<div class="paragraphs"><p>Kerala High Court</p></div>

Kerala High Court

 
ಸುದ್ದಿಗಳು

ದುರುದ್ದೇಶವಿಲ್ಲದೆ ವಿದ್ಯಾರ್ಥಿಗಳ ಮೇಲೆ ಮಿತವಾಗಿ ಬಲ ಪ್ರಯೋಗಿಸಿದ ಶಿಕ್ಷಕರಿಗೆ ಶಿಕ್ಷೆ ಸಲ್ಲದು: ಕೇರಳ ಹೈಕೋರ್ಟ್

Bar & Bench

ದುರುದ್ದೇಶವಿಲ್ಲದೆ ವಿದ್ಯಾರ್ಥಿಗಳ ಮೇಲೆ ಮಿತವಾಗಿ ಬಲ ಪ್ರಯೋಗಿಸಿದ ಶಿಕ್ಷಕರನ್ನು ಕ್ರಿಮಿನಲ್‌ ಕಾನೂನು ವಿಚಾರಣೆಗೆ ಒಡ್ಡಲಾಗದು ಅಥವಾ ಜುಲ್ಮಾನೆಯೊಂದಿಗೆ ಶಿಕ್ಷಿಸಲಾಗದು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಜಯಾ ಮತ್ತ ಕೇರಳ ಸರ್ಕಾರ ಇತರರ ನಡುವಣ ಪ್ರಕರಣ].

ಯಾವ ಉದ್ದೇಶಕ್ಕಾಗಿ ಬಲಪ್ರಯೋಗ ಮಾಡಲಾಗಿದೆ ಎಂಬುದನ್ನು ಅರ್ಥೈಸಿಕೊಳ್ಳುವಷ್ಟು ವಯಸ್ಸಿನ ವಿದ್ಯಾರ್ಥಿಗಳಿಗೆ ಅಥವಾ ಮಕ್ಕಳಿಗೆ ಶಿಸ್ತಿನ ಕ್ರಮವಾಗಿ ತಕ್ಕಮಟ್ಟಿನ ಬಲಪ್ರಯೋಗ ಮಾಡಲು ಪಾಲಕರು, ಶಿಕ್ಷಕರು ಮತ್ತು ಪೋಷಕರ ಸ್ಥಾನದಲ್ಲಿರುವ ಇತರ ವ್ಯಕ್ತಿಗಳು ಅರ್ಹರು ಎಂದು ನ್ಯಾ. ಕೌಸರ್ ಎಡಪ್ಪಗತ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

"ತಂದೆ-ತಾಯಿ ಅಥವಾ ಶಾಲಾ ಶಿಕ್ಷಕರು ಮಗುವಿಗೆ ಸೂಕ್ತ ಶಿಕ್ಷೆ ವಿಧಿಸಿದಾಗ ಆ ರೀತಿಯ ಕಡಿಮೆ ಗಂಭೀರ ಅಪರಾಧದಿಂದ ಉಂಟಾಗುವ ತೊಂದರೆಯನ್ನು ನಿಷೇಧಿಸಲು ಸಾಧ್ಯವಿಲ್ಲ. ಇದಕ್ಕೆ ಹೊರತಾದ ಕಾರಣಕ್ಕಾಗಿ ಅಸಮಂಜಸವಾಗಿ ಮತ್ತು ಮನಸೋಇಚ್ಛೆಯಾಗಿ ಬಲಪ್ರಯೋಗ ಮಾಡಿದರೆ ಅದು ಕಾನೂನುಬಾಹಿರವಾಗುತ್ತದೆ. ಪರಿಣಾಮಕಾರಿ ಬೋಧನೆ ಮತ್ತು ಕಲಿಕೆಗೆ ತರಗತಿಯ ಶಿಸ್ತು ಬಹಳ ಮುಖ್ಯ. ಈ ರೀತಿ ದುರುದ್ದೇಶವಿಲ್ಲದೆ ವಿದ್ಯಾರ್ಥಿಗಳ ಮೇಲೆ ಮಿತವಾಗಿ ಬಲ ಪ್ರಯೋಗಿಸಿದ ಶಿಕ್ಷಕರನ್ನು ಕ್ರಿಮಿನಲ್ ಕಾನೂನು ಕ್ರಮಕ್ಕೆ ಒಡ್ಡಲಾಗದು ಅಥವಾ ಜಲ್ಮಾನೆ ಶಿಕ್ಷೆಯೊಂದಿಗೆ ಬಂಧಿಸಲಾಗದು” ಎಂದು ತೀರ್ಪು ಹೇಳಿದೆ.

ಐಪಿಸಿ ಸೆಕ್ಷನ್ 324 ಮತ್ತು ಬಾಲಾಪರಾಧ ಕಾಯಿದೆ ಸೆಕ್ಷನ್‌ 23ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಂದ ತನ್ನನ್ನು ವಿಮುಕ್ತಿ ಮಾಡದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಪರವೂರ್‌ನ ಕರಿಂಬದಂನಲ್ಲಿರುವ ಪ್ರೌಢಶಾಲೆಯೊಂದರ ಅಮಾನತುಗೊಂಡ ಶಿಕ್ಷಕಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ಶಿಕ್ಷಕಿಯನ್ನು ಬಿಡುಗಡೆ ಮಾಡುವಂತೆ ಸೂಚಿಸಿತು.