High Court of Karnataka
High Court of Karnataka 
ಸುದ್ದಿಗಳು

ಶಿವಮೊಗ್ಗ‌ ಹಾಲು ಉತ್ಪಾದಕರ ಸಂಘದ ನಾಮನಿರ್ದೇಶಿತ ಸದಸ್ಯರ ಅನರ್ಹ ಆದೇಶ ರದ್ದು; ಚುನಾವಣಾಧಿಕಾರಿಗೆ ಹೈಕೋರ್ಟ್‌ ದಂಡ

Bar & Bench

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನದಿಂದ ಎಚ್ ಕೆ ಬಸಪ್ಪ ಹಾಗೂ ಟಿ ಶಿವಶಂಕರಪ್ಪ ಅವರನ್ನು ಅನರ್ಹಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಪಡಿಸಿ, ತೀರ್ಪು ನೀಡಿದೆ. ಮುಂದಿನ ಆರು ವಾರಗಳಲ್ಲಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮತದಾನ ಮಾಡದಂತೆ ನಾಮ ನಿರ್ದೇಶಿತ ಸದಸ್ಯರನ್ನು ಅನರ್ಹಗೊಳಿಸಿರುವುದು ಮತ್ತು ಅಧ್ಯಕ್ಷರಾಗಿ ಎನ್ ಎಚ್ ಶ್ರೀಪಾದರಾವ್ ಆಯ್ಕೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಎಚ್ ಕೆ ಬಸಪ್ಪ ಹಾಗೂ ಟಿ ಶಿವಶಂಕರಪ್ಪ ಸಲ್ಲಿಸಿದ್ದ ಮನವಿಗಳನ್ನು ನ್ಯಾಯಮೂರ್ತಿ ಆರ್ ದೇವದಾಸ್‌ ಅವರ ನೇತೃತ್ವದ ಏಕಸದಸ್ಯ ಪೀಠ ಎತ್ತಿ ಹಿಡಿದಿದೆ.

ನಾಮ ನಿರ್ದೇಶಿತ ನಿರ್ದೇಶಕರನ್ನು ಅನರ್ಹಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿರುವುದು ಕಾನೂನು ಬಾಹಿರ ಕ್ರಮವಾಗಿದೆ. ಅಲ್ಲದೇ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆರು ವಾರಗಳಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶಿಸಿದೆ.

ತಲಾ 10 ಸಾವಿರ ರೂಪಾಯಿ ದಂಡ: ಅರ್ಜಿದಾರರನ್ನು ಸಂಘದ ನಿರ್ದೇಶಕರ ಸ್ಥಾನದಿಂದ ವಜಾಗೊಳಿಸಿರುವ ಚನ್ನಗಿರಿ ಮತ್ತು ಸಾಗರ ತಾಲ್ಲೂಕು ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್‌ ಅವರುಗಳಿಗೆ ತಲಾ ರೂ. 10 ಸಾವಿರ ದಂಡವನ್ನು ನ್ಯಾಯಾಲಯ ವಿಧಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಅಕ್ರಮವಾಗಿ ಚುನಾವಣೆ ನಡೆಸಿರುವ ಚುನಾವಣಾಧಿಕಾರಿಗೂ ಸಹ ರೂ. 10 ಸಾವಿರ ದಂಡ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಚನ್ನಗಿರಿಯ ಕಂಚುಗರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದ ಎಚ್ ಕೆ ಬಸಪ್ಪ ಮತ್ತು ಹಿರೇಜಂಬೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದ ಟಿ ಶಿವಶಂಕರಪ್ಪ ಅವರನ್ನು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸರ್ಕಾರ ನಾಮನಿರ್ದೇಶನ ಮಾಡಿತ್ತು. ನಂತರ ಆರ್ಥಿಕ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಈ ಇಬ್ಬರ ನಾಮ ನಿರ್ದೇಶನವನ್ನು ಅನೂರ್ಜಿತಗೊಳಿಸಿ 2021ರ ಡಿಸೆಂಬರ್‌ 31ರಂದು ಆದೇಶಿಸಲಾಗಿತ್ತು. ಅವರ ಸ್ಥಾನಕ್ಕೆ ಹರೀಶ್ ಮತ್ತು ವಿಕ್ರಂ ಪಾಟೀಲ್ ಅವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಇದನ್ನು ಶಿವಶಂಕರಪ್ಪ ಮತ್ತು ಬಸಪ್ಪ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ನಾಮ ನಿರ್ದೇಶನ ಆದೇಶವನ್ನು ಅನೂರ್ಜಿತಗೊಳಿಸುವ ಮುನ್ನ ತಮಗೆ ಜಾರಿ ಮಾಡಿದ ನೋಟಿಸ್‌ಗೆ ಉತ್ತರಿಸಲು ಸೂಕ್ತ ಕಾಲಾವಕಾಶ ನೀಡಿಲ್ಲ. ನಾಮನಿರ್ದೇಶನ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ. ಇದು ಕಾನೂನು ಬಾಹಿರ ಕ್ರಮ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಜಯಕುಮಾರ್‌ ಪಾಟೀಲ್,‌ ವಕೀಲರಾದ ವರುಣ್‌ ಪಾಟೀಲ್‌, ಮೊಹಮ್ಮದ್‌ ತಾಹೀರ್‌ ಅವರು ವಾದಿಸಿದ್ದರು.