CJI DY Chandrachud, Justice JB Pardiwala,, Justice Manoj Misra 
ಸುದ್ದಿಗಳು

ಒಂದು ಸಾವಿರ ಕೋಟಿ ತೆರಿಗೆ ವಂಚನೆ ಪ್ರಕರಣ: ಆರೋಪಿಗೆ ಸುಪ್ರೀಂ ಕೋರ್ಟ್ ಜಾಮೀನು

Bar & Bench

ನಕಲಿ ಸಂಸ್ಥೆಗಳ ಜಾಲವನ್ನೇ ಸೃಷ್ಟಿಸಿ ಅದರ ಮೂಲಕ ಸುಮಾರು ₹1,032 ಕೋಟಿಗಳಷ್ಟು ತೆರಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ  [ಅಶುತೋಷ್ ಗಾರ್ಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]. ಆರೋಪಿ ಗಾರ್ಗ್‌ ತೆರಿಗೆ ವಂಚನೆಗಾಗಿ 294 ನಕಲಿ ಸಂಸ್ಥೆಗಳನ್ನು ಸೃಷ್ಟಿಸಿದ್ದರು.

ಸರಕು ಮತ್ತು ಸೇವಾ ತೆರಿಗೆ ಕಾಯಿದೆಯಡಿ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ ನವೆಂಬರ್ 2023 ರಲ್ಲಿ ಬಂಧಿಸಿದ್ದ ಅಶುತೋಷ್ ಗಾರ್ಗ್‌ಗೆ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಜಾಮೀನು ನೀಡಿತು.

ಅಪರಾಧಕ್ಕೆ ಗರಿಷ್ಠ ಐದು ವರ್ಷ ಸಜೆ ವಿಧಿಸಬಹುದಾಗಿದ್ದು ಆರೋಪಿ ಈಗಾಗಲೇ ಅನುಭವಿಸಿರುವ ಸೆರೆವಾಸವನ್ನು ಗಮನಿಸಿ ಆತ ಇನ್ನು ಮುಂದೆಯೂ ಜೈಲು ಶಿಕ್ಷೆ ವಿಧಿಸುವುದು ಸೂಕ್ತವಾಗದು ಎಂದ ನ್ಯಾಯಾಲಯ ಅರ್ಜಿದಾರನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ರಾಜಸ್ಥಾನ ಹೈಕೋರ್ಟ್ ಈ ಹಿಂದೆ ಗಾರ್ಗ್‌ಗೆ ಜಾಮೀನು ನಿರಾಕರಿಸಿತ್ತು. ಭಾರೀ ಪಿತೂರಿ ಮತ್ತು ಸಾರ್ವಜನಿಕ ಖಜಾನೆಗೆ ಭಾರಿ ನಷ್ಟವನ್ನು ಒಳಗೊಂಡಿರುವ ಆರ್ಥಿಕ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನುಡಿದಿತ್ತು. ಈ ಹಿನ್ನೆಲೆಯಲ್ಲಿ ಗಾರ್ಗ್‌ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.