Justice KV Viswanathan
Justice KV Viswanathan 
ಸುದ್ದಿಗಳು

ಸೋಲಿ ಸೊರಾಬ್ಜಿ ದ್ವೇಷ ಭಾಷಣದ ಪ್ರಬಲ ವಿರೋಧಿಯಾಗಿದ್ದರು: ನ್ಯಾ. ಕೆ ವಿ ವಿಶ್ವನಾಥನ್

Bar & Bench

ಖ್ಯಾತ ನ್ಯಾಯಶಾಸ್ತ್ರಜ್ಞ ದಿವಂಗತ ಸೋಲಿ ಜೆ ಸೊರಾಬ್ಜಿ ಅವರು ದ್ವೇಷ ಭಾಷಣದ ಪ್ರಬಲ ವಿರೋಧಿಯಾಗಿದ್ದರು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಶನಿವಾರ ತಿಳಿಸಿದರು.

ಜಿಂದಾಲ್ ಗ್ಲೋಬಲ್ ಕಾನೂನು ಶಾಲೆ ಆಯೋಜಿಸಿದ್ದ ಸೋಲಿ ಜೆ ಸೊರಾಬ್ಜಿ ಎಕ್ಸಲೆನ್ಸ್ ಪ್ರಶಸ್ತಿ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೊರಾಬ್ಜಿ ಅವರು ನ್ಯಾಯಾಧೀಶರಾಗಿದ್ದರೆ, ದ್ವೇಷ ಭಾಷಣವನ್ನು ಮೌಖಿಕ ಹಿಂಸೆ ಎಂದು ಪರಿಗಣಿಸುತ್ತಿದ್ದರು ಎಂಬುದಾಗಿ ಅವರು ವಿವರಿಸಿದರು. "ಸೋಲಿ ಅವರು ಒಂದು ವೇಳೆ ನ್ಯಾಯಾಧೀಶರಾಗಿದ್ದರೆ ದ್ವೇಷ ಭಾಷಣವು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದಷ್ಟೇ ಅಲ್ಲ. ಅದೇ ಸ್ವತಃ ಹಿಂಸೆ ಅಥವಾ ಮೌಖಿಕ ಹಿಂಸೆ ಎಂದು ಪರಿಗಣಿಸುತ್ತಿದ್ದರು ಎಂಬುದಾಗಿ ತಿಳಿಸಿದರು.

ಸೊರಾಬ್ಜಿ ಅವರಿಗೆ ಕಠಿಣ ಸಾಂವಿಧಾನಿಕ ಪರಿಕಲ್ಪನೆಗಳನ್ನು ಸರಳಗೊಳಿಸುವ ಕೌಶಲ್ಯ ಇತ್ತು.  ಮಾನವ ಹಕ್ಕುಗಳನ್ನು ಗೌರವಿಸುತ್ತಿದ್ದ ಅವರು ಕೆಲವು ಅಂತರ್ಗತ ಸಾಂವಿಧಾನಿಕ ಮೌಲ್ಯಗಳನ್ನು ಹೊಂದಿದ್ದರು ಎಂದು ನ್ಯಾ. ವಿಶ್ವನಾಥನ್‌ ಹೇಳಿದರು.

ಸೊರಾಬ್ಜಿ ಅವರು ಕೇವಲ ಸರ್ಕಾರಕ್ಕಲ್ಲ ಇಡೀ ದೇಶಕ್ಕೆ ಅಟಾರ್ನಿ ಜನರಲ್‌ ಆಗಿದ್ದರು ಎಂದು ಅವರು ಸ್ಮರಿಸಿದರು. ತಮ್ಮ ಕಚೇರಿಯಲ್ಲಿ ಕೂಡ ಜಾತ್ಯತೀತ ಮನೋಧರ್ಮದವರಾಗಿದ್ದ ಸೊರಾಬ್ಜಿ ಅವರು ಎಲ್ಲಾ ಸಮುದಾಯಗಳ ವಕೀಲರನ್ನು ನೇಮಿಸಿಕೊಂಡಿದ್ದರು ಎಂದರು.

ಪಾರ್ಸಿ ವಕೀಲರನ್ನೇ ತಮ್ಮ ಕಚೇರಿಯಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ಪಾರ್ಸಿ ವಕೀಲರೊಬ್ಬರು ಒಮ್ಮೆ ಸೊರಾಬ್ಜಿ ಅವರಿಗೆ ಹೇಳಿದರು. ಆದರೆ ಸೊರಾಬ್ಜಿ ಅವರು ತಾನು ಕಿರಿಯ ವಕೀಲರನ್ನು ಅರ್ಹತೆಯ ಆಧಾರದಲ್ಲಿ ನೇಮಿಸಿಕೊಳ್ಳುತ್ತೇನೆಯೇ ವಿನಾ ಅವರ ಜಾತಿ-ಧರ್ಮವನ್ನಾಧರಿಸಿ ಅಲ್ಲ ಎಂದರು ಎಂಬುದಾಗಿ ನ್ಯಾ. ವಿಶ್ವನಾಥನ್‌ ನೆನೆದರು.