ಉತ್ತರ ಪ್ರದೇಶದಲ್ಲಿ 1,350 ವೃಕ್ಷಾಧಾರಿತ ನೂತನ ಕೈಗಾರಿಕೆಗಳ ಆರಂಭಕ್ಕೆ ಅನುಮತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರ ರದ್ದುಗೊಳಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಕಳೆದ ವಾರ ನಿರಾಕರಿಸಿದೆ [ಉತ್ತರ ಪ್ರದೇಶ ಸರ್ಕಾರ ಮತ್ತು ಉದಯ್ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್ ನಡುವಣ ಪ್ರಕರಣ].
ವೃಕ್ಷಾಧಾರಿತ ನೂತನ ಕೈಗಾರಿಕೆಗಳಿಗೆ ಅನುಮತಿ ನೀಡಿ ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ್ದ ನೋಟಿಸನ್ನು ಎನ್ಜಿಟಿ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಬೆಂಗಳೂರಿನ ಇಂಡಿಯನ್ ಪ್ಲೈವುಡ್ ಇಂಡಸ್ಟ್ರೀಸ್ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಿಂದ (ಐಪಿಐಆರ್ಟಿಐ) ಪಡೆದ ವರದಿಯನ್ನು ಬದಿಗೆ ಸರಿಸಿದ ನಂತರವೇ ಮರ ಆಧಾರಿತ ಹೊಸ ಕೈಗಾರಿಕೆಗಳಿಗೆ ಅನುಮತಿ ನೀಡಲು ರಾಜ್ಯ ಮಟ್ಟದ ಸಮಿತಿ ನಿರ್ಧಾರ ಕೈಗೊಂಡಿರುವುದನ್ನು ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ವಿಭಾಗೀಯ ಪೀಠ ಗಮನಿಸಿತು.
“ನಾವು ವಕೀಲರ ವಾದ ಆಲಿಸಿದ್ದು ನ್ಯಾಯಮಂಡಳಿಯ ತೀರ್ಪಿಗೆ ತಡೆ ನೀಡುವ ಅಗತ್ಯ ಇದೆ ಎಂದು ನಮಗೆ ಅನ್ನಿಸುತ್ತಿಲ್ಲ. ವೃಕ್ಷಾಧಾರಿತ ನೂತನ ಕೈಗಾರಿಕೆಗಳಿಗೆ ಅನುಮತಿ ನೀಡುವ ಮೊದಲು ರಾಜ್ಯ ಮಾಹಿತಿ ಸಂಗ್ರಹಿಸಬೇಕು ಎನ್ನುವ ಮಂಡಳಿಯ ಅಭಿಪ್ರಾಯಕ್ಕೆ ನಮ್ಮ ಸಹಮತವಿದೆ, “ ಎಂದು ನ್ಯಾಯಾಲಯ ಹೇಳಿತು.
ಈ ಕಾರಣಗಳಿಗಾಗಿ ಸರ್ಕಾರಕ್ಕೆ ಮಧ್ಯಂತರ ಪರಿಹಾರ ಒದಗಿಸಲು ನಿರಾಕರಿಸಿದ ನ್ಯಾಯಾಲಯ ಸಮಸ್ಯೆಯ ಪ್ರಾಮುಖ್ಯತೆಯನ್ನು ಪರಿಗಣಿಸಿ, ಪ್ರಕರಣದ ಪಕ್ಷಕಾರರು ಒಪ್ಪಿಗೆ ನೀಡಿದರೆ ಕೋರ್ಟ್ಗಳಿಗೆ ಇರುವ ಬೇಸಿಗೆ ರಜೆಯ ವೇಳೆಯೇ ಅಂತಿಮ ವಿಚಾರಣೆಗೆ ಪಟ್ಟಿ ಮಾಡಬಹುದು, ಇಲ್ಲದೇ ಹೋದರೆ ಈ ವರ್ಷದ ಆಗಸ್ಟ್ಗೆ ಪಟ್ಟಿ ಮಾಡಬಹುದು ಎಂದು ಆದೇಶಿಸಿತು.