Justice K Haripal and Kerala High Court 
ಸುದ್ದಿಗಳು

ಎಸ್‌ಡಿಪಿಐ, ಪಿಎಫ್‌ಐಗಳು ಗಂಭೀರ ಹಿಂಸಾಕೃತ್ಯಗಳಲ್ಲಿ ತೊಡಗಿರುವ ಉಗ್ರವಾದಿ ಸಂಘಟನೆಗಳು: ಕೇರಳ ಹೈಕೋರ್ಟ್

Bar & Bench

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಸಂಜಿತ್‌ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ತಿರಸ್ಕರಿಸುವ ಕೇರಳ ಹೈಕೋರ್ಟ್‌ ಇದೇ ವೇಳೆ ಸೋಶಿಯಲ್ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಮತ್ತು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಬಗ್ಗೆ ಕಟು ಅವಲೋಕಗಳನ್ನು ಮಾಡಿದೆ [ಅರ್ಷಿಕಾ ಎಸ್‌ ವರ್ಸ್‌ ಕೇರಳ ರಾಜ್ಯ].

ಪ್ರಕರಣದ ವಿಚಾರಣೆಯನ್ನು ಇತ್ತೀಚೆಗೆ ನಡೆಸಿದ ನ್ಯಾ. ಹರಿಪಾಲ್ ಅವರು ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ಉಗ್ರವಾದಿ ಸಂಘಟನೆಗಳು ಎಂದು ಕರೆದಿದ್ದು, ಈ ಸಂಘಟನೆಗಳ ಸದಸ್ಯರ ಹೆಸರುಗಳು ಹಿಂಸಾಚಾರದ ಘಟನೆಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತವೆ. ಈ ಸಂಘಟನೆಗಳನ್ನು ನಿಷೇಧಿಸಲಾಗಿಲ್ಲ ಎಂದರು.

"ಎಸ್‌ಡಿಪಿಐ ಮತ್ತು ಪಿಎಫ್‌ಐಗಳು ಗಂಭೀರ ಹಿಂಸಾಚಾರ ಪ್ರಕರಣಗಳಲ್ಲಿ ಭಾಗವಹಿಸುವ ಉಗ್ರವಾದಿ ಸಂಘಟನೆಗಳಾಗಿವೆ. ಆದಾಗ್ಯೂ ಇವುಗಳು ನಿಷೇಧಿಸಲ್ಪಟ್ಟೇನೂ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ (ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ) ಸಂಘಟನೆಯ ರಾಜ್ಯ ಅಥವಾ ರಾಷ್ಟ್ರ ಮಟ್ಟದ ನಾಯಕರ ಪಾತ್ರವನ್ನು ತನಿಖಾಧಿಕಾರಿಯು ಅಲ್ಲಗಳೆದಿದ್ದಾರೆ. 90 ದಿನದ ಒಳಗೆ ತನಿಖೆಯ ಅಂತಿಮ ವರದಿ ಸಲ್ಲಿಕೆ ಮಾಡಿರುವುದು ಅವರ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ," ಎಂದು ಅವರು ಅಭಿಪ್ರಾಯಪಟ್ಟರು.

ಮುಂದುವರೆದು ನ್ಯಾಯಾಲಯವು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸದಸ್ಯರ ಕೈವಾಡವಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಎರಡೂ ಸಂಘಟನೆಗಳ ನಡುವೆ ಸುದೀರ್ಘ ತಿಕ್ಕಾಟವಿದೆ ಎಂದಿತು.