Arvind kejriwal, Bail Granted 
ಸುದ್ದಿಗಳು

ದೆಹಲಿ ಅಬಕಾರಿ ನೀತಿ ಕುರಿತ ಸಿಬಿಐ ಪ್ರಕರಣ: ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್‌ ಜಾಮೀನು

ಜಾಮೀನು ನೀಡಿದ್ದರೂ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದ್ದು ಸಿಂಧುವೇ ಆಗಿದ್ದು ಅದು ಸಂಬಂಧಿತ ಕಾರ್ಯವಿಧಾನದ ಕಾನೂನುಗಳ ಅನುಸಾರವಾಗಿಯೇ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೂಡಿದ್ದ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಅಧಿನಾಯಕ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ [ಅರವಿಂದ್ ಕೇಜ್ರಿವಾಲ್ ಮತ್ತು ಸಿಬಿಐ ನಡುವಣ ಪ್ರಕರಣ]

ಇದೇ ವೇಳೆ, ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿದ್ದರೂ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದ್ದು ಸಿಂಧುವೇ ಆಗಿದ್ದು ಅದು ಸಂಬಂಧಿತ ಪ್ರಕ್ರಿಯಾತ್ಮಕ ಕಾನೂನುಗಳ ಅನುಸಾರವಾಗಿಯೇ ಇದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿದೆ.

ಸಿಬಿಐ ತಮ್ಮನ್ನು ಬಂಧಿಸಿರುವುದರ ಸಿಂಧುತ್ವ ಹಾಗೂ ತಮಗೆ ಜಾಮೀನು ನೀಡುವಂತೆ ಕೋರಿ ಕೇಜ್ರಿವಾಲ್‌ ಅವರು ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಎರಡನೇ ಅರ್ಜಿಗೆ ಸಮ್ಮತಿಸಿರುವ ನ್ಯಾಯಾಲಯ ಮೊದಲನೆಯ ಅರ್ಜಿಯನ್ನು ತಿರಸ್ಕರಿಸಿದೆ.

ಈಗಾಗಲೇ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ವ್ಯಕ್ತಿಯನ್ನು ತನಿಖೆಯ ಉದ್ದೇಶಕ್ಕಾಗಿ ಬಂಧಿಸಲು ಯಾವುದೇ ಅಡ್ಡಿಯಿಲ್ಲ. ಸಿಬಿಐ ತಮ್ಮ ಅರ್ಜಿಯಲ್ಲಿ ನ್ಯಾಯಾಂಗದ ಆದೇಶವಿದ್ದುದರಿಂದ ಬಂಧನ ಮಾಡಬೇಕಾಯಿತು ಎಂದು ತಿಳಿಸಿದೆ. ಇದು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌  41 (ಎ) (3) ಉಲ್ಲಂಘನೆಯಲ್ಲ ಎಂಬುದಾಗಿ ನ್ಯಾಯಾಲಯ ವಿವರಿಸಿದೆ.

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಾರೆಂಟ್‌ ಹೊರಡಿಸಿದ್ದಾಗ ತನಿಖಾ ಸಂಸ್ಥೆ ಅದಕ್ಕೆ ಕಾರಣ ನೀಡುವುದರಿಂದ ಮುಕ್ತವಾಗಿರುತ್ತದೆ. ಅಪೀಲುದಾರರ ಬಂಧನ ಯಾವುದೇ ಪ್ರಕ್ರಿಯಾತ್ಮಕ ಲೋಪದಿಂದ ಬಳಲುತ್ತಿಲ್ಲ. ಹೀಗಾಗಿ ಬಂಧನ ಮಾನ್ಯವಾಗಿದೆ ಎಂದು ಅದು ಹೇಳಿದೆ.

ಇದೇ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಿಆರ್‌ಎಸ್‌ ನಾಯಕಿ ಕೆ ಕವಿತಾ, ಎಎಪಿ ನಾಯಕರಾದ ಸಂಜಯ್‌ ಸಿಂಗ್‌, ವಿಜಯ್‌ ನಾಯರ್‌ ಅವರಿಗೂ ಸುಪ್ರೀಂ ಕೋರ್ಟ್‌ ಈಗಾಗಲೇ ಜಾಮೀನು ನೀಡಿದೆ.