Non Veg Stall
Non Veg Stall  
ಸುದ್ದಿಗಳು

ವಿಷಾಹಾರವಾದ ಶವರ್ಮಾ: ಸುರಕ್ಷತಾ ಮಾನದಂಡ ಜಾರಿಗೊಳಿಸುವಂತೆ ಕರೆ ನೀಡಿದ ಕೇರಳ ಹೈಕೋರ್ಟ್

Bar & Bench

ಶವರ್ಮಾ ಮಾಂಸಾಹಾರ ತಿಂದು ಕೇರಳದ ಕಾಸರಗೋಡಿನ ಬಾಲಕಿ ಸಾವನ್ನಪ್ಪಿ, ಹಲವು ಮಂದಿ ಆಸ್ಪತ್ರೆ ಸೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ರಾಜ್ಯಾದ್ಯಂತ ಆಹಾರ ಸುರಕ್ಷತಾ ಮಾನದಂಡಗಳ ನಿರಂತರ ಮೇಲ್ವಿಚಾರಣೆ ಮತ್ತು ಅನುಷ್ಠಾನಗೊಳಿಸುವಂತೆ ಕರೆ ನೀಡಿದೆ.

ಆಹಾರ ಸುರಕ್ಷತೆ ಕಮಿಷನರೇಟ್ ತೆಗೆದುಕೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠ, “…ಈ ಬಗೆಯ ಪ್ರತಿಕೂಲ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಮಾತ್ರ ಇಂತಹ ಕ್ರಮಗಳು ಅಸ್ತಿತ್ವದಲ್ಲಿರಬಾರದು. ವಿಚಾರಣೆಗಿಂತಲೂ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಉತ್ತಮ” ಎಂದು ಅಭಿಪ್ರಾಯಪಟ್ಟಿತು.

ಆಹಾರ ಸುರಕ್ಷತಾ ಮಾನದಂಡಗಳ ನಿರಂತರ ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಾಧ್ಯವಾಗುವಂತೆ ಸ್ವಯಂ ಪ್ರೇರಿತ ಪ್ರಕರಣವನ್ನು ಮುಕ್ತವಾಗಿಡಲು ಉದ್ದೇಶಿಸಿರುವುದಾಗಿ ನ್ಯಾಯಾಲಯ ಹೇಳಿತು.

ಕಾಸರಗೋಡು ಜಿಲ್ಲೆಯ ಉಪಾಹಾರ ಗೃಹವೊಂದರಲ್ಲಿ ತಯಾರಿಸಿದ್ದ ಶವರ್ಮಾ ತಿಂದು 16 ವರ್ಷದ ಬಾಲಕಿ ದೇವಾನಂದ ಸಾವನ್ನಪ್ಪಿದ್ದಳು. ಜೊತೆಗೆ 57 ಮಂದಿ ಅಸ್ವಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಕುರಿತಂತೆ ನ್ಯಾಯಾಲಯ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿತ್ತು. ಎರಡು ವಾರಗಳ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.