Supreme Court of India 
ಸುದ್ದಿಗಳು

ಯಥೇಚ್ಛ ಸಕ್ಕರೆ, ಕೊಬ್ಬಿನಂಶ ಇರುವ ಆಹಾರ ಪ್ಯಾಕ್‌ ಮುಂಭಾಗ ಎಚ್ಚರಿಕೆ ಸಾಲು: ಎಫ್‌ಎಸ್‌ಎಸ್‌ಎಐಗೆ ಸುಪ್ರೀಂ ಸೂಚನೆ

ಜಾಗತಿಕವಾಗಿ ಹೀಗೆ ಪ್ಯಾಕ್‌ಗಳ ಮುಂಭಾಗದಲ್ಲಿ ಎಚ್ಚರಿಕೆ ಸಾಲುಗಳನ್ನು ಪ್ರಕಟಿಸಲಾಗಿರುತ್ತದೆ ಎಂದ ನ್ಯಾಯಾಲಯ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಎಫ್‌ಎಸ್‌ಎಸ್‌ಎಐಗೆ ಸೂಚಿಸಿತು.

Bar & Bench

ಯಥೇಚ್ಛ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನಂಶ ಇರುವ ಆಹಾರ ಪ್ಯಾಕ್‌ ಮುಂಭಾಗ ಎಚ್ಚರಿಕೆ ಸಾಲು ಮುದ್ರಿಸುವ ವಿಚಾರವನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಈಚೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಸೂಚಿಸಿದೆ [ತ್ರೀ ಎಸ್‌ ಅಂಡ್‌ ಅವರ್‌ ಹೆಲ್ತ್‌ ಸೊಸೈಟಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಫ್ರಂಟ್-ಆಫ್-ಪ್ಯಾಕೇಜ್ ನ್ಯೂಟ್ರಿಷನ್ ಲೇಬಲಿಂಗ್‌ (ಎಫ್‌ಒಪಿಎನ್‌ಎಲ್‌) ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಎಫ್‌ಎಸ್‌ಎಸ್‌ಎಐ ಸಲ್ಲಿಸಿದ್ದ  ಆದೇಶ ಅನುಪಾಲನಾ ಅಫಿಡವಿಟ್‌ ಬಗ್ಗೆ ತೃಪ್ತವಾಗದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ಈ ಸಲಹೆ ನೀಡಿತು.

ಸ್ಪಷ್ಟ ಮತ್ತು ಪರಿಣಾಮಕಾರಿ ಫ್ರಂಟ್-ಆಫ್-ಪ್ಯಾಕ್ ಲೇಬಲಿಂಗ್ ವ್ಯವಸ್ಥೆ ಜಾರಿಗೆ ತರುವಲ್ಲಿ ಎಫ್‌ಎಸ್‌ಎಸ್‌ಎಐ ಯಾವುದೇ ದೃಢ ಪ್ರಗತಿ ಸಾಧಿಸಿಲ್ಲ. ಪಿಐಎಲ್‌ ಪ್ರಸ್ತಾಪಿಸಿರುವ ಅಂಶ ಜನರ ಆರೋಗ್ಯದ ಹಕ್ಕಿಗೆ ಸಂಬಂಧಿಸಿದ್ದು ಗಂಭೀರವಾಗಿ ಗಮನ ನೀಡುವ ಅಗತ್ಯವಿದೆ ಎಂದಿತು.

ಏಪ್ರಿಲ್ 2025ರಲ್ಲಿ ಪಿಐಎಲ್‌ ವಿಲೇವಾರಿ ಮಾಡಿದ್ದ ಸುಪ್ರೀಂ ಕೋರ್ಟ್‌ ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಲೇಬಲಿಂಗ್ ಮತ್ತು ಪ್ರದರ್ಶನ) ನಿಯಮಗಳಿಗೆ ಅಗತ್ಯವಾದ ತಿದ್ದುಪಡಿ ಜಾರಿಗೆ ತರುವುದಕ್ಕಾಗಿ ಎಫ್‌ಎಸ್‌ಎಸ್‌ಎಐ ರಚಿಸಿದ್ದ ತಜ್ಞ ಸಮಿತಿ ಮೂರು ತಿಂಗಳೊಳಗೆ ಶಿಫಾರಸು ಅಂತಿಮಗೊಳಿಸುವಂತೆ ಸೂಚಿಸಿತ್ತು.  

