LGBTQ, Madras High Court
LGBTQ, Madras High Court 
ಸುದ್ದಿಗಳು

ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶ: ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣೆ ನಿಯಮಾವಳಿಗೆ ತಮಿಳುನಾಡು ಸರ್ಕಾರ ಅಧಿಸೂಚನೆ

Bar & Bench

ತಮಿಳುನಾಡಿನಲ್ಲಿ ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣೆ ಮತ್ತು ಶಾಸನಬದ್ಧ ಕಲ್ಯಾಣ ಯೋಜನೆಗಳಿಗೆ ಅವಕಾಶ ಕಲ್ಪಿಸವುದಕ್ಕಾಗಿ ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ನಿಯಮಾವಳಿ 2022 ಅನ್ನು ಅಧಿಸೂಚನೆ ಹೊರಡಿಸಿರುವುದಾಗಿ ತಮಿಳುನಾಡು ಸರ್ಕಾರ ಸೋಮವಾರ ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಿದೆ.

ಹೊಸ ನಿಯಮಾವಳಿಯ ಪ್ರತಿಯನ್ನು ನ್ಯಾ. ಎನ್ ಆನಂದ್ ವೆಂಕಟೇಶ್ ಅವರಿಗೆ ಸಲ್ಲಿಸಲಾಗಿದ್ದು, ಅದರ ಪ್ರಕಾರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳ ವಿರುದ್ಧ ಯಾವುದೇ ರೀತಿಯ ತಾರತಮ್ಯ ಎಸಗದಂತೆ ನಿಷೇಧಿಸಲಾಗಿದೆ.

ನ್ಯಾ. ವೆಂಕಟೇಶ್ ಅವರ ಶಿಫಾರಸಿನ ಮೇರೆಗೆ ತೃತೀಯಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ- 2019ರ ನಿಬಂಧನೆಗಳ ಅಡಿ  ನಿಯಮಗಳನ್ನು ರೂಪಿಸಲಾಗಿದೆ. ಎಲ್‌ಜಿಬಿಟಿಟಕ್ಯೂಐಎ+ ಸಮುದಾಯದ ಬಗೆಗಿನ ಕಳಂಕ ತೊಡೆದುಹಾಕಲು ಮತ್ತು ಅವರನ್ನು ಸಮಾನ ನಾಗರಿಕರೆಂಬಂತೆ ಕಾಣಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿತ್ತು.

ಪೊಲೀಸರ ಮೂಲಕ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಣಯ ಸಂಬಂಧ ಹೊಂದಿದ್ದ ಇಬ್ಬರು ಹುಡುಗಿಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ನೀಡಿತ್ತು. ಅರ್ಜಿದಾರರ ಸುರಕ್ಷತೆ ಕಾಯ್ದುಕೊಳ್ಳುವಂತೆ ಆ ಸಂದರ್ಭದಲ್ಲಿ ಸೂಚಿಸಿದ್ದ ಪೀಠ ನೀತಿ ಬದಲಾವಣೆಗೆ ಸಂಬಂಧಿಸಿದಂತೆ ಮನವಿಯ ವ್ಯಾಪ್ತಿಯನ್ನು ವಿಸ್ತರಿಸಿತ್ತು.

ನಿಯಮಾವಳಿಯ ಪ್ರಮುಖಾಂಶಗಳು

  • ಗುರುತಿನ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಲು ಮಂಗಳಮುಯಖಿಯರಿಗೆ ಅನುಕೂಲವಾಗುವಂತೆ  ಮೊಬೈಲ್ ಅಪ್ಲಿಕೇಶನ್ ರೂಪಿಸುವಿಕೆ ಸೇರಿದಂತೆ ಹಲವಾರು ಕಲ್ಯಾಣ ಕ್ರಮಗಳನ್ನು ಸರ್ಕಾರ ಒದಗಿಸಲಿದೆ.

  • ಗುರುತಿನ ಪ್ರಮಾಣಪತ್ರ ಪಡೆಯಲು ಬಯಸುವ ಯಾವುದೇ ಮಂಗಳಮುಖಿಯರು ತಮ್ಮ ಅರ್ಜಿಯನ್ನು 'ತಿರುನಂಗೈ' ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದು.  

  • ಲಿಂಗಪರಿವರ್ತನೆ ಚಿಕಿತ್ಸೆಗೆ ನಿಷೇಧ.

  • ಖಾಸಗಿ, ಸರ್ಕಾರಿ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳ ಕುರಿತು ಕಡ್ಡಾಯವಾಗಿ ಸಂವೇದನೆ ಬೆಳೆಸಿಕೊಳ್ಳಲು ಶಿಕ್ಷಕರು ಮತ್ತು ಸಿಬ್ಬಂದಿಗೆ ತರಬೇತಿ ಒದಗಿಸಬೇಕು.

  • ಲಿಂಗ ತಟಸ್ಥ ವಿಶ್ರಾಂತಿ ಕೊಠಡಿ ಹಾಗೂ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ ನಿರ್ಮಿಸಬೇಕು.

  • ಅರ್ಜಿ ನಮೂನೆಗಳಲ್ಲಿ ತಮ್ಮನ್ನು ತಾವು ತೃತೀಯ ಲಿಂಗಕ್ಕೆ ಸೇರಿದವರೆಂದು ಘೋಷಿಸಲು ಪ್ರತ್ಯೇಕ ಕಾಲಮ್ ರೂಪಿಸಲಾಗುವುದು.

  • ಪುನರ್ವಸತಿ ಕೇಂದ್ರಗಳು ಹಾಗೂ ತಾತ್ಕಾಲಿಕ ವಸತಿ ಕೇಂದ್ರಗಳ ನಿರ್ಮಾಣವನ್ನು ಅಧಿಸೂಚನೆ ಹೊರಡಿಸಿದ ಎರಡು ವರ್ಷಗಳಲ್ಲಿ ನಿರ್ಮಿಸುವುದು.

  • ಸಮಾನ ಉದ್ಯೋಗಾವಕಾಶಗಳ ನಿರ್ಮಾಣ.

ಸೋಮವಾರದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಕೂಡ ʼಎಲ್‌ಜಿಬಿಟಿಟಕ್ಯೂಐಎ+ ಸಮುದಾಯದ ಸದಸ್ಯರು ನಡೆಸುತ್ತಿರುವ ಅಥವಾ ಅವರಿಗಾಗಿ ದುಡಿಯುತ್ತಿರು ಎಲ್ಲಾ ಸರ್ಕಾರೇತರ ಸಂಸ್ಥೆಗಳು ನೋಂದಾಯಿಸಿಕೊಳ್ಳಬೇಕು ಎಂದು  ನಿರ್ದೇಶಿಸಿರುವುದಾಗಿʼ ತಿಳಿಸಿತು. ಪ್ರಕರಣದ ಮುಂದಿನ ವಿಚಾರಣೆ ಮಾ. 13ಕ್ಕೆ ನಿಗದಿಯಾಗಿದೆ.