ಸುದ್ದಿಗಳು

ಮಾಲೆಗಾಂವ್ ಸ್ಫೋಟ: ಎದುರು ಪಕ್ಷದವರಿಗೆ ದಾಖಲೆ ಒದಗಿಸುವಂತೆ ಆರೋಪಿ ಸೇನಾಧಿಕಾರಿಗೆ ತಾಕೀತು ಮಾಡಿದ ಬಾಂಬೆ ಹೈಕೋರ್ಟ್

Bar & Bench

ತಮ್ಮ ವಾದ ಮಂಡನೆಗೂ ಮುನ್ನ ಅದಕ್ಕಾಗಿ ತಾವು ಆಧರಿಸಿರುವ ದಾಖಲೆಯನ್ನು ಎದುರು ಪಕ್ಷದವರಿಗೂ ನೀಡಿರುವುದನ್ನು ಖಾತರಿಪಡಿಸಿಕೊಳ್ಳುವಂತೆ ಮಾಲೆಗಾಂವ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಅವರಿಗೆ ಬಾಂಬೆ ಹೈಕೋರ್ಟ್‌ ಬುಧವಾರ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಮನೀಶ್‌ ಪಿಟಾಲೆ ಅವರಿದ್ದ ಪೀಠ “ಇದೊಂದು ಮುಕ್ತ ನ್ಯಾಯಾಲಯವಾಗಿದ್ದು, ಲೆಫ್ಟಿನೆಂಟ್‌ ಪುರೋಹಿತ್‌ ಅವರು ಯಾವುದೇ ದಾಖಲೆಗಳನ್ನು ನ್ಯಾಯಾಲಯವು ಪರಿಶೀಲಿಸಬೇಕು ಎಂದು ಬಯಸುವುದಾದರೆ ಅದನ್ನು ಅಗತ್ಯವಾಗಿ ಎದುರು ಪಕ್ಷದವರಿಗೂ ನೀಡಬೇಕು," ಎಂದು ಒತ್ತಿ ಹೇಳಿದೆ. ಇದೇ ವೇಳೆ ಅಂತಹ ದಾಖಲೆ ಒದಗಿಸಿದಾಗ ಮಾಧ್ಯಮಗಳಿಗೆ ಹಂಚಿಕೊಳ್ಳದಂತೆ ಎದುರು ಪಕ್ಷದವರಿಗೆ ನಿರ್ಬಂಧ ವಿಧಿಸಬೇಕು ಎಂಬ ಪುರೋಹಿತ್‌ ಅವರ ಮನವಿಯನ್ನು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿರಸ್ಕರಿಸಿತು.

ಇದೊಂದು ಮುಕ್ತ ನ್ಯಾಯಾಲಯ. ನೀವು ಯಾವುದೇ ದಾಖಲೆಗಳನ್ನು ಆಧರಿಸುವುದಾದರೆ, ಅದನ್ನು ಪಡೆಯುವ ಹಕ್ಕು ಎದುರು ಪಕ್ಷದವರಿಗಿದೆ.
ಬಾಂಬೆ ಹೈಕೋರ್ಟ್‌

ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಅಗತ್ಯ ಕಾರ್ಯವಿಧಾನದ ಒಪ್ಪಿಗೆ ಪಡೆಯದೆ ಎನ್‌ಐಎ ವಿಶೇಷ ನ್ಯಾಯಾಲಯ ಪ್ರಕರಣವನ್ನು ಪರಿಗಣಿಸಿರುವ ಸಂಬಂಧ ಪುರೋಹಿತ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿತ್ತು.

ಪುರೋಹಿತ್ ಪರವಾಗಿ ವಾದ ಮಂಡಿಸಿದ ವಕೀಲ ಶ್ರೀಕಾಂತ್ ಶಿವಾಡೆ ಅವರು ಪುರೋಹಿತ್‌ ಸೇನಾಧಿಕಾರಿಗಳಿಗೆ ಬರೆದಿದ್ದು ಎನ್ನಲಾದ ಪತ್ರವೊಂದನ್ನು ದಾಖಲೆ ರೂಪದಲ್ಲಿ ಬುಧವಾರ ನ್ಯಾಯಪೀಠಕ್ಕೆ ಸಲ್ಲಿಸಿದರು. ಪ್ರತಿಯ ಪರಿಗಣನೆಗೂ ಮೊದಲು ಇದನ್ನು ಎದುರು ಪಕ್ಷದವರಿಗೂ ನೀಡಿದ್ದೀರಾ ಎಂದು ನ್ಯಾಯಮೂರ್ತಿ ಶಿಂಧೆ ಅವರು ಪ್ರಶ್ನಿಸಿದಾಗ ಶಿವಾಡೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಆಗ ನ್ಯಾಯಾಲಯ ವಾದ ಮಂಡನೆಗೂ ಮುನ್ನ ದಾಖಲೆಯ ಪ್ರತಿಯನ್ನು ಎದುರು ಪಕ್ಷದವರಿಗೆ ಒದಗಿಸುವಂತೆ ಸೂಚಿಸಿತು. ದಾಖಲೆಗಳು ಗೌಪ್ಯವಾಗಿದ್ದು ಅವುಗಳನ್ನು ಎದುರು ಪಕ್ಷದವರಿಗೆ ನೀಡಿದರೆ ಸಮಸ್ಯೆಗಳ ಸರಮಾಲೆಗೆ ಅಹ್ವಾನ ನೀಡಿದಂತಾಗುತ್ತದೆ ಎಂದು ಶಿವಾಡೆ ಆತಂಕ ವ್ಯಕ್ತಪಡಿಸಿದರು. ಆದರೆ ದಾಖಲೆಯಗಳನ್ನು ಯಾರ ಗಮನಕ್ಕೂ ತರಲು ಬಯಸದೇ ಇದ್ದರೆ ಅದನ್ನು ನೀಡಬಾರದಿತ್ತು ಎಂದು ನ್ಯಾ. ಶಿಂಧೆ ಅಭಿಪ್ರಾಯಪಟ್ಟರು.

