<div class="paragraphs"><p>Supreme Court</p></div>

Supreme Court

 
ಸುದ್ದಿಗಳು

ಆರೋಪಿಯಲ್ಲದವರ ವಿರುದ್ಧ ವಿಚಾರಣೆ ನಡೆಸುವ ಅಧಿಕಾರವನ್ನುವಿಚಾರಣಾ ನ್ಯಾಯಾಲಯ ಅಪರೂಪವಾಗಿ ಬಳಸಬೇಕು: ಸುಪ್ರೀಂ

Bar & Bench

ಅಪರಾಧ ದಂಡ ಸಂಹಿತೆಯ ಸೆಕ್ಷನ್‌ 319ರ ಅಡಿ ಆರೋಪಿಗಳೆಂದು ಆರೋಪಪಟ್ಟಿ ಸಲ್ಲಿಸದೇ ಇರುವ ವ್ಯಕ್ತಿಗಳ ವಿರುದ್ಧ ವಿಚಾರಣೆ ನಡೆಸುವಾಗ ವಿಚಾರಣಾ ನ್ಯಾಯಾಲಯಕ್ಕೆ ನೀಡಲಾದ ಅಧಿಕಾರ ವಿವೇಚನಾಯುಕ್ತ ಮತ್ತು ಅಸಾಧಾರಣವಾದುದಾಗಿದ್ದು ಅದನ್ನು ಮಿತವಾಗಿ ಚಲಾಯಿಸಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ [ಸಾಗರ್‌ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಹರ್ದೀಪ್ ಸಿಂಗ್ ಮತ್ತು ಪಂಜಾಬ್ ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ ಸೆಕ್ಷನ್ 319 ರ ವ್ಯಾಪ್ತಿ ಮತ್ತು ಮಿತಿಯನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಉತ್ತಮವಾಗಿ ಇತ್ಯರ್ಥಪಡಿಸಿದೆ ಎಂದು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಅಭಯ್ ಎಸ್ ಓಕಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ತನಿಖೆ ಅಥವಾ ವಿಚಾರಣೆಯ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯದಿಂದ, ಅಪರಾಧ ಎಸಗಿದ್ದಾರೆಂದು ನ್ಯಾಯಾಲಯ ಭಾವಿಸುವ ಆರೋಪಿಗಳಲ್ಲದ ವ್ಯಕ್ತಿಗಳ ವಿರುದ್ಧ ಮುಂದುವರೆಯಲು ವಿಚಾರಣಾ ನ್ಯಾಯಾಲಯಕ್ಕೆ ಸಿಆರ್‌ಪಿಸಿ ಸೆಕ್ಷನ್‌ 319 ಅಧಿಕಾರ ನೀಡುತ್ತದೆ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 319ರ ಅಡಿ ಮೇಲ್ಮನವಿದಾರ ಸಾಗರ್‌ ಅವರನ್ನು ಕೊಲೆ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸಲು ಸಮನ್ಸ್‌ ನೀಡುವಂತೆ ದೂರುದಾರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಈ ಕುರಿತು ಮೇಲ್ಮನವಿ ಸ್ವೀಕರಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಒಪ್ಪಿರಲಿಲ್ಲ. ಹೀಗಾಗಿ ಅರ್ಜಿದಾರ ಸಾಗರ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ವಾದ ಆಲಿಸಿದ ಸುಪ್ರೀಂ ಕೋರ್ಟ್‌ ಮೇಲ್ಮನವಿಯನ್ನು ಪುರಸ್ಕರಿಸಿ ಹೈಕೋರ್ಟ್‌ ಆದೇಶವನ್ನು ಬದಿಗೆ ಸರಿಸಿತು.