Karnataka High Court 
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ಗೆ ಮೇ 5ರಿಂದ ಮೇ 31ರವರೆಗೆ ಬೇಸಿಗೆ ರಜೆ; 8 ದಿನ ರಜಾಕಾಲೀನ ಪೀಠಗಳಿಂದ ವಿಚಾರಣೆ

ರಜಾ ಸಂದರ್ಭದಲ್ಲಿ ಎಲ್ಲ ಮೂರು ಪೀಠಗಳಲ್ಲಿ ಒಟ್ಟು 8 ದಿನ ವಿಚಾರಣೆ ನಡೆಯಲಿದೆ.‌ ಬೆಂಗಳೂರು, ಧಾರವಾಡ ಪೀಠಗಳಲ್ಲಿ ವಿಚಾರಣೆಯು ಎಂದಿನಂತೆ 10.30ಕ್ಕೆ ಆರಂಭವಾದರೆ, ಕಲಬುರ್ಗಿ ಪೀಠದಲ್ಲಿ ವಿಚಾರಣೆಯು ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ.

Bar & Bench

ಕರ್ನಾಟಕ ಹೈಕೋರ್ಟ್‌ಗೆ ಮೇ 5ರಿಂದ ಮೇ 31ರವರೆಗೆ ಬೇಸಿಗೆ ರಜೆ ಇರಲಿದೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿಯಲ್ಲಿ ವಿಭಾಗೀಯ ಮತ್ತು ಏಕಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ರಜಾಕಾಲೀನ ಪೀಠಗಳನ್ನು ರಚಿಸಲಾಗಿದೆ. ಆದರೆ, ವಾಸ್ತವದಲ್ಲಿ ಮೇ 3ರಿಂದಲೇ ಹೈಕೋರ್ಟ್‌ಗೆ ರಜೆ ಆರಂಭವಾಗಲಿದ್ದು, ಜೂನ್‌ 2ರಂದು ಅಧಿಕೃತ ಕಾರ್ಯಾರಂಭವಾಗಲಿದೆ.

ಪ್ರಧಾನ ಪೀಠದಲ್ಲಿ ಮೇ 6 ಮತ್ತು ಮೇ 8ರಂದು ನ್ಯಾಯಮೂರ್ತಿಗಳಾದ ಆರ್‌ ದೇವದಾಸ್‌ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ಕಾರ್ಯ ನಿರ್ವಹಿಸಲಿದೆ. ನ್ಯಾಯಮೂರ್ತಿಗಳಾದ ಎಂ ಜಿ ಉಮಾ ಮತ್ತು ವಿ ಶ್ರೀಶಾನಂದ ಅವರ ನೇತೃತ್ವದ ಏಸಕದಸ್ಯ ಪೀಠಗಳು ರಜಾಕಾಲೀನ ಪೀಠಗಳಾಗಿ ಕರ್ತವ್ಯ ನಿರ್ವಹಿಸಲಿವೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್ ಮತ್ತು ಜಿ ಬಸವರಾಜ ಅವರು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳನ್ನು ಆಲಿಸಲಿದ್ದು, ಆನಂತರ ಏಕಸದಸ್ಯ ಪೀಠದಲ್ಲಿ ಕುಳಿತು ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.

ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಅಶೋಕ್‌ ಎಸ್.‌ ಕಿಣಗಿ ಮತ್ತು ಎಸ್‌ ವಿಶ್ವಜಿತ್‌ ಶೆಟ್ಟಿ ಅವರು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ಮುಗಿಸಿ, ಆನಂತರ ಏಕಸದಸ್ಯ ಪೀಠದಲ್ಲಿ ಕುಳಿತುಕೊಳ್ಳಲಿದ್ದಾರೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ ಮೇ 13 ಮತ್ತು 15ರಂದು ನ್ಯಾಯಮೂರ್ತಿಗಳಾದ ಎಚ್‌ ಪಿ ಸಂದೇಶ್‌ ಮತ್ತು ರಾಮಚಂದ್ರ ಡಿ. ಹುದ್ದಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಲಿದ್ದು, ನ್ಯಾಯಮೂರ್ತಿಗಳಾದ ಶಿವಶಂಕರ್‌ ಅಮರಣ್ಣವರ್‌ ಮತ್ತು ಎಂಜಿಎಸ್‌ ಕಮಲ್‌ ಅವರ ನೇತೃತ್ವದ ಏಕಸದಸ್ಯ ಪೀಠಗಳು ಅರ್ಜಿಗಳ ವಿಚಾರಣೆ ನಡೆಸಲಿವೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಚ್‌ ಟಿ ನರೇಂದ್ರ ಪ್ರಸಾದ್‌ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣ ಆಲಿಸಲಿದೆ. ನಂತರ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಕುಳಿತು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಕಲಬುರ್ಗಿ ಪೀಠದಲ್ಲಿ ಮೇ 13 ಮತ್ತು 15ರಂದು ನ್ಯಾಯಮೂರ್ತಿಗಳಾದ ಇ ಎಸ್‌ ಇಂದಿರೇಶ್‌ ಮತ್ತು ಕೆ ರಾಜೇಶ್‌ ರೈ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದೆ. ಆನಂತರ ನ್ಯಾಯಮೂರ್ತಿಗಳು ಏಕಸದಸ್ಯ ಪೀಠದಲ್ಲಿ ಕುಳಿತು ವಿಚಾರಣೆ ನಡೆಸಲಿದ್ದಾರೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ ಮೇ 20 ಮತ್ತು 22ರಂದು ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ ಪ್ರಸಾದ್‌ ಮತ್ತು ಕೆ ವಿ ಅರವಿಂದ್‌ ಅವರು ವಿಭಾಗೀಯ ಪೀಠದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಿದ್ದು, ನ್ಯಾಯಮೂರ್ತಿಗಳಾದ ಎಸ್‌ ರಾಚಯ್ಯ ಹಾಗೂ ಸಿ ಎಂ ಜೋಶಿ ಅವರ ನೇತೃತ್ವದ ಏಕಸದಸ್ಯ ಪೀಠವು ಕರ್ತವ್ಯ ನಿರ್ವಹಿಸಲಿವೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ರವಿ ವಿ. ಹೊಸಮನಿ ಮತ್ತು ಅನಂತ್‌ ರಾಮನಾಥ್‌ ಹೆಗ್ಡೆ ಅವರ ವಿಭಾಗೀಯ ಪೀಠವು ಮೊದಲಿಗೆ ಪ್ರಕರಣ ಆಲಿಸಿ, ಆನಂತರ ನ್ಯಾಯಮೂರ್ತಿಗಳು ಏಕಸದಸ್ಯ ಪೀಠದ ಪ್ರಕರಣಗಳನ್ನು ಪ್ರತ್ಯೇಕವಾಗಿ ಆಲಿಸಲಿದ್ದಾರೆ.

ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಚಿಲ್ಲಕೂರ್‌ ಸುಮಲತಾ ಮತ್ತು ಟಿ ಎಂ ನದಾಫ್‌ ಅವರು ವಿಭಾಗೀಯ ಪೀಠದ ಪ್ರಕರಣಗಳ ಬಳಿಕ ಏಕಸದಸ್ಯ ಪೀಠ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ ಮೇ 27ರ ಮತ್ತು 29ರಂದು ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ನೇತೃತ್ವದ ವಿಭಾಗೀಯ ಪೀಠ, ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್ ಹಾಗೂ ಎಂ ಐ ಅರುಣ್‌ ಅವರ ನೇತೃತ್ವದ ಏಕಸದಸ್ಯ ಪೀಠವುಗಳು ಅರ್ಜಿಗಳ ವಿಚಾರಣೆ ನಡೆಸಲಿವೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಚಿನ್‌ ಶಂಕರ್‌ ಮಗದುಮ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಕರಣ ವಿಚಾರಣೆ ನಡೆಸಲಿದೆ. ಬಳಿಕ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದ ಪ್ರಕರಣಗಳನ್ನು ಆಲಿಸಲಿದ್ದಾರೆ.

ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಆರ್‌ ನಟರಾಜ್‌ ಮತ್ತು ಉಮೇಶ್‌ ಎಂ. ಅಡಿಗ ಅವರು ವಿಭಾಗೀಯ ಪೀಠದ ಪ್ರಕರಣಗಳ ಬಳಿಕ ಏಕಸದಸ್ಯ ಪೀಠದಲ್ಲಿ ಕುಳಿತು ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.

ರಜಾ ಸಂದರ್ಭದಲ್ಲಿ ಎಲ್ಲ ಮೂರು ಪೀಠಗಳಲ್ಲಿ ಒಟ್ಟು 8 ದಿನ ವಿಚಾರಣೆ ನಡೆಯಲಿದೆ.‌ ಬೆಂಗಳೂರು ಮತ್ತು ಧಾರವಾಡ ಪೀಠಗಳಲ್ಲಿ ವಿಚಾರಣೆಯು ಎಂದಿನಂತೆ 10.30ಕ್ಕೆ ಆರಂಭವಾದರೆ, ತಾಪಮಾನ ಹೆಚ್ಚಾಗಿರುವುದರಿಂದ ಕಲಬುರ್ಗಿ ಪೀಠದಲ್ಲಿ ವಿಚಾರಣೆಯು ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ.

ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾಕಾಲೀನ ಅವಧಿಯಲ್ಲಿ ನಡೆಸಲಾಗುತ್ತದೆ. ಮೇಲ್ಮನವಿ, ಕ್ರಿಮಿನಲ್‌ ಮೇಲ್ಮನವಿ, ಕ್ರಿಮಿನಲ್‌ ಅರ್ಜಿ, ಸಿವಿಲ್‌ ರೂಪದ ಅರ್ಜಿಗಳ ವಿಚಾರಣೆ ಇರುವುದಿಲ್ಲ. ಇ-ಫೈಲಿಂಗ್‌ ಪೋರ್ಟಲ್‌ ಮೂಲಕ ಇ-ಫೈಲಿಂಗ್‌ ಮಾಡಬಹುದಾಗಿದೆ ಎಂದು ರಿಜಿಸ್ಟ್ರಾರ್‌ (ಜುಡಿಷಿಯಲ್)‌ ಸರಸ್ವತಿ ವಿಷ್ಣು ಕೋಸಂದರ್ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

SUMMER VACATION FROM 05.05.2025 TO 31.05.2025.pdf
Preview