ಪತ್ರವನ್ನು ದಾಖಲೆಯಲ್ಲಿ ನೀಡಲು ನಿರ್ಬಂಧವಿದ್ದುದರಿಂದಾಗಿ ಅದನ್ನು ಸಲ್ಲಿಸಿರಲಿಲ್ಲ ಎಂದು ನ್ಯಾ. ಶಿಂಧೆ ಅವರು ಪ್ರಶ್ನೆಯೊಂದಕ್ಕೆ ಶಿವಾಡೆ ಉತ್ತರಿಸಿದರು. ಸಹಜ ನ್ಯಾಯ ತತ್ವದ ಗುರಾಣಿಯಡಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಶಿವಾಡೆ ಮುಂದಾದರು. ಆಗ ನ್ಯಾಯಾಲಯವು “ಸಹಜ ನ್ಯಾಯ ಎಂಬುದು ಎದುರು ಪಕ್ಷದವರಿಗೂ ಅನ್ವಯಿಸುತ್ತದೆ!” ಎಂದು ಹೇಳಿತು. ದಾಖಲೆ ಸಲ್ಲಿಕೆ ಯಾವುದೇ ಆದೇಶಕ್ಕೆ ವಿರುದ್ಧವಾಗಿದ್ದರೆ ಅದನ್ನು ಸಲ್ಲಿಸುವ ಮೊದಲು ಶಿವಾಡೆ ಅವರು ತಮ್ಮ ಕಕ್ಷೀದಾರರನ್ನು ಸಂಪರ್ಕಿಸಬೇಕು ಎಂದು ನ್ಯಾಯಾಲಯ ಸಲಹೆ ನೀಡಿತು. ಅದಕ್ಕೆ ನ್ಯಾಯಾಲಯ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಅನುಮತಿಯನ್ನೂ ಪಡೆಯಬಹುದು ಎಂದಿತು. ಈ ಹಂತದಲ್ಲಿ ಮಾಧ್ಯಮಗಳಿಗೆ ದಾಖಲೆ ಹಂಚದಂತೆ ತಡೆಯಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಗೌಪ್ಯ ವಿಚಾರಣೆಗೂ ಋಣಾತ್ಮಕವಾಗಿ ಪ್ರತಿಕ್ರಿಯಿಸಿತು.

"ಒಮ್ಮೆ ನಾವು ವಿವರವಾದ ತೀರ್ಪು ಬರೆದರೆ, ಅದನ್ನು ಯಾರಾದರೂ ಪಡೆಯಬಹುದಾಗಿದೆ. ನಾವು ಕಾರಣಗಳನ್ನು ನೀಡುತ್ತೇವೆ. ನಮಗೆ ಸಲ್ಲಿಸಿದ ಸಾಕ್ಷ್ಯಗಳನ್ನೇ ನಾವೂ ಅವಲಂಬಿಸಿರುತ್ತೇವೆ" ಎಂದು ನ್ಯಾಯಾಲಯ ಹೇಳಿತು. ಶಿವಾಡೆ ದಾಖಲೆ ಸಲ್ಲಿಸುವ ಬಗ್ಗೆ ಮತ್ತೆ ಕಳವಳ ವ್ಯಕ್ತಪಡಿಸಿದಾಗ ಪೀಠ ಅಫಿಡವಿಟ್ಟನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತು. “ಅವರು ಅದನ್ನು ಓದಿದ ಬಳಿಕ ದಾಖಲೆಯಲ್ಲಿ ಪರಿಗಣಿಸಬೇಕೆ ಎಂಬುದನ್ನು ನಿರ್ಧರಿಸುತ್ತಾರೆ” ಎಂದಿತು. ಅಫಿಡವಿಟ್‌ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಿರುವ ನ್ಯಾಯಾಲಯ ಮಾರ್ಚ್‌ 17ಕ್ಕೆ ವಿಚಾರಣೆ ಮುಂದೂಡಿದೆ.