Supreme Court of India
Supreme Court of India 
ಸುದ್ದಿಗಳು

ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Bar & Bench

ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಜ್ಯದಲ್ಲಿ ಪಥ ಸಂಚಲನ ನಡೆಸಲು ಅವಕಾಶ ನೀಡಿದ್ದ ಮದ್ರಾಸ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ  [ಕೆ ಫಣೀಂದ್ರ ರೆಡ್ಡಿ ಇತರರು ಮತ್ತು ಜಿ ಸುಬ್ರಮಣಿಯನ್ ನಡುವಣ ಪ್ರಕರಣ].

ಫೆಬ್ರವರಿ 10ರಂದು ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿತ್ತಲ್  ಅವರಿದ್ದ ಪೀಠ ತೀರ್ಪು ನೀಡಿದೆ.

ಆರ್‌ಎಸ್‌ಎಸ್ ತಮಿಳುನಾಡಿನಲ್ಲಿ ನಿರ್ಬಂಧಗಳಿಲ್ಲದೆ ಮರುನಿಗದಿಪಡಿಸಿದ ದಿನಗಳಂದು ತನ್ನ ಪಥ ಸಂಚಲನ ನಡೆಸಲು ಮದ್ರಾಸ್‌ ಹೈಕೋರ್ಟ್‌ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

ಪಕ್ಷಕಾರರು ತಮ್ಮ ನಡುವೆ ಚರ್ಚಿಸಿ ಸೂಕ್ತ ನಿರ್ಣಯಕ್ಕೆ ಬರಲಿದ್ದಾರೆ ಎಂದು ತಮಿಳುನಾಡು ಸರ್ಕಾರ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಹಿನ್ನೆಲೆಯನ್ನು ಸುಪ್ರೀ ಕೋರ್ಟ್‌ ಪ್ರಕರಣವನ್ನು ಮುಂದೂಡಿತ್ತು.

2022ರ ಅಕ್ಟೋಬರ್‌ನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಗಾಂಧಿ ಜಯಂತಿ ಅಂಗವಾಗಿ ರಾಜ್ಯದಲ್ಲಿ ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್‌ ತಮಿಳುನಾಡು ಸರ್ಕಾರದ ಅನುಮತಿ ಕೋರಿತ್ತು. ಆದರೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ್ದರಿಂದ ಅದು ಹೈಕೋರ್ಟ್‌ ಮೆಟ್ಟಿಲೇರಿತ್ತು.

ಅದೇ ವರ್ಷ ನವೆಂಬರ್ 4ರಂದು, ಹೈಕೋರ್ಟ್‌ ಏಕಸದಸ್ಯ ಪೀಠ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿತ್ತು. ಪಥಸಂಚಲನವನ್ನು ನಿರ್ಬಂಧಿತ ಜಾಗದಲ್ಲಿ ಅಥವಾ ಒಳಾಂಗಣ ಪ್ರದೇಶದಲ್ಲಿ ನಡೆಸಬೇಕು ಎಂದು ಅದು ಹೇಳಿತ್ತು. ಫೆಬ್ರವರಿ 10 ರಂದು, ಹೈಕೋರ್ಟ್‌ನ ವಿಭಾಗೀಯ ಪೀಠ ಈ ನಿರ್ಬಂಧಗಳನ್ನು ತೆರವುಗೊಳಿಸಿ ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳ ಮಹತ್ವವನ್ನು ಒತ್ತಿಹೇಳಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಪ್ರಸಕ್ತ ಮೇಲ್ಮನವಿ ಸಲ್ಲಿಸಿತ್ತು.