Supreme court , Marathi
Supreme court , Marathi 
ಸುದ್ದಿಗಳು

ಮರಾಠಿ ನಾಮಫಲಕ ಕಡ್ಡಾಯ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

Bar & Bench

ಎಲ್ಲಾ ಅಂಗಡಿ ಮತ್ತು ಸಂಸ್ಥೆಗಳು ಮರಾಠಿ (ದೇವನಗರಿ ಲಿಪಿ) ನಾಮಫಲಕ ಹಾಕುವುದು ಕಡ್ಡಾಯ ಎಂದು ಆದೇಶ ಮಾಡಿದ್ದ ಮಹಾರಾಷ್ಟ್ರದ ಆದೇಶ ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ರಾಜ್ಯ ಸರ್ಕಾರದ ತೀರ್ಮಾನವನ್ನು ಫೆಬ್ರವರಿ 23ರಂದು ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಚಿಲ್ಲರೆ ವ್ಯಾಪಾರಿಗಳ ಹಿತರಕ್ಷಣಾ ಸಂಸ್ಥೆಗಳ ಒಕ್ಕೂಟ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಕೃಷ್ಣ ಮುರಾರಿ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣ್‌ ಅವರು “ಮರಾಠಿ ನಾಮಫಲಕ ಹೊಂದಿರದ ಅಂಗಡಿ-ಮುಂಗಟ್ಟುಗಳತ್ತ ಕಲ್ಲು ತೂರಾಟ ಮಾಡಲಾಗಿದೆ. ನಮ್ಮ ಅಂಗಡಿಗಳಿಗೆ ಕಲ್ಲು ತೂರಲಾಗಿದೆ. ಭಾಷಾ ಅಲ್ಪಸಂಖ್ಯಾತರಾಗಿರುವ ನಮ್ಮ ಹಕ್ಕುಗಳಲ್ಲಿ ನೀವು ಮಧ್ಯಪ್ರವೇಶಿಸಬಹುದೇ? ಹೊರಗಿನವರು ಚರ್ಚೆಗೆ ಇಳಿಯಲು ಇಚ್ಛೆ ಇಲ್ಲ. ದೆಹಲಿಯಲ್ಲಿರುವ ನಾನು ಮಲೆಯಾಳಿಯಾಗಿದ್ದೇನೆ. ದೇಶದ ಯಾವುದೇ ಮೂಲೆಯಲ್ಲಿಯಾದರೂ ಉಳಿದುಕೊಳ್ಳುವ ಹಕ್ಕು ನನಗಿದೆ” ಎಂದರು.

ಇತರೆ ಭಾಷೆಗಳ ನಾಮಫಲಕಗಳನ್ನು ನಿರ್ಬಂಧಿಸಲಾಗಿಲ್ಲ ಎಂದು ಪೀಠ ಹೇಳಿತು. “ನಿಮ್ಮ ಭಾಷೆಯನ್ನು ನಿಷೇಧಿಸಲಾಗಿದೆಯೇ? ನೀವೇಕೆ ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತಿದ್ದೀರಿ” ಎಂದು ಪೀಠ ಪ್ರಶ್ನಿಸಿತು.

ಅದಕ್ಕೆ ಶಂಕರನಾರಾಯಣ್‌ ಅವರು “ಇತರೆ ಭಾಷೆಗಳ ನಾಮಫಲಕಗಳನ್ನು ನಿಷೇಧಿಸಲಾಗಿಲ್ಲ. ಆದರೆ, ಮರಾಠಿ ನಾಮಫಲಕ ಹಾಕಲು ಖರ್ಚು ಮಾಡಬೇಕಿದ್ದು, ಇದು ನಮ್ಮ ವೈಯಕ್ತಿಕ ಆಯ್ಕೆಯ ಮೇಲಿನ ದಾಳಿಯಾಗಿದೆ. ಮರಾಠಿಯಲ್ಲಿನ ಗಾತ್ರದಷ್ಟೇ ಇತರೆ ಭಾಷೆಗಳ ನಾಮಫಲಕಗಳು ಇರಬೇಕು ಎಂದಿದೆ. ಆದರೆ, ನಾನು ಯಾರಿಗೆ ಸೇವೆ ನೀಡುತ್ತೇನೆ ಎಂಬುದು ನನಗೆ ಬಿಟ್ಟ ವಿಚಾರವಾಗಿರಬೇಕು. ಮರಾಠಿ ನಾಮಫಲಕದ ಮೇಲಿನ ವೆಚ್ಚವು ಅಕ್ರಮವಾಗಿ ನನ್ನ ವೈಯಕ್ತಿಕ ಆಯ್ಕೆಯ ಮೇಲಿನ ದಾಳಿಯಾಗಿದ್ದು, ಇದೊಂದು ರೀತಿಯಲ್ಲಿ ಶಾಖಾಹಾರವನ್ನು ಕೆಲವರ ಮೇಲೆ ಹೇರಿದಂತಿದೆ” ಎಂದರು.

“ಬಾಂಬೆಯಲ್ಲಿ ಎಲ್ಲರಿಗೂ ಮರಾಠಿ ಗೊತ್ತಿದೆ ಎಂದೇನಿಲ್ಲ. ಸಂವಿಧಾನದ 19ನೇ ವಿಧಿಯಡಿ ಹಕ್ಕುಗಳು +ಪರಮೋಚ್ಚ ಅಥವಾ ಅನಿರ್ಬಂಧಿತವಲ್ಲ ಎಂದು ಅವರು ಹೇಳುತ್ತಿದ್ದಾರೆ” ಎಂದರು.

ಮರಾಠಿಯಲ್ಲಿ ನಾಮಫಲಕ ಹಾಕುವುದನ್ನು ಕಡ್ಡಾಯಗೊಳಿಸಲು ಮಹಾರಾಷ್ಟ್ರ ಅಂಗಡಿಗಳು ಮತ್ತು ಸಂಸ್ಥೆಗಳು (ಉದ್ಯೋಗ ನಿಯಂತ್ರಣ ಮತ್ತು ಸೇವ ಷರತ್ತು) ನಿಯಮಗಳ 35ನೇ ನಿಯಮಕ್ಕೆ ಮಹಾರಾಷ್ಟ್ರ ಸರ್ಕಾರವು ತಿದ್ದುಪಡಿ ಮಾಡಿದೆ.