ಸುದ್ದಿಗಳು

ಪೆಗಸಸ್‌ ಹಗರಣ: ಮುಂದಿನ ವಾರ ಪ್ರಕರಣವನ್ನು ಆಲಿಸಲು ಸಮ್ಮತಿಸಿದ ಸುಪ್ರೀಂ ಕೋರ್ಟ್

Bar & Bench

ಪೆಗಸಸ್‌ ಬೇಹುಗಾರಿಕೆ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆಗೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ಹಿಂದೂ ಸಮೂಹದ ನಿರ್ದೇಶಕರಾದ ಎನ್‌ ರಾಮ್‌ ಹಾಗೂ ಏಶಿಯಾ ನೆಟ್‌ನ ಸ್ಥಾಪಕರಾದ ಶಶಿಕುಮಾರ್‌ ಅವರು ಹಗರಣದ ಕುರಿತು ತನಿಖೆ ನಡೆಸಲು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರನ್ನು ಅರ್ಜಿಯ ಸಂಬಂಧ ವಿಚಾರಣೆಗೆ ಕೋರಿದರು. ಪ್ರಕರಣವನ್ನು ಮುಂದಿನ ವಾರ ವಿಚಾರಣೆಗೆ ಪಟ್ಟಿ ಮಾಡಲು ಸಿಜೆಐ ರಮಣ ಅವರು ಸಮ್ಮತಿಸಿದರು.

ಸಿಬಲ್‌ ಅವರು ನ್ಯಾಯಪೀಠವನ್ನು ಉದ್ದೇಶಿಸಿ, “ನಾಗರಿಕರ, ರಾಜಕಾರಣಿಗಳ, ವಿರೋಧ ಪಕ್ಷಗಳ ನಾಯಕರ, ಪತ್ರಕರ್ತರ ಹಾಗೂ ನ್ಯಾಯಾಲಯದ ಸಿಬ್ಬಂದಿಗಳ ಪ್ರಜಾ ಸ್ವಾತಂತ್ರ್ಯದ ಮೇಲೆ ಕಣ್ಗಾವಲು ಹಾಕಲಾಗಿದೆ. ಈ ಸಂಗತಿಯು ದೇಶದೆಲ್ಲೆಡೆ ಮಾತ್ರವಲ್ಲದೆ ಜಾಗತಿಕವಾಗಿಯೂ ಸದ್ದು ಮಾಡುತ್ತಿದ್ದು ತುರ್ತಾಗಿ ಪ್ರಕರಣವನ್ನು ಆಲಿಸಬೇಕಿದೆ,” ಎಂದು ಕೋರಿದರು.

ಇದಕ್ಕೆ ಸಮ್ಮತಿಸಿದ ಸಿಜೆಐ ಎನ್ ವಿ ರಮಣ ಅವರು, “ಮುಂದಿನ ವಾರ ಪ್ರಕರಣವನ್ನು ನಾವು ಆಲಿಸಲಿದ್ದೇವೆ,” ಎಂದರು.