ED and Supreme Court 
ಸುದ್ದಿಗಳು

ನಸುಕಿನ 3 ಗಂಟೆಯವರೆಗೂ ವಿಚಾರಣೆ: ಬಾಂಬೆ ಹೈಕೋರ್ಟ್‌ ಬಳಿಕ ಸುಪ್ರೀಂ ಕೋರ್ಟ್‌ ಕೂಡ ಇ ಡಿಗೆ ಛೀಮಾರಿ

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯೊಬ್ಬರನ್ನು ಹೊತ್ತಲ್ಲದ ಹೊತ್ತಿನಲ್ಲಿ ವಿಚಾರಣೆ ನಡೆಸಿದ್ದಕ್ಕೆ ಜಾರಿ ನಿರ್ದೇಶನಾಲಯವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ [ರಾಮ್ ಇಸ್ರಾನಿ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].

ಆರೋಪಿಯ ವಿರುದ್ಧದ ಆರೋಪಗಳ ವಿಚಾರಣಾರ್ಹತೆಯ ಮೇಲೆ ತಾನು ಮಾತನಾಡುತ್ತಿಲ್ಲ ಬದಲಿಗೆ ವಿಸ್ತೃತ ಕಾಳಜಿಯೊಂದಿಗೆ ಈ ವಿಚಾರ ಪ್ರಸ್ತಾಪಿಸುತ್ತಿರುವುದಾಗಿ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿದೆ.

ರಾತ್ರಿಯಿಡೀ ವಿಚಾರಣೆ ನಡೆಸಿ ಬೆಳಗಿನ ಜಾವ ತಮ್ಮನ್ನು ಬಂಧಿಸಿದ್ದನ್ನು ಪ್ರಶ್ನಿಸಿ 64 ವರ್ಷದ ಉದ್ಯಮಿಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯನದಲ್ಲಿ ನಡೆಯಿತು.

ತಮ್ಮ ಬಂಧನ ಪ್ರಶ್ನಿಸಿ ಅವರು ಸಲ್ಲಿಸಿದ್ದಅರ್ಜಿಯನ್ನು ಕೆಲ ದಿನಗಳ ಹಿಂದೆ ತಿರಸ್ಕರಿಸಿದ್ದ ಬಾಂಬೆ ಹೈಕೋರ್ಟ್‌ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವಂತೆ ಸೂಚಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್‌ ಈಚೆಗೆ ಸೂಚಿಸಿತ್ತು. ಆ ವೇಳೆ ಸುಪ್ರೀಂ ಕೋರ್ಟ್‌ ರಜಾಕಾಲೀನ ಪೀಠದೆದುರು ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ನೀಡಲಾಗಿತ್ತು.

ಪ್ರಸ್ತುತ ಮಧ್ಯಂತರ ಆದೇಶದ ವಿಚಾರವನ್ನು ತಾನು ಪರಿಗಣಿಸುವುದಿಲ್ಲ. ಬೇಸಿಗೆ ರಜೆ ಬಳಿಕ ಅರ್ಹತೆಯ ಮೇಲೆ ಪ್ರಕರಣ ಆಲಿಸುವುದಾಗಿ ತಿಳಿಸಿದ ನ್ಯಾಯಾಲಯ ದಾವೆಯನ್ನು ಜುಲೈಗೆ ಮುಂದೂಡಿತು.

ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಇಸ್ರಾನಿ ಅವರನ್ನು ಬಂಧಿಸಲಾಗಿತ್ತು.