VK Prakash and Kerala High Court Image source (VK Prakash): Facebook
ಸುದ್ದಿಗಳು

ಲೈಂಗಿಕ ಕಿರುಕುಳ: ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ಗೆ ಮಲಯಾಳಂ ನಿರ್ದೇಶಕ ವಿ ಕೆ ಪ್ರಕಾಶ್ ಅರ್ಜಿ

ಇಂದು ನ್ಯಾಯಮೂರ್ತಿ ಸಿಎಸ್ ಡಯಾಸ್ ಅವರೆದುರು ಪ್ರಕಾಶ್ ಪರ ವಕೀಲರು ಪ್ರಕರಣ ಪ್ರಸ್ತಾಪಿಸುವ ಸಾಧ್ಯತೆಯಿದೆ.

Bar & Bench

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಲಯಾಳಂ ಚಿತ್ರ ನಿರ್ದೇಶಕ ವಿ ಕೆ ಪ್ರಕಾಶ್‌ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿ ಕುರಿತು ನ್ಯಾ.  ಕೆ ಹೇಮಾ ಸಮಿತಿ ವರದಿ ಪ್ರಕಟವಾದ ಬೆನ್ನಿಗೇ ಪ್ರಕಾಶ್‌ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ  ಆಗಸ್ಟ್ 19 ರಂದು ಸಾರ್ವಜನಿಕವಾಗಿ ಬಿಡುಗಡೆಯಾದ ನಂತರ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಅನೇಕ ಚಿತ್ರಕರ್ಮಿಗಳಲ್ಲಿ (ನಟರು, ನಿರ್ದೇಶಕರು, ನಿರ್ಮಾಪಕರು ಇತ್ಯಾದಿ) ಪ್ರಕಾಶ್ ಒಬ್ಬರು.

2022 ರಲ್ಲಿ ಕೊಲ್ಲಂನ ಹೋಟೆಲ್‌ನಲ್ಲಿ ನಿರ್ದೇಶಕರಿಗೆ ಕಥೆ ಹೇಳಲು ತೆರಳಿದ್ದಾಗ ಪ್ರಕಾಶ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಚಿತ್ರಕಥೆಗಾರ್ತಿಯೊಬ್ಬರು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ದೂರು ಸಲ್ಲಿಸಿದ್ದರು.

ಆರೋಪವನ್ನು ಬಲವಾಗಿ ನಿರಾಕರಿಸಿರುವ ಪ್ರಕಾಶ್‌ ಇದೊಂದು ಬ್ಲಾಕ್‌ಮೇಲ್‌ ತಂತ್ರ. ಹಣ ಸುಲಿಗೆ ಮಾಡುವುದಕ್ಕಾಗಿ ತನ್ನ ಮೇಲೆ ಆರೋಪ ಮಾಡಲಾಗಿದೆ. ಇದೇ ಮಹಿಳೆ ಮತ್ತೊಬ್ಬ ನಿರ್ಮಾಪಕರ ಮೇಲೂ ಬ್ಲಾಕ್‌ಮೇಲ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹತ್ವದ ಸಂಗತಿ ಎಂದರೆ ಮಾಲಿವುಡ್‌ನ ವಿವಿಧ ವ್ಯಕ್ತಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಹೆಚ್ಚು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಾಜ್ಯ ಸರ್ಕಾರ ರಚಿಸಿದೆ.

ನಟರಾದ ಮುಖೇಶ್, ಸಿದ್ದೀಕ್‌, ನಿರ್ದೇಶಕ ರಂಜಿತ್ ಸೇರಿದಂತೆ ವಿವಿಧ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.