ಸುದ್ದಿಗಳು

ಬೀಡಾಡಿ ದನಗಳ ಹಾವಳಿಯಿಂದ ವಿಚಲಿತಗೊಂಡಿರುವುದಾಗಿ ತಿಳಿಸಿದ ಗುಜರಾತ್ ಹೈಕೋರ್ಟ್: ನಿರ್ದಿಷ್ಟ ಕ್ರಮಕ್ಕೆ ಸೂಚನೆ

Bar & Bench

ಗುಜರಾತ್‌ ರಾಜಧಾನಿ ಅಹಮದಾಬಾದ್  ಹಾಗೂ ರಾಜ್ಯದ ಇತರ ಪ್ರಮುಖ ನಗರಗಳಲ್ಲಿ ಬೀಡಾಡಿ ದನಗಳ ಹಾವಳಿ ಕಂಡು ವಿಚಲಿತಗೊಂಡಿರುವುದಾಗಿ ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಹೇಳಿದ್ದು ಸಮಸ್ಯೆಯನ್ನು ನಿಭಾಯಿಸಲು ನಿರ್ದಿಷ್ಟ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಅಹಮದಾಬಾದ್‌ನ ಬೀದಿಗಳಲ್ಲಿ ಅದರಲ್ಲಿಯೂ ಬೀಡಾಡಿ ದನಗಳು ತೀವ್ರ ತೊಂದರೆ ನೀಡುತ್ತಿರುವ ಸ್ಥಳಗಳಲ್ಲಿ ಯಾವೊಬ್ಬ ಪೊಲೀಸ್‌ ಪೇದೆಯೂ ಗಸ್ತು ತಿರುಗುವುದನ್ನು ಕಂಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆ) ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ತಿಳಿಸಿದೆ.

"ನಾನು ಅಹಮದಾಬಾದ್‌ನ ಪ್ರಮುಖ ಸ್ಥಳಗಳಲ್ಲಿ ಯಾವುದೇ ಪೊಲೀಸ್ ಪೇದೆಯನ್ನು ನೋಡಿಲ್ಲ. ನೀವು ಒಬ್ಬಿಬ್ಬರನ್ನು ಕೇವಲ ಒಂದೆರಡು ಸ್ಥಳಗಳಲ್ಲಿ ನೋಡಬಹುದು. ಆದರೆ ಆ ಸ್ಥಳಗಳ ಆಚೆಗೆ ಎಲ್ಲೂ ಕಂಡು ಬರುವುದಿಲ್ಲ. (ಪೀಠದ ಈ ಹಿಂದಿನ ಆದೇಶದಂತೆ ನ್ಯಾಯಾಲಯದಲ್ಲಿ ಹಾಜರಿದ್ದ ಅಧಿಕಾರಿಗಳನ್ನು ಉದ್ದೇಶಿಸಿ) ನೀವೆಲ್ಲರೂ ಸಮಸ್ಯೆಗೆ  ಒಳ್ಳೆಯ ಪರಿಹಾರ ಕಂಡುಕೊಂಡು ಬನ್ನಿ" ಎಂದು ಮುಖ್ಯ ನ್ಯಾಯಮೂರ್ತಿ ಕುಮಾರ್ ಹೇಳಿದರು. ಜಾನುವಾರು ಸಂರಕ್ಷಣೆಗೆ ಕಲ್ಪಿಸಿರುವ ಬಹುತೇಕ ಯೋಜನೆಗಳು ಕಾಗದದಲ್ಲಿ ಮಾತ್ರ ಉಳಿದಿದ್ದು, ಅಧಿಕಾರಿಗಳು ಅಕ್ಷರಶಃ ಅನುಷ್ಠಾನಕ್ಕೆ ತರಬೇಕು ಎಂದು ಕೂಡ ಅವರು ಹೇಳಿದರು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಡ್ವೊಕೇಟ್‌ ಜನರಲ್‌ (ಎಜಿ) ಅವರು ಕಾಲಾವಕಾಶ ಕೋರಿದಾಗ ಬೀಡಾಡಿ ದನಗಳ ಸಮಸ್ಯೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವುದನ್ನು ತೋರಿಸಿ ನ್ಯಾಯಾಲಯವು ಬಹಳ ವಿಚಲಿತನಾಗಿರುವುದಾಗಿ ತಿಳಿಸಿತು. ಸಕಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಈ ಹಂತದಲ್ಲಿ ಎಜಿ ಭರವಸೆ ನೀಡಿದರು.

ವಿಚಾರಣೆ ವೇಳೆ ಜಾನುವಾರು ದಾಳಿಯಿಂದ ಸಾವನ್ನಪ್ಪಿದ 35 ವರ್ಷದ ವ್ಯಕ್ತಿಯ ದುರಂತ ಸಾವಿನ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ಪೀಠ ಮೃತ ವ್ಯಕ್ತಿಯ ಕುಟುಂಬಕ್ಕೆ ರೂ  2 ಲಕ್ಷ ಘೋಷಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಪ್ರಕರಣವನ್ನು ನವೆಂಬರ್‌ 15ಕ್ಕೆ ಮುಂದೂಡಲಾಗಿದೆ.