 ಈ ವಾರ ಪ್ರಕರಣವನ್ನು ಮರುಪರಿಶೀಲನೆ ನಡೆಸಿದ ಸುಪ್ರೀಂ ಕೋರ್ಟ್‌ ಎಫ್‌ಎಸ್‌ಎಸ್‌ಎಐ ಹೊಸದಾಗಿ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಪರಿಶೀಲಿಸಿತು.

ಭಾರತೀಯ ಪೌಷ್ಟಿಕಾಂಶ ರೇಟಿಂಗ್ (ಐಎನ್‌ಆರ್‌) ವ್ಯವಸ್ಥೆಯ ಕುರಿತು ತಜ್ಞರ ಸಮಿತಿಯು ಚರ್ಚಿಸಿ 14,000 ಕ್ಕೂ ಹೆಚ್ಚು ಪಾಲುದಾರರ ಅಭಿಪ್ರಾಯಗಳನ್ನು ಸ್ವೀಕರಿಸಿದ್ದರೂ, ಪ್ರಸ್ತಾವಿತ ಸ್ವರೂಪದ ಬಗ್ಗೆ ಯಾವುದೇ ಒಮ್ಮತವಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿತ್ತು. ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಹೆಚ್ಚುವರಿ ಸಂಶೋಧನೆ, ಪಾಲುದಾರರ ಸಮಾಲೋಚನೆ ಮತ್ತು ಜಾಗತಿಕ ಪ್ರವೃತ್ತಿ ವಿಶ್ಲೇಷಣೆಯನ್ನು ಪರಿಗಣಿಸಲಾಗುತ್ತಿದೆ ಎಂದು ಅದು ಹೇಳಿತ್ತು.

ಆದರೆ, ಇಲ್ಲಿಯವರೆಗೆ ಕೈಗೊಂಡಿರುವ ಕ್ರಮವು ಯಾವುದೇ "ಸಕಾರಾತ್ಮಕ ಅಥವಾ ಉತ್ತಮ ಫಲಿತಾಂಶ"ವನ್ನು ನೀಡಿಲ್ಲ ಎಂದ ಪೀಠ ಪಿಐಎಲ್‌ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕರ ಆರೋಗ್ಯ ಹಕ್ಕಿಗೆ ಸಂಬಂಧಿಸಿದೆ ಎಂದಿತು.

ಪ್ಯಾಕೆಟ್‌ನ ಹಿಂಭಾಗ ಸಣ್ಣ ಅಕ್ಷರಗಳಲ್ಲಿ ಮಾಹಿತಿ ಮರೆಮಾಚುವ ಬದಲು ಮುಂಭಾಗದಲ್ಲೇ ಸ್ಪಷ್ಟ ಎಚ್ಚರಿಕೆ ಸೂಚನೆ ಪ್ರಕಟಿಸಬೇಕು ಎಂದು ಸೂಚಿಸಿತು. ಹೀಗೆ ಮುಂಭಾಗದಲ್ಲಿಯೇ ಎಚ್ಚರಿಕೆ ಸಾಲು ಪ್ರಕಟಿಸುವುದು ಜಾಗತಿಕವಾಗಿ ಅನುಸರಿಸಲಾಗುತ್ತಿರುವ ಪದ್ದತಿಯಾಗಿದ್ದು ಗ್ರಾಹಕರು ತ್ವರಿತವಾಗಿ ತಮ್ಮ ವಿವೇಚನೆ ಬಳಸಿ ಆಹಾರ ಆಯ್ಕೆ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಲೇಬಲ್‌ಗಳನ್ನು ವಿನ್ಯಾಸಗೊಳಿಸುವಾಗ ಕೆಳಗಿನ ವಿವರಣೆಯನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಎಫ್‌ಎಸ್‌ಎಸ್‌ಎಐಗೆ ಸೂಚಿಸಿದ್ದು ಕ್ರಿಯಾಯೋಜನೆ ಸಲ್ಲಿಸಲು ನಾಲ್ಕು ವಾರಗಳ ಗಡುವು ವಿಧಿಸಿದೆ.

Types of FOPL

[ಆದೇಶದ ಪ್ರತಿ]

3S_And_Our_Health_Society_vs__Union_of_India___Anr__.pdf
Preview