Karnataka High Court
Karnataka High Court 
ಸುದ್ದಿಗಳು

ಸರ್ಕಾರಿ ನೌಕರ ಮೃತಪಟ್ಟಲ್ಲಿ ಸಹೋದರಿಗೆ ಅನುಕಂಪದ ಉದ್ಯೋಗಕ್ಕೆ ಅವಕಾಶವಿಲ್ಲ: ಹೈಕೋರ್ಟ್‌

Bar & Bench

“ಸರ್ಕಾರಿ ನೌಕರ ಮೃತಪಟ್ಟಲ್ಲಿ ಅವರ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಲು ಅವಕಾಶವಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಬೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿದ್ದ ವಿವಾಹಿತ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ತನಗೆ ಉದ್ಯೋಗ ಒದಗಿಸಲು ಕೆಪಿಟಿಸಿಲ್‌ ಮತ್ತು ಬೆಸ್ಕಾಂಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು 2023ರ ಮಾರ್ಚ್‌ 30ರಂದು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ತುಮಕೂರು ಜಿಲ್ಲೆ ಗೆದ್ಲಹಳ್ಳಿ ನಿವಾಸಿ ಜಿ ಎಂ ಪಲ್ಲವಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡುವ ಮೂಲಕ ಏಕಸದಸ್ಯ ಪೀಠದ ಆದೇಶ ಎತ್ತಿ ಹಿಡಿದಿದೆ.

“ಮೇಲ್ಮನವಿದಾರೆಯು ಮೃತ ನೌಕರ (ಸಹೋದರ) ಸಾವನ್ನಪ್ಪಿದ ವೇಳೆ ಅವರ ಆದಾಯದ ಮೇಲೆ ತಾನು ಅಲವಂಬಿಸಿದ್ದೆ ಎಂಬುದನ್ನು ದೃಢಪಡಿಸುವ ಸಾಕ್ಷವನ್ನು ಸಲ್ಲಿಸಿಲ್ಲ. ಹಾಗೆಯೇ, ಅನುಕಂಪದ ಉದ್ಯೊಗ ಪಡೆಯಲು ಸಮರ್ಥಿಸಿಕೊಳ್ಳವುದಕ್ಕಾಗಿ ಮೃತ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದೆ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳು ಇಲ್ಲ. ಆದ್ದರಿಂದ, ಮೇಲ್ಮನವಿದಾರೆಯನ್ನು ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ಪರಿಗಣಿಸಲು ನಿರಾಕರಿಸಿದ ಏಕ ಸದಸ್ಯ ಪೀಠದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದೆ.

“ಅನುಕಂಪದ ಆಧಾರದ ಮೇಲೆ ನೇಮಕಾತಿಯು ಸಂವಿಧಾನದ 14 ಮತ್ತು 16ನೇ ವಿಧಿಗಳಲ್ಲಿ ಜಾರಿಗೆ ತಂದಿರುವ ಸರ್ಕಾರಿ ಉದ್ಯೋಗದಲ್ಲಿ ಸಮಾನತೆಯ ಸಾಮಾನ್ಯ ನಿಯಮಕ್ಕೆ ಒಂದು ಅಪವಾದ. ಈ ನೆಲೆಯಲ್ಲಿ ಅನುಕಂಪದ ಉದ್ಯೊಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ನ್ಯಾಯಾಲಯಗಳು ವ್ಯಾಖ್ಯಾನದ ಪ್ರಕ್ರಿಯೆಯ ಮೂಲಕ ಶಾಸನಬದ್ಧ ವ್ಯಾಖ್ಯಾನದ ಬಾಹ್ಯರೇಖೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲ. ನೌಕರರ ಕುಟುಂಬದ ಸದಸ್ಯ ವ್ಯಕ್ತಿ ಎಂಬುದಕ್ಕೆ ಶಾಸನ ರೂಪಿಸುವವರು ಹಲವು ಪದಗಳನ್ನು ನಿರ್ದಿಷ್ಟ ಪಡಿಸಿರುವ ವೇಳೆ ಕುಟುಂಬದ ವ್ಯಾಖ್ಯಾನಕ್ಕೆ ನ್ಯಾಯಾಲಯ ಒಂದು ಪದವನ್ನು ಸೇರಿಸಲು ಮತ್ತು ರದ್ದುಪಡಿಸಲು ಸಾಧ್ಯವಿಲ್ಲ. ನಿಯಮಕ್ಕೆ ವಿರುದ್ಧವಾಗಿರುವ ವಾದವನ್ನು ಒಪ್ಪಿದರೆ, ನಿಯಮವನ್ನು ಮತ್ತೆ ಬರೆದಂತಾಗುತ್ತದೆ. ಹೀಗಾಗಿ, ಮೇಲ್ಮನವಿದಾರೆಯ ವಾದ ಹಾಗೂ ಮನವಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಪೀಠ ಆದೇದಲ್ಲಿ ವಿವರಿಸಿದೆ.

“ಮೃತ ನೌಕರನ ಕುಟುಂಬ ಸದಸ್ಯರು ಮಾತ್ರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೇಮಕಾತಿ ಹಕ್ಕು ಕೋರಬೇಕಿದೆ ಎಂದು ಕಾನೂನು ಹೇಳುತ್ತದೆ. ಅದು ಸಹ ಅನಾರೋಗ್ಯದಿಂದ ಸಾವನ್ನಪ್ಪಿದ ಸರ್ಕಾರಿ ನೌಕರನ ಮೇಲೆ ಅಲಂಬಿತರಾಗಿದ್ದೆವು ಎಂಬುದನ್ನು ದೃಢಪಡಿಸುವ ಸಾಕ್ಷ್ಯಾಧಾರಗಳ ಮೇಲೆ ಅನುಕಂಪದ ಉದ್ಯೋಗ ಕೇಳಬಹುದು” ಎಂದಿದೆ.

ಕರ್ನಾಟಕ ನಾಗರಿಕ ಸೇವೆಗಳ ಅನುಕಂಪದ ಆಧಾರದ ನೇಮಕಾತಿ) ನಿಯಮಗಳು 1996ರ 2(1)(ಬಿ) ಪ್ರಕಾರ ಒಂದು ವೇಳೆ ವಿವಾಹಿತ ಪುರಷ ಸರ್ಕಾರಿ ನೌಕರ ಅನಾರೋಗ್ಯದಿಂದ ಸೇವಾವಧಿಯಲ್ಲಿ ಮೃತಪಟ್ಟಲ್ಲಿ ಅವರನ್ನು ಅಲಂಭಿಸಿರುವ ವಿಧವಾ ಪತ್ನಿ, ಮಗ ಅಥವಾ ಮಗಳು (ಅವಿವಾಹಿತೆ, ವಿವಾಹಿತೆ, ವಿಚ್ಛೇದಿತೆ ಹಾಗೂ ವಿಧವೆ) ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಬಹುದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅದರಂತೆ ಈ ವ್ಯಾಖ್ಯಾನದಲ್ಲಿ ಸಹೋದರಿಯನ್ನು ಸೇರಿಸಿಲ್ಲ. ಸಹೋದರಿಯನ್ನು ಮೃತ ನೌಕರನ ಕುಟುಂಬದ ಸದಸ್ಯೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಮೇಲ್ಮನವಿದಾರೆಯನ್ನು ವಕೀಲ ಎಂ ಸಿ ಬಸವರಾಜು ಪ್ರತಿನಿಧಿಸಿದ್ದರು.

Pallavi G M Vs KPTCL.pdf
Preview