ಭಾರತದ ಸರ್ವೋಚ್ಚ ನ್ಯಾಯಾಲಯ
ಭಾರತದ ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಪ್ರಕರಣದ ದಾಖಲೆ ಪ್ರತಿಗಳಲ್ಲಿ ಕಕ್ಷಿದಾರರ ಜಾತಿ, ಧರ್ಮ ನಮೂದಿಸದಂತೆ ಎಲ್ಲ ನ್ಯಾಯಾಲಯಗಳಿಗೆ ಸುಪ್ರೀಂ ಆದೇಶ

Bar & Bench

ಪ್ರಕರಣದ ದಾಖಲೆಗಳಲ್ಲಿ ಕಕ್ಷಿದಾರರ ಜಾತಿ ಅಥವಾ ಧರ್ಮ ಉಲ್ಲೇಖಿಸುವ ಅಭ್ಯಾಸ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತನ್ನ ರಿಜಿಸ್ಟ್ರಿ, ಎಲ್ಲಾ ಹೈಕೋರ್ಟ್‌ಗಳು ಹಾಗೂ ಅಧೀನ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು ಇಂತಹ ಅಭ್ಯಾಸವನ್ನು ತ್ಯಜಿಸಿ ಅದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

"ಈ ನ್ಯಾಯಾಲಯ ಅಥವಾ ಕೆಳಗಿನ ನ್ಯಾಯಾಲಯಗಳಲ್ಲಿ ಯಾವುದೇ ಕಕ್ಷಿದಾರರ ಜಾತಿ / ಧರ್ಮ ಉಲ್ಲೇಖಿಸಲು ಯಾವುದೇ ಸಕಾರಣವಿಲ್ಲ. ಅಂತಹ ರೂಢಿಯಿಂದ ದೂರ ಇರಬೇಕು ಮತ್ತು ಅದನ್ನು ತಕ್ಷಣ ನಿಲ್ಲಿಸಬೇಕು... ಹೈಕೋರ್ಟ್ ಅಥವಾ ಅಧೀನ ನ್ಯಾಯಾಲಯಗಳಲ್ಲಿ ಸಲ್ಲಿಸಲಾದ ಯಾವುದೇ ಅರ್ಜಿ, ದಾವೆ ಇಲ್ಲವೇ ವಿಚಾರಣೆ ವೇಳೆ ಕಕ್ಷಿದಾರರ ದಾಖಲೆಪ್ರತಿಗಳಲ್ಲಿ ಕಕ್ಷಿದಾರರ ಜಾತಿ / ಧರ್ಮ ಉಲ್ಲೇಖಿಸದಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಲಾಗಿದೆ" ಎಂಬುದಾಗಿ ನ್ಯಾಯಾಲಯ ಆದೇಶಿಸಿದೆ.

ಯಾವುದೇ ದಾವೆದಾರನ ಜಾತಿ ಇಲ್ಲವೇ ಧರ್ಮ ಉಲ್ಲೇಖಿಸಲು ಯಾವುದೇ ಸಕಾರಣವಿಲ್ಲ. ಅಂತಹ ಅಭ್ಯಾಸ ದೂರವಿಡಬೇಕು ಮತ್ತು ತಕ್ಷಣದಿಂದಲೇ ಅದಕ್ಕೆ ಅಂತ್ಯ ಹಾಡಬೇಕು.
ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ

ರಾಜಸ್ಥಾನದ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇರುವ ವೈವಾಹಿಕ ವ್ಯಾಜ್ಯಕ್ಕೆ ಸಂಬಂಧಿಸಿದ ವರ್ಗಾವಣೆ ಅರ್ಜಿಯನ್ನು ಅನುಮತಿಸುವಾಗ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಪಂಜಾಬ್‌ನ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲು ಅನುಮತಿ ನೀಡುವಾಗ ಸುಪ್ರೀಂ ಕೋರ್ಟ್ ಪಕ್ಷಕಾರರಾಗಿದ್ದ ಗಂಡ ಹೆಂಡತಿಯ ಜಾತಿಯನ್ನು ಮೆಮೋದಲ್ಲಿ ಉಲ್ಲೇಖಿಸಿದ್ದನ್ನು ಕಂಡು ಆಶ್ಚರ್ಯವ್ಯಕ್ತಪಡಿಸಿತು.

ಕುಟುಂಬ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಕರಣ ದಾಖಲೆಗಳಲ್ಲಿ ಈ ವಿವರವನ್ನು ಉಲ್ಲೇಖಿಸಿರುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿಯೂ ಅದನ್ನು ಉಲ್ಲೇಖಿಸದೆ ಬೇರೆ ದಾರಿ ಇಲ್ಲ ಎಂದು ಪ್ರಕರಣದ ಕಕ್ಷಿದಾರೆ ಪತ್ನಿ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದರು.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಕರಣ ದಾಖಲೆಗಳಲ್ಲಿ ಈ ವಿವರ ಉಲ್ಲೇಖಿಸದಿದ್ದರೆ, ಕೌಟುಂಬಿಕ ನ್ಯಾಯಾಲಯದ ಮುಂದೆ ಪ್ರಕರಣದ ದಾಖಲೆಗಳಿಗೆ ಹೋಲಿಸಿದರೆ ಪ್ರಕರಣದ ವಿವರಗಳಲ್ಲಿನ ವ್ಯತ್ಯಾಸಗಳಿಗಾಗಿ ನ್ಯಾಯಾಲಯದ ರಿಜಿಸ್ಟ್ರಿಯಿಂದ ಆಕ್ಷೇಪಣೆಗಳನ್ನು ಎದುರಿಸುವ ಅಪಾಯವಿದೆ ಎಂದು ವಕೀಲರು ವಿವರಿಸಿದರು.

ಕೆಳ ನ್ಯಾಯಾಲಯಗಳಲ್ಲಿ ಅಂತಹ ವಿವರ ಉಲ್ಲೇಖಿಸಿದ್ದರೂ ಸಹ ಸುಪ್ರೀಂ ಕೋರ್ಟ್‌ ಮುಂದೆ ಉಲ್ಲೇಖಿಸುವಾಗ ಅದನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದಿಷ್ಟವಾಗಿ ಆದೇಶಿಸಿತು. ತನ್ನ ನಿರ್ದೇಶನಗಳನ್ನು ತಕ್ಷಣ ಪಾಲಿಸಲು ವಕೀಲರು ಮತ್ತು ನ್ಯಾಯಾಲಯದ ರಿಜಿಸ್ಟ್ರಿಗೆ ತಿಳಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಈ ಹಿಂದೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠ ರಾಜಸ್ಥಾನ ಹೈಕೋರ್ಟ್‌ ತೀರ್ಪಿನಲ್ಲಿ ಕಕ್ಷಿದಾರರ ಜಾತಿ ವಿವರಗಳನ್ನು ಉಲ್ಲೇಖಿಸಿರುವ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Supreme Court order - January 10, 2024.pdf
Preview