Supreme Court and Zee news
Supreme Court and Zee news 
ಸುದ್ದಿಗಳು

ರಾಹುಲ್‌ ಗಾಂಧಿ ವಿರುದ್ಧದ ಕಾರ್ಯಕ್ರಮ: ಜೀ ನ್ಯೂಸ್‌ ಸಂಪಾದಕ ರಜನೀಶ್‌ಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್‌

Bar & Bench

ಉದಯ್‌ಪುರದ ಕನ್ಹಯ್ಯ ಲಾಲ್‌ ತೇಜಿ ಕೊಲೆ ಆರೋಪಿಗಳನ್ನು ಕ್ಷಮಿಸಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ ಎಂಬ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕೆ ಜೀ ನ್ಯೂಸ್‌ ಸಂಪಾದಕ ರಜನೀಶ್‌ ಅಹುಜಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಿದಂತೆ ಶುಕ್ರವಾರ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ.

ಅಹುಜಾ ಮನವಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯವು ಪೀಠವು ಸುದ್ದಿ ವಾಚಕ ರೋಹಿತ್‌ ರಂಜನ್‌ ಮನವಿ ಜೊತೆಗೆ ಹಾಲಿ ಮನವಿಯನ್ನು ಸೇರಿಸಲು ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.

“ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ಅಥವಾ ಮುಂದೆ ದಾಖಲಾಗಬಹುದಾದ ಪ್ರಕರಣದಲ್ಲಿ ಸಂಪಾದಕರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಕೇಂದ್ರ ಮತ್ತು ರಾಜಸ್ಥಾನ, ಛತ್ತೀಸಗಢ ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ” ಎಂದು ಪೀಠ ಹೇಳಿದೆ.

ಅಹುಜಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ದವೆ ಅವರು “ಅಹುಜಾ ವಿರುದ್ಧ ಛತ್ತೀಸಗಢದ ರಾಯಪುರ, ರಾಜಸ್ಥಾನದ ಸಿಕಾರ್‌ನಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದರು.

ಉದಯಪುರದಲ್ಲಿ ಕನ್ಹಯ್ಯ ಲಾಲ್‌ ತೇಜಿ ಅವರನ್ನು ಕೊಲೆ ಮಾಡಿದವರನ್ನು ಕ್ಷಮಿಸಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ ಎಂದು ಜೀ ನ್ಯೂಸ್‌ ಸುದ್ದಿ ಪ್ರಸಾರ ಮಾಡಿತ್ತು. ಕೇರಳದಲ್ಲಿ ತಮ್ಮ ಕಚೇರಿಯನ್ನು ಧ್ವಂಸಗೊಳಿಸಿದ್ದವರನ್ನು ಕ್ಷಮಿಸಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದರೇ ವಿನಾ ತೇಜಿ ಕೊಲೆಗಾರರನ್ನಲ್ಲ. ಆನಂತರ, ವಾಹಿನಿಯು ಕ್ಷಮೆ ಕೋರಿತ್ತು.