Justice MR Shah, Justice BV Nagarathna and Supreme Court
Justice MR Shah, Justice BV Nagarathna and Supreme Court 
ಸುದ್ದಿಗಳು

ಸಿಕ್ಕಿಂ ನೇಪಾಳಿಯರನ್ನು ವಿದೇಶಿಯರು ಎಂದಿದ್ದ ತನ್ನ ತೀರ್ಪು ಬದಲಿಸಿದ ಸುಪ್ರೀಂ ಕೋರ್ಟ್

Bar & Bench

ಸಿಕ್ಕಿಂನಲ್ಲಿನ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಜನವರಿ 13ರಂದು ತಾನು ನೀಡಿದ್ದ ತೀರ್ಪಿನಲ್ಲಿ ಸಿಕ್ಕಿಂ ನೇಪಾಳಿಗಳನ್ನು (ಸಿಕ್ಕಿಂನಲ್ಲಿ ನೆಲೆಸಿ ಅಲ್ಲಿನ ನಿವಾಸಿಗಳೇ ಆಗಿರುವ ನೇಪಾಳಿ ಮೂಲದ ಮಂದಿ) ವಿದೇಶಿ ಮೂಲದವರು ಎಂದಿದ್ದ ಉಲ್ಲೇಖವನ್ನು ಸುಪ್ರೀಂ ಕೋರ್ಟ್‌ ಬುಧವಾರ ತೆಗೆದುಹಾಕಿದೆ [ಭಾರತ್‌ ಬಾಸ್ನೆಟ್‌ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸಿಕ್ಕಿಂ ನೇಪಾಳಿಗರನ್ನು ವಿದೇಶಿ ಮೂಲದವರು ಎಂದಿದ್ದ ತೀರ್ಪಿನ ಬಗ್ಗೆ ಸಿಕ್ಕಿಂ ರಾಜ್ಯದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಸಿಕ್ಕಿಂನ ಅಡ್ವೊಕೇಟ್‌ ಜನರಲ್‌ ಆಗಿದ್ದ ಸುದೇಶ್‌ ಜೋಶಿ ಅವರ ರಾಜಿನಾಮೆಗೂ ಕಾರಣವಾಗಿತ್ತು.

ತೀರ್ಪನ್ನು ತಿದ್ದುವಂತೆ ಕೆಲವು ಸಿಕ್ಕಿಂ- ನೇಪಾಳಿ ವ್ಯಕ್ತಿಗಳು ಅಲ್ಲದೆ ಸಿಕ್ಕಿಂ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಅದನ್ನು ಮಾರ್ಪಡಿಸಿತು. ತಿದ್ದುಪಡಿ ಮಾಡುವ ಮೂಲಕ ತೀರ್ಪಿನ 10ಎ ಮತ್ತು 68.8 ನೇ ಪ್ಯಾರಾದಲ್ಲಿರುವ ಕೆಲ ಪದಗಳನ್ನು ಸರಿಪಡಿಸುವುದು ನ್ಯಾಯಸಮ್ಮತ ಹಾಗೂ ಸೂಕ್ತ ಎಂದು ಭಾವಿಸುವುದಾಗಿ ಪೀಠ ನುಡಿಯಿತು.

10ಎ  ಪ್ಯಾರಾದ ಎರಡನೇ ವಾಕ್ಯವನ್ನು ಅಳಿಸಲಾಗಿದೆ. 68.8ನೇ ಪ್ಯಾರಾದಲ್ಲಿರುವ, 'ಪ್ರಸ್ತುತ ಹಣಕಾಸು ವರ್ಷದಿಂದ ಅಂದರೆ, 1ನೇ ಏಪ್ರಿಲ್, 2022ರಿಂದ…' ಎಂಬ ವಾಕ್ಯವನ್ನು ಅಳಿಸಲಾಗಿದೆ ಎಂದ ಪೀಠ ಆದೇಶದ ಹೊಸ ದೃಢೀಕೃತ ಪ್ರತಿಯನ್ನು ನೀಡಲು ಕಚೇರಿಗೆ ಆದೇಶ ನೀಡಿತು.

ಮೂಲ ಅರ್ಜಿಯಲ್ಲಿ ದೋಷಗಳು ಇದ್ದುದರಿಂದ ತೀರ್ಪಿನಲ್ಲಿಯೂ ದೋಷ ನುಸುಳಿದೆ ಎಂದು ನ್ಯಾಯಾಲಯ ತಿಳಿಸಿತು. ಸುಮಾರು 25 ತಿದ್ದುಪಡಿಗಳನ್ನು ಮಾಡುವ ಮೂಲಕ ಅರ್ಜಿಯನ್ನು ಸರಿಪಡಿಸಲಾಗಿದ್ದರೂ ತಿದ್ದುಪಡಿ ಮಾಡಿದ ಅರ್ಜಿಯನ್ನು ನ್ಯಾಯಾಲಯದ ಗಮನಕ್ಕೆ ತಂದಿರಲಿಲ್ಲ ಎಂದು ಪೀಠ ಹೇಳಿತು. ಸಿಕ್ಕಿಂನ ಮೂಲನಿವಾಸಿಗಳಲ್ಲಿ ಸಿಕ್ಕಿಂ ನೇಪಾಳಿಗಳ ಸಂಖ್ಯೆ ಶೇ. 70 ಇದ್ದು ಇವರನ್ನು ವಿದೇಶಿಯರು ಎನ್ನುವುದು ಸತ್ಯಕ್ಕೆ ದೂರವಾಗುತ್ತದೆ ಎಂದು ಮಾರ್ಪಡಿಸಲಾದ ಅರ್ಜಿಯಲ್ಲಿ ಹೇಳಲಾಗಿತ್ತು.

ರಾಜ್ಯದ ಹೊರಗಿನ ವ್ಯಕ್ತಿಗಳನ್ನು ವಿವಾಹವಾದ ಸಿಕ್ಕಿಂ ಮಹಿಳೆಯರಿಗೆ ಮತ್ತು ಸಿಕ್ಕಿಂ ಸಬ್ಜೆಕ್ಟ್ಸ್‌ ರಿಜಿಸ್ಟ್ರಾರ್‌ನಲ್ಲಿ ಹೆಸರು ದಾಖಲಿಸದ ಹಳೆಯ ವಲಸಿಗರಿಗೆ ತೆರಿಗೆ ವಿನಾಯಿತಿ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾ. ನಾಗರತ್ನ ಅವರು ನೀಡಿದ್ದ ಸಹಮತದ ತೀರ್ಪಿನ ಭಾಗವಾಗಿತ್ತು ಈ ವಿವಾದಾತ್ಮಕ ಪ್ಯಾರಾ.