹೆಸರುಗಳನ್ನು ಹೈಕೋರ್ಟ್‌ ವಕೀಲರ ಸಂಘದ ವಕೀಲರುಗಳ ಜೊತೆಗೆ ಹೈಕೋರ್ಟ್‌ ಕೊಲಿಜಿಯಂಗಳು ತಮ್ಮ ಶಿಫಾರಸಿನ ವೇಳೆ ಪದೋನ್ನತಿಗಾಗಿ ಪರಿಶೀಲಿಸಬೇಕು ಎಂದು ಪ್ರಾರ್ಥಿಸಿದೆ.

ದೇಶದ ರಾಜಧಾನಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಭೌತಿಕ ಕಲಾಪಗಳನ್ನು ಆರಂಭಿಸಲು ಅವಕಾಶ ನೀಡಬೇಕು ಎಂದು ಕೂಡ ಸಂಘ ಕೋರಿದೆ. ಹಿರಿಯ ನ್ಯಾಯವಾದಿಗಳ ಹುದ್ದೆಗಳಿಗೆ ಬಾಕಿ ಇರುವ ಹೆಸರುಗಳನ್ನು ಅನುಮತಿಸಲು ನ್ಯಾಯಾಲಯದ ಪೂರ್ಣ ಪೀಠದ ಸಭೆಯನ್ನು ಸಿಜೆಐ ಅವರು ಕರೆಯಬೇಕು. ಹೆಚ್ಚಿನ ಭದ್ರತೆ ಇರುವ ಪ್ರದೇಶಗಳಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುವಂತೆ ‘ಪ್ರಾಕ್ಸಿಮಿಟಿ ಕಾರ್ಡ್‌ಗಳನ್ನು ಒದಗಸಬೇಕು. ನಿರೀಕ್ಷಣಾ ಪ್ರದೇಶಗಳಾಗಿ ಗ್ರಂಥಾಲಯ ಮತ್ತು ಲಾಂಜ್‌ಗಳನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ವಿನಂತಿಸಲಾಗಿದೆ.

ವಕೀಲರ ಸಮಸ್ಯೆಗಳ ಬಗ್ಗೆ ತಾವು ಸದಾ ಆಳವಾದ ಕಾಳಜಿ ವಹಿಸಿದ್ದೀರಿ. ಎಸ್‌ಸಿಬಿಎ ಕಾರ್ಯಕಾರಿ ಸಮಿತಿ ನೀಡಿದ ಸಲಹೆಗಳನ್ನು ಸ್ವೀಕರಿಸಿದ್ದೀರಿ. ಸಂಸ್ಥೆಯ ಮುಖ್ಯಸ್ಥರಾಗಿ ನೀವು ಅಂತಹ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣದ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ನಮಗೆ ಭರವಸೆ ಇದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.