“ವಕೀಲರ ಪಾಲಿಗೆ ಕರಿ ಕೋಟು ವಜ್ರ ಇದ್ದಂತೆ. ಕೋರ್ಟ್ಗಳು ನ್ಯಾಯ ದೇಗುಲಗಳಿದ್ದಂತೆ. ಪ್ರತಿಯೊಬ್ಬ ವಕೀಲನೂ ವಕೀಲಿಕೆಯನ್ನು ಹೃದಯ ಮತ್ತು ಆತ್ಮದ ಬೆಸುಗೆಯಾಗಿಸಿ ಸತತ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಲು ಸಾಧ್ಯ” ಎಂದು ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಸೋಮಶೇಖರ್ ಹೇಳಿದರು.
ಬೆಂಗಳೂರು ವಕೀಲರ ಸಂಘದ ವತಿಯಿಂದ ಗುರುವಾರ ಹೈಕೋರ್ಟ್ನ ವಕೀಲರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
“ರಾಷ್ಟ್ರದಲ್ಲೇ ಪ್ರತಿಷ್ಠಿತ ಹೈಕೋರ್ಟ್ ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ಹೈಕೋರ್ಟ್ ಹೊಂದಿದೆ. ಇಲ್ಲಿನ ವಕೀಲರ ಬದ್ಧತೆಗೆ ಇತಿಹಾಸವೇ ಇದೆ. ಇಲ್ಲಿ ಸಾಕಷ್ಟು ತತ್ವಬದ್ಧ ವಕೀಲರಿದ್ದಾರೆ. ವಕೀಲ ವೃಂದ ಈ ನೆಲದ ಕಾನೂನು ಎತ್ತಿ ಹಿಡಿಯಲು ಸದಾ ಶ್ರಮಿಸಬೇಕು” ಎಂದರು.
“ನೀವೆಲ್ಲಾ ನನ್ನನ್ನು ಸಪ್ತ ಮಾತೃಕೆಯ ದೇವತೆಗಳ ನಾಡಿನಿಂದ ಸಪ್ತ ಸಹೋದರಿಯರ ರಾಜ್ಯಕ್ಕೆ ಕಳುಹಿಸಿದ್ದೀರಿ. ಮಣಿಪುರ ಮಹಿಳಾ ಪ್ರಧಾನ ರಾಜ್ಯ. ಇದು ಮಹಾಭಾರತ ಆರಂಭವಾದ ನೆಲೆ. ಬಬ್ರುವಾಹನನ ಸ್ಥಳ. ಚಾಮರಾಜನಗರದ ಯಳಂದೂರಿನ ಗ್ರಾಮದಿಂದ ದೂರದ ರಾಜ್ಯವೊಂದರಲ್ಲಿ ನಾನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಪಯಣದ ಹಿಂದೆ ನಿಮ್ಮ ಪ್ರೀತಿ ಇದೆ” ಎಂದು ಬಣ್ಣಿಸಿದರು.
“ನ್ಯಾಯಮೂರ್ತಿಗಳ ಪಾಲಿಗೆ ವಕೀಲರೇ ಗುರುಗಳಿದ್ದಂತೆ. ನೀವೆಲ್ಲಾ ನನ್ನನ್ನು ಹರಸಿದ್ದೀರಿ. ನನ್ನಲ್ಲಿ ನೀವಿಟ್ಟಿರುವ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ನಿರಂತರ ಕರ್ತವ್ಯ ಪ್ರಜ್ಞೆಯಿಂದ ದುಡಿಯುತ್ತೇನೆ. ಸಮಾಜ ಮತ್ತು ನ್ಯಾಯಾಂಗದ ಘನತೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಎತ್ತಿ ಹಿಡಿಯುತ್ತೇನೆ” ಎಂದರು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಅವರು “ಸೋಮಶೇಖರ್ ಜಿಲ್ಲಾ ನ್ಯಾಯಾಧೀಶರಾಗಿ, ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ನ್ಯಾಯಾಂಗ ಕ್ಷೇತ್ರದ ಅಭಿವೃದ್ಧಿಗೆ ಅವರು ಇನ್ನಷ್ಟು ಶ್ರಮಿಸಲಿ” ಎಂದು ಆಶಿಸಿದರು.
ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಅವರು “ನ್ಯಾಯಮೂರ್ತಿ ಸೋಮಶೇಖರ್ ಅವರು ಸದಾ ಸಂವಿಧಾನವನ್ನು ಜಪಿಸುವವರು. ಶಾಂತಿಯಿಂದ, ತಾಳ್ಮೆಯಿಂದ ಮುನ್ನೆಡೆದರೆ ಗುರಿ ಮುಟ್ಟುತ್ತಾರೆ ಎಂಬುದಕ್ಕೆ ಅವರೊಂದು ಉತ್ತಮ ಉದಾಹರಣೆ. ಅವರು ಸುಪ್ರೀಂ ಕೋರ್ಟ್ಗೂ ಪದನ್ನೋತಿ ಹೊಂದಲಿ” ಎಂದು ಹಾರೈಸಿದರು.
ನ್ಯಾಯಮೂರ್ತಿ ಅನು ಶಿವರಾಮನ್, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ ಕಾಮತ್, ಹಿರಿಯ ವಕೀಲರು ಮತ್ತು ವಕೀಲ ವೃಂದ ಹಾಜರಿದ್ದರು.