Supreme Court, Couples
Supreme Court, Couples 
ಸುದ್ದಿಗಳು

ವಿವಾಹ ಸರಿಪಡಿಸಲಾಗದಷ್ಟು ಮುರಿದುಬಿದ್ದಿದ್ದರೆ 142ನೇ ವಿಧಿ ಬಳಸಿ ಸುಪ್ರೀಂ ವಿಚ್ಛೇದನ ನೀಡಬಹುದು: ಸಾಂವಿಧಾನಿಕ ಪೀಠ

Bar & Bench

ವಿಚ್ಛೇದನ ಪಡೆಯಲಿಚ್ಛಿಸಿದವರು ಪರಸ್ಪರ ಬಾಳಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಸಹಮತದ ವಿಚ್ಛೇದನ ನೀಡಲು ಸಂವಿಧಾನದ 142ನೇ ವಿಧಿ ಬಳಸಿ ಸುಪ್ರೀಂ ಕೋರ್ಟ್‌ ತನ್ನ ಪೂರ್ಣ ಅಧಿಕಾರ ಚಲಾಯಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಸೋಮವಾರ ಮಹತ್ವದ ತೀರ್ಪು ನೀಡಿದೆ [ಶಿಲ್ಪಾ ಶೈಲೇಶ್‌ ಮತ್ತು ವರುಣ್‌ ಶ್ರೀನಿವಾಸನ್‌ ನಡುವಣ ಪ್ರಕರಣ].

ಮೇಲೆ ಹೇಳಿದಂತಹ ಸಂದರ್ಭದಲ್ಲಿ ಹಿಂದೂ ವಿವಾಹ ಕಾಯಿದೆಯಡಿ ವಿಚ್ಛೇದನಕ್ಕಾಗಿ ನಿಗದಿಪಡಿಸಿದ ಆರು ತಿಂಗಳ ಅವಧಿಯನ್ನು ಸ್ಥಗಿತಗೊಳಿಸಬಹುದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಮ್ ನಾಥ್ ಹಾಗೂ ಜೆ ಕೆ ಮಾಹೇಶ್ವರಿ ಎಂದು ಅವರಿದ್ದ ಸಾಂವಿಧಾನಿಕ ಪೀಠ ಹೇಳಿದೆ.

ಸಂವಿಧಾನದ 142ನೇ ವಿಧಿಯನ್ನು ಮೂಲಭೂತ ಹಕ್ಕುಗಳ ಮೂಸೆಯಲ್ಲಿ ನೋಡಬೇಕು. ಸಂವಿಧಾನದ ಅತಿಕ್ರಮಿಸಲಾಗದ ಕಾರ್ಯವನ್ನು ಇದು ಉಲ್ಲಂಘಿಸಬೇಕು. ನ್ಯಾಯಾಲಯವು ಇದರಡಿ ಹೊಂದಿರುವ ಅಧಿಕಾರವು ನ್ಯಾಯದಾನವನ್ನು ಪೂರ್ಣಗೊಳಿಸುವ ಶಕ್ತಿಯನ್ನು ನೀಡಿದೆ” ಎಂದು ಪೀಠ ನುಡಿದಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13-ಬಿ ಅಡಿಯಲ್ಲಿ ಸೂಚಿಸಿದಂತೆ ವಿಚ್ಛೇದನ ಅಪೇಕ್ಷಿಸುವ ವ್ಯಕ್ತಿಗಳು ವಿಚ್ಛೇದನಕ್ಕಾಗಿ ಕಡ್ಡಾಯವಾಗಿ ಆರು ತಿಂಗಳ ಅವಧಿಯವರೆಗೆ ಕಾಯಬೇಕಿತ್ತು. ಇದನ್ನು ಪ್ರಶ್ನಿಸಲಾಗಿತ್ತು. ಜೊತೆಗೆ ಕೌಟುಂಬಿಕ ನ್ಯಾಯಾಲಯಗಳ ಮೆಟ್ಟಿಲೇರದೆಯೂ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯಲು ಸುಪ್ರೀಂ ಕೋರ್ಟ್‌ಗೆ ಇರುವ ಸಂಪೂರ್ಣ ಅಧಿಕಾರದ ಬಳಕೆ ಕುರಿತಂತೆ ಅರ್ಜಿ ಸಲ್ಲಿಸಲಾಗಿತ್ತು.

ಸಂವಿಧಾನದ 142ನೇ ವಿಧಿಯು ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಇರುವ ಯಾವುದೇ ದಾವೆ ಅಥವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನ್ಯಾಯ ಒದಗಿಸುವುದಕ್ಕಾಗಿ ಅಗತ್ಯ ತೀರ್ಪು ಮತ್ತು ಆದೇಶ ನೀಡಲು ಅದಕ್ಕೆ ಅಧಿಕಾರ ನೀಡುತ್ತದೆ.

ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ತನ್ನ ಅಧಿಕಾರ ಚಲಾಯಿಸಬಹುದೇ ಮತ್ತು ಅಂತಹ ಅಧಿಕಾರಗಳ ವಿಶಾಲ ಮಾನದಂಡಗಳ ಕುರಿತಾದ ವಿಚಾರಗಳನ್ನು ಪ್ರಕರಣ ಒಳಗೊಂಡಿತ್ತು.

ನ್ಯಾಯಮೂರ್ತಿಗಳಾದ ಶಿವ ಕೀರ್ತಿ ಸಿಂಗ್ ಮತ್ತು ಆರ್ ಭಾನುಮತಿ ಅವರನ್ನೊಳಗೊಂಡ ವಿಭಾಗೀಯ ಪೀಠ ಐದು ವರ್ಷಗಳ ಹಿಂದೆ ಅಂದರೆ ಜೂನ್ 29, 2016ರಂದು ಈ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.

ವಾದಗಳನ್ನು ಆಲಿಸಿದ್ದ, ಸಾಂವಿಧಾನಿಕ ಪೀಠ ತನ್ನ ತೀರ್ಪನ್ನು ಸೆಪ್ಟೆಂಬರ್ 29, 2022ರಲ್ಲಿ ತೀರ್ಪು ಕಾಯ್ದಿರಿಸಿತ್ತು.

ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಹಿರಿಯ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್, ವಿ ಗಿರಿ, ಕಪಿಲ್ ಸಿಬಲ್, ದುಷ್ಯಂತ್ ದವೆ  ಹಾಗೂ ಮೀನಾಕ್ಷಿ ಅರೋರಾ ಅವರನ್ನು ಅಮಿಕಸ್‌ಕ್ಯೂರಿಯನ್ನಾಗಿ ನೇಮಿಸಲಾಗಿತ್ತು. ಪ್ರಕರಣದಲ್ಲಿ ಹಿರಿಯ ವಕೀಲರಾದ ವಿ ಮೋಹನಾ ಮತ್ತು ಜೇ ಸಾವ್ಲಾ ಮತ್ತು ವಕೀಲ ಅಮೋಲ್ ಚಿತಾಳೆ ಕೂಡ ವಾದ ಮಂಡಿಸಿದ್ದರು.