Stray dogs
Stray dogs 
ಸುದ್ದಿಗಳು

ಬೀದಿ ನಾಯಿಗಳಿಗೆ ಆಹಾರ ನೀಡಿದರೆ ದಂಡ ವಿಧಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್: ಬಾಂಬೆ ಹೈಕೋರ್ಟ್ ಆದೇಶ ಬದಲು

Bar & Bench

ಮಹಾರಾಷ್ಟ್ರದ ನಾಗಪುರದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವವರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಬುಧವಾರ ಮಾರ್ಪಡಿಸಿದೆ. [ಸ್ವಾತಿ ಸುಧೀರಚಂದ್ರ ಚಟರ್ಜಿ ಇನ್ನಿತರರು ಮತ್ತು ವಿಜಯ್ ಶಂಕರರಾವ್ ತಲೇವರ್ ಮತ್ತಿತರರ ನಡುವಣ ಪ್ರಕರಣ].

ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೀದಿ ನಾಯಿಗಳಿಗೆ ಆಹಾರ ನೀಡಲು ಅನುಮತಿ ಇದ್ದು ಪ್ರಾಣಿಗಳಿಗೆ ಆಹಾರಕ್ಕಾಗಿ ದಂಡದಂತಹ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ತಿಳಿಸಿತು.

“ಬೀದಿ ನಾಯಿಗಳಿಗೆ ಆಹಾರ ನೀಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಆಹಾರ ನೀಡುವ ಮೂಲಕ ತೊಂದರೆ ಉಂಟುಮಾಡುವ ಯಾರ ವಿರುದ್ಧ ಬೇಕಾದರೂ ಕ್ರಮ ಕೈಗೊಳ್ಳಲು ಪುರಸಭೆಗೆ ಸ್ವಾತಂತ್ರ್ಯ ಇದೆ. ಆದರೆ ಆಹಾರ ನೀಡುವವರ ವಿರುದ್ಧ ದಂಡದಂತಹ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು” ಎಂದು ನ್ಯಾಯಾಲಯ ಹೇಳಿತು.

ತಾನು ಗುರುತಿಸಿದ ಸೂಕ್ತ ಸ್ಥಳಗಳಲ್ಲಿ ನಾಗಪುರ ನಗರಸಭೆ (ಎನ್‌ಎಂಸಿ) ಬೀದಿ ನಾಯಿಗಳಿಗೆ ಆಹಾರ ನೀಡಲು ಸಾರ್ವಜನಿಕರಿಗೆ ಅವಕಾಶ ನೀಡುವಂತೆಯೂ ನ್ಯಾಯಲಯ ನಿರ್ದೇಶನ ನೀಡಿತು.

ಈ ಮೂಲಕ, ಬೀದಿನಾಯಿಗಳಿಗೆ ಆಹಾರ ನೀಡುವಂತೆ ಒತ್ತಾಯಿಸುವವರು ಅವುಗಳನ್ನು ದತ್ತುಪಡೆಯಬೇಕು ಎಂದು ಹೈಕೋರ್ಟ್‌ ನಾಗಪುರ ಪೀಠ ಮಾಡಿದ್ದ ಅವಲೋಕನಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತು.

"ಮನುಷ್ಯರು ಇರುವಲ್ಲೆಲ್ಲಾ ಹಿತಾಸಕ್ತಿ ಸಂಘರ್ಷ ಇರುತ್ತದೆ. ಬೀದಿನಾಯಿಗಳಿಂದಲೂ ತಪ್ಪಾಗುತ್ತದೆ, ನಾವು ಎರಡರ ಬಗ್ಗೆಯೂ ಜಾಗೃತರಾಗಿರಬೇಕು, ಬೇರೆ ವಿಚಾರಗಳು ಇರಬಹುದು ... ಆಹಾರ ನೀಡುವ ಜನರಿಗೆ ನೀವು ಅವುಗಳನ್ನು ದತ್ತು ಪಡೆದುಕೊಳ್ಳಿ ಎಂದು ಒತ್ತಾಯಿಸಲು ಸಾಧ್ಯವಿಲ್ಲ" ಎಂಬುದಾಗಿ ನ್ಯಾ. ಖನ್ನಾ ವಿವರಿಸಿದರು.

ಹಾಗಾಗಿ ಯಾವುದೇ ತೊಂದರೆ ಆಗದಂತೆ ನಾಯಿಗಳಿಗೆ ಆಹಾರ ನೀಡುವ ವ್ಯವಸ್ಥೆಯೊಂದನ್ನು ರೂಪಿಸುವಂತೆ ಎನ್‌ಎಂಸಿಗೆ ನ್ಯಾಯಾಲಯ ಸೂಚಿಸಿದೆ.

“ಅವು (ನಾಯಿಗಳು) ಸುತ್ತ ಹೊಂಚುದಾಳಿ ಮಾಡಬಾರದು. ಇಲ್ಲವೇ ಆಕ್ರಮಣಕಾರಿಯಾಗಬಾರದು. ಅಥವಾ ಹಸಿವಿನಿಂದ ಇರಬಾರದು” ಎಂದು ನ್ಯಾಯಾಲಯ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಜೊತೆಗೆ ಮುಂದಿನ ವಿಚಾರಣೆ ದಿನದ ಹೊತ್ತಿಗೆ ನಾಯಿಗಳನ್ನು ದತ್ತು ತೆಗೆದುಕೊಳ್ಳುವ ಮತ್ತು ಅವುಗಳನ್ನು ಪೋಷಿಸುವವರಿಗೆ ದಂಡ ವಿಧಿಸುವ ಹೈಕೋರ್ಟ್‌ ನಿರ್ದೇಶನಗಳ ಕುರಿತು ತನ್ನ ನಿಲುವು ತಿಳಿಸುವಂತೆ ಅದು ಎನ್‌ಎಂಸಿಗೆ ಸೂಚಿಸಿತು.