ಸುದ್ದಿಗಳು

ಶಾಲಾಧ್ಯಕ್ಷರ ನಿಂದನೆಯಿಂದ ವಿದ್ಯಾರ್ಥಿ ಆತ್ಮಹತ್ಯೆ: ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್

Bar & Bench

ಗದರಿಸಿ, ಅಪಮಾನಿಸಿ, ಕೆಟ್ಟ ಪದ ಬಳಸಿ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಅಂತಾರಾಷ್ಟ್ರೀಯ ಶಾಲೆಯ ಅಧ್ಯಕ್ಷರೊಬ್ಬರಿಗೆ ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. [ಗಣಪತರಾವ್ ಪಾಟೀಲ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

"ನಿಸ್ಸಂದೇಹವಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ವಾಗ್ದಂಡಿಸಬಹುದು. ಆದರೆ ಅದು ಅವರ ಕೋಮಲ ಮನಸ್ಸನ್ನು ಛಿದ್ರಗೊಳಿಸುವ ಭಾಷೆಯಲ್ಲಿ ಅಲ್ಲ" ಎಂದು ನ್ಯಾಯಮೂರ್ತಿ ವಿನಯ್ ಜೋಶಿ ಹೇಳಿದರು.

ಆತ್ಮಹತ್ಯೆ ಮಾಡಿಕೊಂಡ ಬಾಲಕ ಹುಡುಗಿಯೊಬ್ಬಳೆಡೆಗೆ ಫುಟ್‌ಬಾಲ್‌ ಅನ್ನು ಅಚಾತುರ್ಯದಿಂದ ಒದ್ದಿದ್ದ. ಆತನನ್ನು ʼಸಿಂಬಾಲಿಕ್ ಇಂಟರ್‌ನ್ಯಾಶನಲ್ ಸ್ಕೂಲ್‌ʼನ ಅಧ್ಯಕ್ಷ ಗಣಪತರಾವ್ ಪಾಟೀಲ್ ತರಾಟೆಗೆ ತೆಗೆದುಕೊಂಡಿದ್ದರು.

ಏಪ್ರಿಲ್‌ 1, 2022 ರಂದು ಘಟನೆ ನಡೆದಿತ್ತು. ಆರೋಪಿ ಗಣಪತರಾವ್‌ ಬಾಲಕನಿಗೆ “ನಾಲಾಯಕ್‌, ಭೂಮಿಗೆ ಭಾರ, ಕೊಳೆಗೇರಿಯಲ್ಲಿ ಬದುಕುವವನು” ಎಂದು ನಿಂದಿಸಿದ್ದರು. ಅಲ್ಲದೆ ಬಾಲಕನ ಅಜ್ಜನನ್ನು ಕರೆಸಿ ಶಾಲೆಯಿಂದ ವಜಾಗೊಳಿಸ ಬೇಕಾಗಿರುವುದರಿಂದ ನಿಮ್ಮ ಹುಡುಗನನ್ನು ಕರೆದು ಕೊಂಡು ಹೋಗಿ ಎಂದಿದ್ದರು.